ಇಂದು ವಿಶ್ವ ಆರೋಗ್ಯ ದಿನ

Update: 2016-04-07 05:03 GMT

 ಜಾಗತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಎಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನ ಎಂದು ಆಚರಿಸುತ್ತಿದೆ. 1950, ಎಪ್ರಿಲ್ 7ರಂದು ಆರಂಭವಾದ ಈ ಆಚರಣೆ, ಪ್ರತಿ ವರ್ಷ ಯಾವುದಾದರೋಂದು ‘ವಿಶೇಷ’ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ. 2014ರಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳ ಜಾಗೃತಿ ಬಗ್ಗೆ, 2015ರಲ್ಲಿ ಆಹಾರ ಸುರಕ್ಷತೆ ಬಗ್ಗೆ ಆಚರಣೆ ಕೇಂದ್ರಿಕೃತವಾಗಿದ್ದು 2016ರಲ್ಲಿ ಹೆಚ್ಚುತ್ತಿರುವ ಮಧುಮೇಹ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ‘‘ಮಧುಮೇಹ ರೋಗದ ಏರಿಕೆ ತಡೆಗಟ್ಟಿ ಮತ್ತು ಮಧುಮೇಹವನ್ನು ಸೋಲಿಸಿ’’ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಸುಮಾರು 8 ದಿನಗಳನ್ನು ವಿಶೇಷ ಜಾಗತಿಕ ಆರೋಗ್ಯ ಜಾಗೃತಿಗಾಗಿ ಆಯ್ಕೆ ಮಾಡಿದ್ದು, ಅವುಗಳಲ್ಲಿ ವಿಶ್ವ ಕ್ಷಯ ರೋಗ ದಿನ (ಮಾರ್ಚ್ 24), ವಿಶ್ವ ಲಸಿಕಾ ದಿನ (ಎಪ್ರಿಲ್ ಕೊನೆವಾರ), ವಿಶ್ವ ಮಲೇರಿಯಾ ದಿನ (ಎಪ್ರಿಲ್ 25), ವಿಶ್ವ ಧೂಮಪಾನ ರಹಿತ ದಿನ (ಮೇ 31), ವಿಶ್ವ ರಕ್ತದಾನಿಗಳ ದಿನ (ಜೂನ್ 14), ವಿಶ್ವ ಹೆಪಟೈಟಿಸ್ ದಿನ (ಜುಲೈ 28), ವಿಶ್ವ ಏಡ್ಸ್ ದಿನ (ಡಿಸೆಂಬರ್ 1), ಮತ್ತು ವಿಶ್ವ ಆರೋಗ್ಯ ದಿನ (ಎಪ್ರಿಲ್ 7) ಸೇರಿದೆ.

 ಮಧುಮೇಹ ಎನ್ನುವ ರೋಗ ತಡೆಗಟ್ಟಬಹುದಾದ ಮತ್ತು ಚಿಕಿತ್ಸೆಯಿಂದ ಗುಣಪಡಿಸಬಹುದಾದ ಸಾಂಕ್ರಾಮಿಕವಲ್ಲದ ರೋಗವಾಗಿದ್ದು, ದಿನೇ ದಿನೇ ಈ ರೋಗಗಳ ಸಂಖ್ಯೆ ಹೆಚ್ಚುತ್ತಿದೆ. ವಿಶ್ವ ಸಂಸ್ಥೆಯ ಅಂದಾಜಿನ ಪ್ರಕಾರ ಸುಮಾರು 350 ಮಿಲಿಯನ್ ಮಂದಿ ಈ ರೋಗದಿಂದ ಬಳಲುತ್ತಿದ್ದು ಸುಮಾರು 1.5 ಮಿಲಿಯನ್ ಮಂದಿ ಮಧುಮೇಹದಿಂದಲೇ ಸಾವನ್ನಪ್ಪುತ್ತಿದ್ದಾರೆ.2025ರ ಹೊತ್ತಿಗೆ ಜಾಗತಿಕವಾಗಿ 500 ಮಿಲಿಯನ್ ಮಂದಿ ಮಧುಮೇಹ ರೋಗದಿಂದ ಬಳಲಬಹುದು ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಮಧುಮೇಹ ರೋಗವನ್ನು ತಡೆಗಟ್ಟುವುದು, ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುವುದು ಮತ್ತು ರೋಗದಿಂದ ಉಂಟಾಗುವ ಪ್ರಾಣ ಹಾನಿಯನ್ನು ತಪ್ಪಿಸುವುದರ ಬಗ್ಗೆ ಹೆಚ್ಚಿನ ಒತ್ತು ನೀಡಿ ರೋಗ ನಿಯಂತ್ರಣಕ್ಕೆ ಹೊಸ ರೂಪರೇಷೆಯನ್ನು ನೀಡಲಾಗಿದೆ. ಜೀವನಶೈಲಿಯನ್ನು ಪರಿವರ್ತಿಸಿ ಮತ್ತು ಆಹಾರ ಪದ್ಧತಿಯನ್ನು ಮಾರ್ಪಾಡು ಮಾಡಿ, ದೈಹಿಕ ಕಸರತ್ತಿನ ಮುಖಾಂತರ ಮಧುಮೇಹ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ಚಿಕಿತ್ಸೆಯ ವೆಚ್ಚ ಕೂಡ ದುಬಾರಿಯಾಗಿಲ್ಲ ಹಾಗೂ ಜನರಲ್ಲಿ ರೋಗದಿಂದ ಉಂಟಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿ ರೋಗದ ನಿಯಂತ್ರಣದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ಮುಂಬರುವ ತೊಂದರೆಗಳನ್ನು ಕಡಿಮೆ ಮಾಡುವ ಪ್ರಯತ್ನವನ್ನು ಹೆಚ್ಚು ಮಾಡಲಾಗುತ್ತಿದೆ.
ಸಕ್ಕರೆ ಕಾಯಿಲೆ ಅಥವಾ ಮಧುಮೇಹ ರೋಗ ಎನ್ನುವುದು ಬಹಳ ಪುರಾತನವಾದ ಕಾಯಿಲೆೆ. ಪ್ರಾಚೀನ ಈಜಿಪ್ಟ್ ತಾಡಪತ್ರೆಗಳಲ್ಲಿ ‘‘ಅತಿಯಾದ ಮೂತ್ರ ವಿಸರ್ಜಿಸುವ ರೋಗ’’ ಎಂದು ನಮೂದಿಸಲಾಗಿದೆ. ಪ್ರಾಚೀನ ಭಾರತೀಯ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲಿಯೂ ಈ ರೋಗದ ಸ್ಥಿತಿಯನ್ನು ಮಧುಮೇಹರೋಗ ಮತ್ತು ಸಿಹಿಮೂತ್ರ ರೋಗ ಎಂದು ಉತ್ತೇಜಿಸಲಾಗಿದೆ. (ಇರುವೆಗಳನ್ನು ಆಕರ್ಷಿಸುವ ಮೂತ್ರ) ಡಯಾಬಿಟಿಸ್ ಎಂಬ ಶಬ್ದವನ್ನು ಕ್ರಿ.ಶ. 2ನೆ ಶತಮಾನದಲ್ಲಿ ಗ್ರೀಸ್‌ನ ಅರಿಯೇಟಸ್ ಎಂಬ ವೈದ್ಯ ನೀಡಿದನು. ಕ್ರಿ.ಶ. 1600ರಲ್ಲಿ ಥೋಮಸ್ ವಿಲ್ಸನ್ ಎಂಬಾತ ಡಯಾಬಿಟಿಸ್ ಇನ್‌ಸಿಪಿಡಸ್ (ಅತಿಯಾದ ಮೂತ್ರ) ಮತ್ತು ಡಯಾಬಿಟಿಸ್ ಮೆಲಿಟಸ್ (ಸಿಹಿಮೂತ್ರ) ಎಂದು ಎರಡು ಪ್ರತ್ಯೇಕ ರೋಗಗಳೆಂದು ಹೇಳಿದನು. ಒಟ್ಟಿನಲ್ಲಿ ಮಧುಮೇಹ, ಸಿಹಿಮೂತ್ರ, ಸಕ್ಕರೆ ಕಾಯಿಲೆೆ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ರೋಗ ಆಧುನಿಕ ಜಗತ್ತಿಗೆ ಈ ಶತಮಾನದ ಕೊಡುಗೆ ಎಂದರೂ ತಪ್ಪಲ್ಲ.

   ಭಾರತ ದೇಶಕ್ಕೂ ಮಧುಮೇಹ ರೋಗಕ್ಕೂ ಬಹಳ ನೆಂಟಸ್ತಿಕೆ ಇದೆ ಅನ್ನುವುದು ಬಹಳ ಕಳವಳಕಾರಿ ಅಂಶ. ಇನ್ನೊಂದೆರಡು ವರ್ಷಗಳಲ್ಲಿ ಮಧುಮೇಹ ಜಗತ್ತಿನ ರಾಜಧಾನಿ ಎಂಬ ಹಣೆಪಟ್ಟಿ ಭಾರತಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇವೆ. ಸದ್ಯಕ್ಕೆ ಜಗತ್ತಿನ ಮಧುಮೇಹ ರೋಗಿಗಳಲ್ಲಿ ಭಾರತೀಯರ ಪಾಲು ಶೇ.20ರಿಂದ 25ಕ್ಕೂ ಹೆಚು.್ಚ ಸರಿಸುಮಾರು 6ರಿಂದ 8 ಕೋಟಿ ಭಾರತೀಯರು ಮಧುಮೇಹಿಗಳು ಎಂಬುದು ಗಮನಾರ್ಹ ಅಂಶ. ಈ 6ರಿಂದ 8 ಕೋಟಿಯಲ್ಲಿ ಹೆಚ್ಚಿನವರು ಯುವಕರು ಎನ್ನುವುದು ಕೂಡಾ ಇನ್ನೊಂದು ಕಳವಳಕಾರಿ ಅಂಶ (ಸುಮಾರು ಶೇ.50 ಯುವಜನತೆ ಬಿಸಿರಕ್ತದ ಜೊತೆಗೆ ಸಿಹಿರಕ್ತವನ್ನು ಹೊಂದಿರುವುದು ಬಹಳ ಅವಮಾನಕರವಾದ ಬೆಳವಣಿಗೆ.) ಇದರಿಂದಾಗಿ ಮಧುಮೇಹದ ಜೊತೆಗೆ ಹೃದ್ರೋಗ, ಅಧಿಕ ರಕ್ತದೊತ್ತಡ, ಲಕ್ವ, ಅಂಧತ್ವ, ಲೈಂಗಿಕ ಸಾಮಾರ್ಥ್ಯ ಕ್ಷೀಣಿಸುವುದು ಎಲ್ಲಾ ಉಚಿತವಾಗಿಯೇ ಸಿಗುತ್ತದೆ.

ಸಾಮಾನ್ಯವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಅಣ್ಣ ತಮ್ಮಂದಿರಂತಯೇ!!! ವಯಸ್ಸಾದಂತೆ ಈ ರೋಗಗಳಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗುತ್ತದೆ. 65 ವರ್ಷ ದಾಟಿದ ಬಳಿಕ ಈ ಸಾಧ್ಯತೆ ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಅಂಕಿ ಅಂಶಗಳು ಹೇಳುತ್ತದೆ. ಈ ಮಧುಮೇಹಿಗಳಲ್ಲಿ ಶೇ.75ರಷ್ಟು ನಗರ ವಾಸಿಗಳು ಮತ್ತು 25ರಷ್ಟು ಗ್ರಾಮೀಣ ವಾಸಿಗಳು ಮತ್ತು ನಗರವಾಸಿಗಳಲ್ಲಿ ಶೇ.50ರಷ್ಟು ಮಂದಿ 40 ವರ್ಷಗಳಿಗಿಂತ ಕೆಳಗಿನವರು ಇದ್ದು, ನಮ್ಮ ನಗರವಾಸಿಗಳ ಬದಲಾಗುತ್ತಿರುವ ಜೀವನಶೈಲಿ, ಆಹಾರಪದ್ಧತಿ ಮತ್ತು ಕೆಲಸದ ಒತ್ತಡ ಇತ್ಯಾದಿಗಳಿಗೆ ಹಿಡಿದ ಕನ್ನಡಿ ಎಂದರೂ ತಪ್ಪಲ್ಲ. ಇದಲ್ಲದೆ ನಮ್ಮ ದೇಶದ ಮಧುಮೇಹ ಪೀಡಿತರಲ್ಲಿ ಶೇ.75 ಮಂದಿಗೆ ತಾವು ಮಧುಮೇಹ ರೋಗಿಗಳು ಎಂಬುದರ ಅರಿವೂ ಇರುವುದಿಲ್ಲ.

ಇದೇ ಕಾರಣಕ್ಕಾಗಿಯೇ ಮಧುಮೇಹ ರೋಗ ಉಲ್ಭಣಿಸಿ ಇತರ ಕಾಯಿಲೆೆಗಳಿಗೆ ಕಾರಣವಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ರೋಗವನ್ನು ಹತೋಟಿಯಲ್ಲಿರಿಸಿ, ಇನ್ನಿತರ ಅಂಗಾಂಶಗಳಿಗಾಗುವ ತೊಂದರೆಯನ್ನು ತಪ್ಪಿಸಿ, ಮಧುಮೇಹಿಗಳು ಇತರರಂತೆ ಸುಖವಾಗಿ ಬಾಳಬಹುದು. ಈ ಕಾರಣಕ್ಕಾಗಿಯೇ ನವೆಂಬರ್ 14ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಿ ಮಧುಮೇಹ ರೋಗಗಳ ಬಗ್ಗೆ ಮತ್ತು ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸಿ, ಅದರಿಂದಾಗುವ ತೊಂದರೆಗಳನ್ನು ಕಡಿಮೆ ಮಾಡುವ ಸದುದ್ದೇಶವನ್ನು ಹೊಂದಿದೆ.

ಮಧುಮೇಹ ರೋಗದ ಚಿಹ್ನೆಗಳು

ಮಧುಮೇಹ ರೋಗದ ಚಿಹ್ನೆಗಳು ವಯಸ್ಸು ಮತ್ತು ಯಾವ ರೀತಿಯ ಮಧುಮೇಹ ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ. ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಮಧುಮೇಹ ರೋಗದ ಚಿಹ್ನೆಗಳು ಭಿನ್ನವಾಗಿರಲೂಬಹುದು. ವಯಸ್ಕರಲ್ಲಿ ಸಾಮಾನ್ಯವಾಗಿ ಅತಿಯಾದ ಮೂತ್ರ ವಿಸರ್ಜನೆ, ಅತಿ ದಾಹ, ಅತಿ ಬಳಲಿಕೆ, ಅತಿಯಾದ ಹಸಿವು ಹೆಚ್ಚಾಗಿ ಕಾಣಸಿಗುತ್ತದೆ. ಇದರ ಜೊತೆಗೆ ಅತಿಯಾದ ಬಳಲಿಕೆ ಆಲಸ್ಯ, ಮೈ ಕೈ ನೋವು, ಅಂಗೈ ಮತ್ತು ಅಂಗಾಲುಗಳು ಉರಿಯುವುದು, ಗುಣವಾಗದ ಗಾಯಗಳು, ದೃಷ್ಟಿಮಾಂದ್ಯತೆ, ಯೋನಿಯ ಸೋಂಕು, ಲೈಂಗಿಕ ನಿರಾಸಕ್ತಿ ಇತ್ಯಾದಿ ಕಾಣಬಹುದು.

ಮಕ್ಕಳಲ್ಲಿ ಉದರ ನೋವು, ವಾಂತಿ, ಅಶಕ್ತಿ, ಬಳಲಿಕೆ, ಪದೇ ಪದೇ ಮತಿ ತಪ್ಪುವುದು ಮೊಟ್ಟ ಮೊದಲ ರೋಗದ ಚಿಹ್ನೆಗಳಾಗಿರಬಹುದು. ಅನೇಕ ಮಧುಮೇಹಿಗಳಲ್ಲಿ ಏನೂ ತೊಂದರೆ ಇಲ್ಲದೆ, ಆಕಸ್ಮಿಕ ಮೂತ್ರ ಪರೀಕ್ಷೆಯಿಂದ ಪತ್ತೆಯಾಗಬಹುದು. ಗುಣವಾಗದ ಗಾಯದ ಹುಣ್ಣು, ಬಾಯಿಯ ವಾಸನೆ ಅಥವಾ ಇನ್ನಾವುದೇ ಕಾರಣದಿಂದ ರಕ್ತ ಪರೀಕ್ಷೆ ಮಾಡಿದಾಗ ಮಧುಮೇಹ ರೋಗ ಗೋಚರವಾಗ ಬಹುದು. ಒಟ್ಟಿನಲ್ಲಿ ನಿಮ್ಮ ದೇಹದ ತೂಕ ಜಾಸ್ತಿಯಾದಲ್ಲಿ, ನಿಮ್ಮ ಕುಟುಂಬದಲ್ಲಿ ಅಥವಾ ಹೆತ್ತವರು ಮಧುಮೇಹಿಗಳಾಗಿದ್ದಲ್ಲಿ, ನಿಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಅಸಮರ್ಪಕವಾಗಿದ್ದಲ್ಲಿ, ನಿಮಗೆ ಮಧುಮೇಹ ಬರುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಸಾಕಷ್ಟು ಮುಂಜಾಗರೂಕತೆ ವಹಿಸಿ ಶಿಸ್ತುಬದ್ಧ ಜೀವನ, ದೈಹಿಕ ವ್ಯಾಯಾಮ, ಕ್ರಮಬದ್ಧ ಆಹಾರ, ಒತ್ತಡವಿಲ್ಲದ ಬದುಕು ಮುಂತಾದವುಗಳನ್ನು ರೂಢಿಸಿಕೊಂಡಲ್ಲಿ ಮಧುಮೇಹ ಬಂದರೂ ಎಲ್ಲರಂತೆ ನೀವು ಕೂಡಾ ಸುಖ ಮತ್ತು ನೆಮ್ಮದಿಯ ಜೀವನ ನಡೆಸಬಹುದು.

ಚಿಕಿತ್ಸೆ ಹೇಗೆ?
  ಮಧುಮೇಹ ರೋಗದ ಚಿಕಿತ್ಸೆಯ ಹೊಣೆಗಾರಿಕೆಯನ್ನು ವೈದ್ಯರಿಗೆ ಬಿಡಿ. ನೀವು ಯಾವತ್ತೂ ನಿಮ್ಮ ಇಚ್ಛೆಯಂತೆ ಅಥವಾ ಅನುಕೂಲಕ್ಕೆ ತಕ್ಕಂತೆ ಔಷಧಿಗಳನ್ನು ಸೇವಿಸಬಾರದು. ಸ್ವಯಂ ಮದ್ದುಗಾರಿಕೆ ಮತ್ತು ನಿಮ್ಮಿಷ್ಟದಂತೆ ಔಷಧಿಯ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು ಯಾವತ್ತೂ ಅಪಾಯಕಾರಿ. ಪದೇ ಪದೇ ವೈದ್ಯರನ್ನು ಬದಲಿಸಬೇಡಿ. ನಿಮ್ಮ ಕೆಲಸ ಏನಿದ್ದರೂ ದೇಹದ ತೂಕವನ್ನು ನಿಯಂತ್ರಿಸುವುದು, ಸರಿಯಾದ ಸಮತೋಲಿತ ವೈದ್ಯರು ತಿಳಿಸಿದ ಆಹಾರವನ್ನು ಕಾಲಕಾಲಕ್ಕೆ ತೆಗೆದುಕೊಳ್ಳುವುದು ಮತ್ತು ನಿರಂತರ, ನಿಯಮಿತ ದೈಹಿಕ ವ್ಯಾಯಾಮ ಮಾಡಿಕೊಂಡು ದೇಹದ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸೀಮಿತವಾಗಿರಬೇಕು. ವೈದ್ಯರ ಸಲಹೆ ಇಲ್ಲದೆ ನಿಮ್ಮ ಮಧುಮೇಹ ರೋಗದ ಮಾತ್ರೆಯ ಪ್ರಮಾಣ ಮತ್ತು ಇನ್ಸುಲಿನ್ ರಸದೂತದ ಪ್ರಮಾಣವನ್ನು ಬದಲಾಯಿಸಬಾರದು. ಚಿಕಿತ್ಸೆಯ ಹೊಣೆಗಾರಿಕೆಯನ್ನು ನಿಮ್ಮ ವೈದ್ಯರಿಗೆ ಬಿಟ್ಟುಕೊಟ್ಟಲ್ಲಿ, ಹೆಚ್ಚಿನ ಅಪಾಯಗಳನ್ನು ತಡೆಗಟ್ಟಬಹುದು. ಅದರಲ್ಲಿಯೇ ನಿಮ್ಮ ಹಿತ ಮತ್ತು ಆರೋಗ್ಯದ ಗುಟ್ಟು ಅಡಗಿದೆ.
ಮಧುಮೇಹ ನಿಯಂತ್ರಿಸುವುದು ಹೇಗೆ?
  1.ನಿರಂತರ ಮತ್ತು ನಿಯಮಿತ ವ್ಯಾಯಾಮ ಮಧುಮೇಹ ನಿಯಂತ್ರಣಕ್ಕೆ ಅತೀ ಅಗತ್ಯ. ವ್ಯಾಯಾಮ ಮಾಡಿದಾಗ ಮಾಂಸಖಂಡಗಳು ಮತ್ತು ಸ್ನಾಯುಗಳು ಕ್ರಿಯಾಶೀಲವಾಗುತ್ತಛಿ ಹಾಗೂ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಈ ಶಕ್ತಿಯು ರಕ್ತದಲ್ಲಿರುವ ಗ್ಲೂಕೋಸ್‌ನಿಂದ ಸ್ನಾಯುಗಳಿಗೆ ಸರಬರಾಜು ಆಗುತ್ತದೆ. ವ್ಯಾಯಾಮದಿಂದ ಜೀವಕೋಶಗಳು ಚಯಾಪಚಯ ಕ್ರಿಯೆಗಳು ವೇಗವಾಗುತ್ತವೆ. ಹಾಗಾದಾಗ ಹೆಚ್ಚಿನ ಕ್ಯಾಲರಿ (ಶಕ್ತಿ)ಯ ಆವಶ್ಯಕತೆ ಉಂಟಾಗಿ, ಗ್ಲೂಕೋಸ್‌ನಿಂದ ಶಕ್ತಿ ದೊರಕಿ, ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ದಿನಕ್ಕರ್ಧ ಗಂಟೆಗಳ ವ್ಯಾಯಾಮ, ಬಿರುಸು ನಡಿಗೆ ಬರೀ ಮಧುಮೇಹ ರೋಗಕ್ಕೆ ಮಾತ್ರವಲ್ಲ, ಹೃದಯ ರೋಗ ಮತ್ತು ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕೂ ಅತೀ ಅವಶ್ಯಕ.
 
2.ನೀವು ಸೇವಿಸುವ ಆಹಾರ ಯಾವತ್ತೂ ಕೊಬ್ಬು, ಪ್ರೊಟೀನ್ ಮತ್ತು ಪಿಷ್ಟಗಳಿಂದ ಕೂಡಿದ್ದು ಸಮತೋಲನ ಆಹಾರವಾಗಿರಬೇಕು. ಆಹಾರವು ಅನ್ನ ಸತ್ವಗಳು (ವಿಟಮಿನ್‌ಗಳು) ಮತ್ತು ಖನಿಜಗಳಿಂದ ಕೂಡಿರಬೇಕು. ಕೇವಲ ಶರ್ಕರ ಪಿಷ್ಟಗಳು ಹೆಚ್ಚಾಗಿರುವ ಆಹಾರ ಒಳ್ಳೆಯದಲ್ಲ. ನಿಮ್ಮ ಆಹಾರ ಸೊಪ್ಪು, ಹಸಿರು ತರಕಾರಿ, ಕಾಳು ಬೇಳೆಗಳಿಂದ ಕೂಡಿರಲಿ. ಸಂಸ್ಕರಿತ ಕೃತಕ ಆಹಾರ ಬೇಡವೇ ಬೇಡ. ಮೂಲಾಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನೀವು ಸೇವಿಸುವ ಆಹಾರ ನಿಮ್ಮ ದೇಹದ ಗಾತ್ರ ಮತ್ತು ದೈಹಿಕ ಶ್ರಮಕ್ಕೆ ಅನುಗುಣವಾಗಿರಲಿ. ಆಹಾರ ಬರೀ ರುಚಿಗಾಗಿ ಇರದೆ, ದೇಹದ ಆರೋಗ್ಯಕ್ಕೆ ಪೂರಕವಾಗಿರಲಿ. ನಾರುಯುಕ್ತ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಿ. ಕೊಬ್ಬಿನಾಂಶ ಜಾಸ್ತಿ ಇರುವ ಕರಿದ ತಿಂಡಿಗಳು ಇರುವ ತಿನಿಸುಗಳಿಗೆ ಕಡಿವಾಣ ಹಾಕಬೇಕು.

3.ಮಾನಸಿಕ ಒತ್ತಡ ಕಡಿಮೆಯಾಗುವ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು. ಒತ್ತಡದ ಸಂದರ್ಭಗಳಲ್ಲಿ ರಸದೂತಗಳ ಸ್ರವಿಸುವಿಕೆ ಜಾಸ್ತಿಯಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಜಾಸ್ತಿಯಾಗಬಹುದು. ಬಿಡುವಿಲ್ಲದ ಒತ್ತಡದ ದೈಹಿಕ ವ್ಯಾಯಾಮವಿಲ್ಲದ ಜೀವನ ಶೈಲಿಯು ‘ಮಧುಮೇಹ’ ರೋಗಕ್ಕೆ ಮುನ್ನುಡಿ ಬರೆಯುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ದೇಹಕ್ಕೆ ಮತ್ತು ಮನಸ್ಸಿಗೂ ಹಿತವಾದ ಸಂಗೀತ ಆಲಿಸುವುದು, ಯೋಗ, ಧ್ಯಾನ, ಪ್ರಾಣಯಾಮ ಇತ್ಯಾದಿಗಳಿಂದ ಮಾನಸಿಕ ಉದ್ವೇಗ, ತುಮುಲತೆಯನ್ನು ಕಡಿಮೆ ಮಾಡಿ ಮಾನಸಿಕ ನೆಮ್ಮದಿ, ಶಾಂತಿ ದೊರೆತಲ್ಲಿ ಮಧುಮೇಹ ಮಾತ್ರವಲ್ಲ ಇನ್ನೂ ಹತ್ತು ಹಲವು ಕಾಯಿಲೆಗಳನ್ನು ತಡೆಗಟ್ಟಬಹುದು.
4.ತಜ್ಞ ವೈದ್ಯರ ಸಲಹೆಯಂತೆ ಚಾಚುತಪ್ಪದೆ ಔಷಧಿಯನ್ನು ಸೇವಿಸಬೇಕು. ಔಷಧಿಗಳ ಪ್ರಮಾಣ ಮತ್ತು ಹೊತ್ತುಗಾರಿಕೆಯನ್ನು ವೈದ್ಯರು ನಿರ್ಧರಿಸುತ್ತಾರೆ. ಒಟ್ಟಿನಲ್ಲಿ ಚಿಕಿತ್ಸೆಯ ಉದ್ದೇಶ ರೋಗವನ್ನು ಗುಣಪಡಿಸುವುದು ಆಗಿರದೆ, ರೋಗವನ್ನು ನಿಯಂತ್ರಣದಲ್ಲಿಡುವುದಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಿದಲ್ಲಿ ಬರಬಹುದಾದ ಎಲ್ಲಾ ಅಡ್ಡ ಪರಿಣಾಮಗಳನ್ನು ಮತ್ತು ಅಪಾಯವನ್ನು ತಡೆಗಟ್ಟಬಹುದು.

 ಮಧುಮೇಹ ರೋಗ ಮಾರಣಾಂತಿಕ ರೋಗವಲ್ಲದಿದ್ದರೂ ಮುಂದೆ ಬಂದೊದಗುವ ಮರಣಕ್ಕೆ ಮುನ್ನುಡಿ ಬರೆಯುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತದೆ. ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲದಿದ್ದರೂ, ರೋಗವನ್ನು ಹತೋಟಿಯಲ್ಲಿಡುವ ಮತ್ತು ರೋಗದಿಂದಾಗುವ ಅಪಾಯಗಳನ್ನು ನಿಭಾಯಿಸುವುದಕ್ಕೆ ಹೆಚ್ಚಿನ ಆದ್ಯತೆ ಅತೀ ಆವಶ್ಯಕ. ರೋಗಗಳ ರಾಜ್ಯದಲ್ಲಿ ಅನಭಿಷಿಕ್ತ ದೊರೆಯಾಗಿ ರಾರಾಜಿಸುತ್ತಿರುವ ಮಧುಮೇಹವನ್ನು ನಿರ್ಲಕ್ಷಿಸದೆ, ಸಾಕಷ್ಟು ಮುಂಜಾಗರೂಕತೆ ವಹಿಸಿದಲ್ಲಿ ಮಾತ್ರ ಈ ರೋಗದ ಅಟ್ಟಹಾಸಕ್ಕೆ ಲಗಾಮು ಹಾಕಲು ಸಾಧ್ಯವಾಗಬಹುದು. ಇಲ್ಲವಾದಲ್ಲಿ ಮುಂದಿನ ಪೀಳಿಗೆಯ ಮಕ್ಕಳು ಹುಟ್ಟುತ್ತಲೇ ಮಧುಮೇಹಿಗಳಾಗಿರಬಹುದು ಮತ್ತು ಮುಂಬರುವ ದಿನಗಳಲ್ಲಿ ಮಧುಮೇಹ ರೋಗ ಮನುಕುಲದ ಬಹುದೊಡ್ಡ ವೈರಿಯಾಗುವುದರಲ್ಲಿ ಎಳ್ಳಷ್ಟೂ ಸಂಶಯವೇ ಇಲ್ಲ. ವಿಶ್ವ ಆರೋಗ್ಯ ದಿನವಾದ ಎಪ್ರಿಲ್ 7ರಂದು ನಾವೆಲ್ಲ ನಿರಂತರ ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಮೂಲಾಹಾರ ಸೇವನೆ ಮಾಡಿ, ಕಾಲಕಾಲಕ್ಕೆ ನಿಯಮಿತವಾಗಿ ವೈದ್ಯರ ಸಲಹೆಯಂತೆ ಔಷಧಿ ಸೇವಿಸಿ, ಮಧುಮೇಹ ರೋಗದ ವಿರುದ್ಧ ಸಮರ ಸಾರೋಣ. ಹಾಗೆ ಮಾಡಿದ್ದಲ್ಲಿ ಮಾತ್ರ ವಿಶ್ವ ಆರೋಗ್ಯ ದಿನದ ಆಚರಣೆಗೆ ಹೆಚ್ಚಿನ ಮೌಲ್ಯ ಬಂದೀತು.

ಮಧುಮೇಹ ರೋಗದಿಂದಾಗಬಹುದಾದ ತೊಂದರೆಗಳು
ಇತರ ಸಾಮಾನ್ಯ ಮಂದಿಗೆ ಹೋಲಿಸಿದಲ್ಲಿ ಮಧುಮೇಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ತೊಂದರೆಗಳು ಈ ರೀತಿ ಇದೆ.
1  .ಕುರುಡುತನ ಅಥವಾ ಅಂಧತ್ವ ಕಾಣಿಸಿಕೊಳ್ಳುವ ಅಪಾಯ 25ರಷ್ಟು ಜಾಸ್ತಿ.
2.ಹೃದಯಾಘಾತದ ಅಪಾಯ ಎರಡರಿಂದ ಮೂರು ಪಟ್ಟು ಹೆಚ್ಚು.
3  .ಲಕ್ವ (ಪಕ್ಷಪಾತ) ಹೊಡೆಯುವ ಸಾಧ್ಯತೆ ಸುಮಾರು ಎರಡು ಪಟ್ಟು ಜಾಸ್ತಿ.
4.  ಮೂತ್ರಪಿಂಡಗಳ ವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಸುಮಾರು 15 ಪಟ್ಟು ಜಾಸ್ತಿ.
5.  ಗ್ಯಾಂಗ್ರಿನ್‌ನಿಂದಾಗಿ (ಕಾಲು, ಕೈ ಬೆರಳುಗಳು ಮತ್ತು ಕಾಲ್ಬೆರಳು ಕೊಳೆಯುವಿಕೆ) ಅಂಗಚ್ಛೇದವಾಗುವ ಅಪಾಯ 30ರಿಂದ 35 ಪಟ್ಟು ಜಾಸ್ತಿ.

ನೆನಪಿರಲಿ, ಮಧುಮೇಹದಿಂದಾಗಿ ಜನರು ದಿನ ಬೆಳಗಾಗುವುದರಲ್ಲಿ ಸಾಯುವುದಿಲ್ಲ. ಸರಿಯಾದ ನಿಯಂತ್ರಣವಿಲ್ಲದ ಮಧುಮೇಹದಿಂದಾಗಿ ಕ್ಷಣ ಕ್ಷಣಕ್ಕೂ ಜೀವಕೋಶಗಳಿಗೆ ಹಾನಿಯಾಗಿ ಹೃದಯ, ಕಣ್ಣು, ಮೆದುಳು, ಮೂತ್ರಪಿಂಡ, ನರಮಂಡಲ ಹೀಗೆ ಎಲ್ಲವನ್ನು ಆಪೋಶನ ತೆಗೆದುಕೊಂಡು, ನಿಧಾನವಾಗಿ ವ್ಯಕ್ತಿಯ ಎಲ್ಲಾ ಅಂಗಾಂಗಗಳನ್ನು ವೈಕಲ್ಯಗೊಳಿಸುತ್ತದೆ ಮತ್ತು ನಿಧಾನವಾಗಿ ಕೊಲ್ಲುತ್ತದೆ. ಈ ಕಾರಣಕ್ಕಾಗಿಯೇ ಮಧುಮೇಹಿಗಳು ‘ಮಧುಮೇಹ’ ರೋಗವನ್ನು ಯಾವಾಗಲೂ ನಿಯಂತ್ರಣದಲ್ಲಿ ಇಡಬೇಕಾದ ಅನಿವಾರ್ಯತೆ ಇದೆ.

Writer - ಡಾ ಮುರಲೀ ಮೋಹನ್ ಚೂಂತಾರು

contributor

Editor - ಡಾ ಮುರಲೀ ಮೋಹನ್ ಚೂಂತಾರು

contributor

Similar News