ಕಿಡ್ನಿ ಕಸಿ ಕಾನೂನಿಗೆ ವಿಶೇಷ ನಿಯಮ ರೂಪಿಸಲು ಕ್ರಮ: ಸಚಿವ ಖಾದರ್

Update: 2016-03-10 10:55 GMT

ಮಂಗಳೂರು, ಮಾ. 10: ಕಿಡ್ನಿ ಕಸಿ ಮಾಡುವಲ್ಲಿ ಪ್ರಸಕ್ತ ಇರುವ ಕಾನೂನಿಂದಾಗಿ ರೋಗಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗಿರುವುದರಿಂದ ಕಾನೂನನ್ನು ಸರಳಗೊಳಿಸಿ ವಿಶೇಷ ನಿಯಮಗಳನ್ನು ರೂಪಿಸುವ ನಿಟ್ಟಿನಲ್ಲಿ ತಜ್ಞರ ಜತೆ ಮಾತುಕತೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.

ಅವರು ಪುರಭವನದಲ್ಲಿ ಇಂದು ಕಿಡ್ನಿ ರೋಗಿಗಳ ಸಂಘ ಮತ್ತು ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ಕಿಡ್ನಿ ರೋಗಿಗಳ ಸಮಾವೇಶ ಮತ್ತು ವಿಶ್ವ ಕಿಡ್ನಿ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಿಡ್ನಿ ರೋಗಿಗಳು ಶಾಶ್ವತ ಚಿಕಿತ್ಸಾ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಡಯಾಲಿಸ್‌ಗಿಂತಲೂ ಕಿಡ್ನಿ ಕಸಿ ಅತೀ ಪ್ರಮುಖ. ಆದರೆ ಕಿಡ್ನಿ ಕಸಿಗಾಗಿ ರೋಗಿಯೊಬ್ಬ ದಾನಿಯಿಂದ ಕಿಡ್ನಿ ಪಡೆಯಲು ಕೆಲ ವರ್ಷಗಳ ಕಾಲ ಕಾಯಬೇಕಾಗುತ್ತದೆ ಮತ್ತು ಹಲವಾರು ರೀತಿಯ ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ಕಾನೂನಿನನ್ನು ಸರಳಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದ್ದು, ತಾಲೂಕಿನಲ್ಲೂ ಆರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆದರೆ ನೆಫ್ರಾಲಜಿಸ್ಟ್ ಸೇರಿದಂತೆ ಈ ಕುರಿತು ತಜ್ಞರ ಕೊರತೆಯಿಂದಾಗಿ ಇದು ಅಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡುವ ಬಗ್ಗೆಯೂ ಚಿಂತನೆ ಇದೆ ಎಂದು ಸಚಿವ ಖಾದರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿಡ್ನಿ ವಾರ್ತೆಯ 3ನೆ ಸಂಚಿಕೆಯನ್ನು ಸಚಿವ ಯು.ಟಿ.ಖಾದರ್ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಶಾಸಕ ಜೆ.ಆರ್. ಲೋಬೋ ವಹಿಸಿ, ಮಾತನಾಡಿದರು.
ಸಮಾವೇಶವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ, ಸಾಂಪ್ರದಾಯಿಕ ಆಹಾರ ಪದ್ಧತಿಯತ್ತ ಗಮನ ಹರಿಸಿ ಅತೀ ಹೆಚ್ಚು ತಿನ್ನುವ ಹವ್ಯಾಸದಿಂದ ದೂರವಿರಬೇಕು ಂದರು. 
ಕಿಡ್ನಿ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಅವರು ಸಭಿಕರಿಗೆ ಪ್ರಮಾಣವಚನ ಬೋಧಿಸಿದರು. ಸಮಾರಂಭದಲ್ಲಿ ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್. ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಕಿಡ್ನಿ ದಿನಾಚರಣೆ ಸಂಘಟನಾ ಸಮಿತಿ ಉಪಾಧ್ಯಕ್ಷ ಸುದೇಸ್ ಕುಮಾರ್, ಅಧ್ಯಕ್ಷ ಡಾ. ಮುಹಮ್ಮದ್ ಸಲೀಮ್, ಅಧ್ಯಕ್ಷ ಎಸ್. ಪ್ರಸಾದ್, ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಯತೀಶ್ ಬೈಕಂಪಾಡಿ, ಸಂತೋಷ್ ಕುಮಾರ್ ಉಡುಪಿ, ಡಾ. ರಾಜೇಶ್ವರಿ ದೇವಿ, ಡಾ. ನವೀನ್ ಚಂದ್ರ ಕುಲಾಲ್ ಉಪಸ್ಥಿತರಿದ್ದರು.


ಕಿಡ್ನಿ ಕಸಿ ಮಾಡುವ ಸಂಸ್ಥೆ ಇಲ್ಲವಾಗಿದ್ದು, ಮುಂದಿನ ಬಜೆಟ್‌ನಲ್ಲಿ ‘ಪುನರ್ಜನ್ಮ’ ಹೆಸರಿನಲ್ಲಿ ಕಿಡ್ನಿ ಸಂಸ್ಥೆಯನ್ನು ಮಾಡುವ ಬಗ್ಗೆ ಪ್ರಸ್ತಾವನೆ ಇರಿಸಲಾಗಿದೆ. ಬೆಂಗಳೂರಿನ ನಿಮ್ಹಾನ್ಸ್ ಬಳಿ ಐದು ಎಕರೆ ಜಾಗವನ್ನು ಕೂಡಾ ಗುರುತಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.
ಸದ್ಯ ಇಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಪಿಎಲ್‌ನವರಿಗೆ ಉಚಿತವಾಗಿ ಹಾಗೂ ಎಪಿಎಲ್‌ನವರಿಗೆ 1.5 ಲಕ್ಷ ರೂ. ವೆಚ್ಚದಲ್ಲಿ ಕಿಡ್ನಿ ಕಸಿ ಚಿಕಿತ್ಸೆ ನಡೆಯುತ್ತಿದೆ. ಇದೀಗ ರಾಜ್ಯದ ಇತರ ಖಾಸಗಿ ಆಸ್ಪತ್ರೆಗಳ ಜತೆ ಒಡಂಬಡಿಕೆ ಮಾಡಿಕೊಂಡು ಕಿಡ್ನಿ ಕಸಿಗೆ ಮುಂದಾಗುವ ಆಸ್ಪತ್ರೆಗಳಿಗೆ ವೆಚ್ಚದ ಶೇ. 50ರಷ್ಟನ್ನು ಸರಕಾರದಿಂದ ಒದಗಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಅವರು ಹೇಳಿದರು.


ಕಿಡ್ನಿ ವೈಫಲ್ಯಕ್ಕೆ ರರಕ್ತದೊತ್ತಡ ಮಧುಮೇಹವೂ ಕಾರಣ: ಡಾ. ವಿವೇಕ್ ಪಾಠಕ್
ಸಮರ್ಪಕವಾಗಿ ನೀರು ಕುಡಿಯುವುದು ಹಾಗೂ ಸಮತೋಲಿತ ಆಹಾರ ಸೇವನೆಯಿಂದ ಕಿಡ್ನಿ ವೈಫಲ್ಯವನ್ನು ನಿಯಂತ್ರಿಸಲು ಸಾಧ್ಯ. ಬೆಳ್ತಿಗೆೆ ಅಕ್ಕಿ, ಮೈದಾ ಮತ್ತು ಸಕ್ಕರೆಯನ್ನು ಅತಿಯಾಗಿ ಸೇವಿಸುವುದರಿಂದ ಮಧುಮೇಹಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಕಿಡ್ನಿ ವೈಫಲ್ಯಕ್ಕೆ ಮಧುಮೇಹ ಮತ್ತು ರಕ್ತದೊತ್ತಡವೂ ಪ್ರಮುಖ ಕಾರಣ ಎಂದು ಕೊಯಮತ್ತೂರಿನ ಹಿರಿಯ ಕಿಡ್ನಿ ರೋಗ ತಜ್ಞ ಡಾ. ವಿವೇಕ್ ಪಾಠಕ್ ಹೇಳಿದರು.
ಭಾರತದ ಆಹಾರ ಪದ್ಧತಿಯಲ್ಲಿ ಕಾರ್ಬೋಹೈಡ್ರೇಟ್ ಸೇವನೆ ಹೆಚ್ಚಾಗಿರುತ್ತದೆ. ಹಿಂದಿನ ಕಾಲದಲ್ಲಿ ಶ್ರಮ ಜೀವನ ಇರುತ್ತಿದ್ದುದರಿಂದ ಆಹಾರ ಜೀರ್ಣಕ್ರಿಯೆ ಸುಗಮವಾಗಿತ್ತು. ಆದರೆ ಇಂದಿನ ಆಧುನಿಕ ಜೀವನ ಪದ್ಧತಿ, ಆಹಾರದಲ್ಲಿ ಕ್ರಿಮಿನಾಶಕಗಳ ಬಳಕೆಯಿಂದ ಕಿಡ್ನಿ ವೈಫಲ್ಯ ಹೆಚ್ಚಾಗಿದೆ. ನಿರಂತರ ವೈದ್ಯರ ಬಳಿ ತೆರಳಿ ಮೂತ್ರ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ಕಿಡ್ನಿ ವೈಫಲ್ಯವನ್ನು ತಡೆಗಟ್ಟಬಹುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News