‘ಭಾರತ ಮಾತಾ ಕಿ ಜೈ’ ಘೋಷಣೆ ಕೂಗದ ಆರೋಪ ಮಹಾರಾಷ್ಟ್ರ ವಿಧಾನಸಭೆಯಿಂದ ಎಐಎಂಐಎಂ ಶಾಸಕ ಅಮಾನತು
ಮುಂಬೈ,ಮಾ.16: ಭಾರತಕ್ಕೆ ಅಗೌರವವನ್ನು ಸೂಚಿಸುತ್ತಿದ್ದಾರೆ ಎಂದು ಆರೋಪಿಸಿ ಮುಂಬೈನ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಶಾಸಕ ವಾರಿಸ್ ಪಠಾಣ ಅವರನ್ನು ಮಹಾರಾಷ್ಟ್ರ ವಿಧಾನಸಭೆಯು ಬುಧವಾರ ಸರ್ವಾನುಮತದಿಂದ ಅಮಾನತುಗೊಳಿಸಿತು. ಇದಕ್ಕೂ ಮುನ್ನ ಪಠಾಣ ಅವರು,ತನ್ನ ಜೀವ ಹೋದರೂ ಸರಿಯೇ..ತಾನು ‘ಭಾರತ ಮಾತಾ ಕಿ ಜೈ’ಎಂಬ ಘೋಷಣೆಯನ್ನು ಕೂಗುವುದಿಲ್ಲ ಎಂದು ಹೇಳಿದ್ದರು.
ಪಠಾಣ ಅವರ ಈ ಹೇಳಿಕೆಗೆ ಎಲ್ಲ ಪಕ್ಷಗಳ ಸದಸ್ಯರಿಂದ ಪ್ರತಿಭಟನೆ ವ್ಯಕ್ತವಾಯಿತು. ಅವರು ದೇಶಕ್ಕೆ ಅಗೌರವ ಸೂಚಿಸುತ್ತಿದ್ದಾರೆ ಎಂದು ಆರೋಪಿಸಿದ ಸರ್ವಸದಸ್ಯರು ಅವರ ಅಮಾನತಿಗೆ ಒಕ್ಕೊರಳಿನಿಂದ ಆಗ್ರಹಿಸಿದರು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಶಾಂತರಾಗದ ಹಿನ್ನೆಲೆಯಲ್ಲಿ ಸದನವನ್ನು ಐದು ಬಾರಿ ಮುಂದೂಡಲಾಯಿತು. ಇಷ್ಟಾದ ಬಳಿಕ ವಿಧಾನಸಭಾ ಸ್ಪೀಕರ್ ಹರಿಭಾವು ಬಾಗ್ಡೆ ಅವರು ತನ್ನ ಚೇಂಬರ್ನಲ್ಲಿ ಸರ್ವ ಪಕ್ಷಗಳ ನಾಯಕರ ಸಭೆಯನ್ನು ಕರೆದರು.
ಸಭೆಯ ಬಳಿಕ ಸಹಾಯಕ ಗೃಹಸಚಿವ ರಂಜಿತ್ ಪಾಟೀಲ್ ಅವರು ಪಠಾಣರ ಅಮಾನತು ನಿರ್ಣಯವನ್ನು ಸದನದಲ್ಲಿ ಮಂಡಿಸಿದರು. ಪಠಾಣ ಅಭಿವ್ಯಕ್ತಿ ಸ್ವಾತಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಮತ್ತು ದೇಶಕ್ಕೆ ಅಗೌರವವನ್ನು ತೋರಿಸುತ್ತಿದ್ದಾರೆ ಎಂದು ನಿರ್ಣಯ ಆರೋಪಿಸಿದೆ.
ಮುಂಗಡಪತ್ರ ಅಧಿವೇಶನದ ಅವಧಿಗೆ ಪಠಾಣರನ್ನು ಅಮಾನತುಗೊಳಿಸುವ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿತು.
ನಾವು ಒಂದು ದೇಶದಲ್ಲಿ ವಾಸಿಸುತ್ತಿದ್ದೇವೆ ಮತ್ತು ಇಲ್ಲಿ ವಾಸಿಸುವ ಪ್ರತಿಯೊಬ್ಬರೂ ದೇಶವನ್ನು ಪ್ರೀತಿಸಬೇಕು. ಧರ್ಮ,ಜಾತಿ ಮತ್ತು ಜನಾಂಗಗಳನ್ನು ಮರೆತು ನಾವು ಸ್ವಾತಂತ್ರಕ್ಕಾಗಿ ಹೋರಾಡಿದ್ದೇವೆ. ರಾಷ್ಟ್ರವಿರೋಧಿ ವಾದದ ವಿಷವು ಜೆಎನ್ಯುತನಕ ಸೀಮಿತವಾಗಿತ್ತು, ಆದರೆ ಅದೀಗ ವಿಧಾನಸಭೆಯಲ್ಲಿಯೂ ವ್ಯಾಪಿಸಿದೆ. ಯಾವುದೇ ವ್ಯಕ್ತಿ ಹೀಗೆ ಮಾತನಾಡಿದರೆ ಅದನ್ನು ದೇಶದ್ರೋಹವೆಂದು ಪರಿಗಣಿಸಬೇಕು ಎಂದು ರಾಜ್ಯದ ಕಂದಾಯ ಸಚಿವ ಏಕನಾಥ ಖಾಡ್ಸೆ ಸದನದಲ್ಲಿ ಹೇಳಿದರು.
ಕಾಂಗ್ರೆಸ್ನ ಅಬ್ದುಲ್ ಸತ್ತಾರ್ ಮತ್ತು ರಾಧಾಕೃಷ್ಣ ವಿಖೆ-ಪಾಟೀಲ್ ಅವರೂ ಅಮಾನತು ಆಗ್ರಹವನ್ನು ಬೆಂಬಲಿಸಿದರು.
ಈ ಕೆಲವು ವ್ಯಕ್ತಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ಇಡೀ ಮುಸ್ಲಿಮ್ ಸಮುದಾಯವು ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಸತಾರ್ ಹೇಳಿದರು.
ಬಿಜೆಪಿ ಮತ್ತು ಎಂಐಎಂ ನಡೆಸುತ್ತಿರುವ ಹೊಲಸು ರಾಜಕೀಯಗಳು ಪರಸ್ಪರ ಪೂರಕವಾಗಿವೆ ಎಂದು ಹೇಳಿದ ಎನ್ಸಿಪಿಯ ಜಿತೇಂದ್ರ ಅವ್ಹಾದ್ ಅವರು, ಆರೆಸ್ಸೆಸ್ ವರಿಷ್ಠ ಮೋಹನ ಭಾಗವತ್ ಅವರು ‘ಭಾರತ ಮಾತಾ ಕಿ ಜೈ ’ ಘೋಷಣೆ ಕೂಗುವುದಕ್ಕೆ ಸಂಬಂಧಿಸಿ ಹೇಳಿಕೆ ನೀಡಿದಾಗಲೇ ಏನೋ ಒಂದು ರೂಪುಗೊಳ್ಳುತ್ತಿದೆ ಎಂಬ ವಾಸನೆ ನಮಗೆ ಹೊಡೆದಿತ್ತು. ಅದಕ್ಕೆ ಸರಿಯಾಗಿ ಎಂಐಎಂ ನಾಯಕ ಉವೈಸಿ ಈ ಹೇಳಿಕೆಯನ್ನು ಎತ್ತಿಕೊಂಡರು ಮತ್ತು ಈ ವಿಷಯವಾಗಿ ಈಗ ರಾಜಕೀಯ ಆಟ ನಡೆಯುತ್ತಿದೆ. ಇವೆರಡೂ ಪಕ್ಷಗಳು ಉಭಯ ಸಮುದಾಯಗಳಲ್ಲಿ ಒಡಕನ್ನು ಸೃಷ್ಟಿಸುತ್ತಿವೆ ಎಂದು ಹೇಳಿದರು.