×
Ad

ಶನಿವಾರದಿಂದ ದೇಶೀಯ ಟ್ವೆಂಟಿ-20 ಕ್ರಿಕೆಟ್ ಕಲರವ

Update: 2016-04-08 23:39 IST

 ಉದ್ಘಾಟನಾ ಪಂದ್ಯದಲ್ಲಿ ಮುಂಬೈಗೆ ಪುಣೆ ಸವಾಲು

ಮುಂಬೈ, ಎ.8: ಐಪಿಎಲ್‌ನ ಉದ್ಘಾಟನಾ ಪಂದ್ಯಕ್ಕೆ ಬಾಂಬೆ ಹೈಕೋರ್ಟ್ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ದೇಶೀಯ ಟ್ವೆಂಟಿ-20 ಕ್ರಿಕೆಟ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಭಾರತದ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ನೇತೃತ್ವದ ಹೊಸ ಫ್ರಾಂಚೈಸಿ ರೈಸಿಂಗ್ ಪುಣೆ ಜೈಂಟ್ಸ್ ತಂಡ ಆತಿಥೇಯ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಮಹಾರಾಷ್ಟ್ರದ ಹೆಚ್ಚಿನ ಭಾಗದಲ್ಲಿ ನೀರಿನ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಶನಿವಾರ ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ತಡೆ ಹೇರಬೇಕೆಂದು ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಎಲ್ಲ ಸಿದ್ಧತೆಗಳು ನಡೆದಿರುವುದರಿಂದ ಅದಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.

ಈ ಬಾರಿಯ 9ನೆ ಆವೃತ್ತಿಯ ಐಪಿಎಲ್‌ನಲ್ಲಿ ಎರಡು ಯಶಸ್ವಿ ತಂಡಗಳಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಆಡುತ್ತಿಲ್ಲ. ಈ ಎರಡು ತಂಡಗಳನ್ನು ಲೋಧಾ ಸಮಿತಿಯ ಶಿಫಾರಸಿನ ಮೇರೆಗೆ ಎರಡು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.

ಆರ್‌ಪಿಎಸ್‌ಜಿ ಗ್ರೂಪ್ ಮಾಲಕತ್ವದ ಪುಣೆ ತಂಡಕ್ಕೆ ಚೆನ್ನೈ ತಂಡದ ಯಶಸ್ವಿ ನಾಯಕ ಎಂಎಸ್ ಧೋನಿ ಸಾರಥ್ಯವಹಿಸಿಕೊಂಡಿದ್ದು, ನ್ಯೂಝಿಲೆಂಡ್‌ನ ಸ್ಟೀಫನ್ ಫ್ಲೆಮಿಂಗ್ ಕೋಚ್ ಆಗಿದ್ದಾರೆ.

ವಾಂಖೆಡೆ ಸ್ಟೇಡಿಯಂ ಮುಂಬೈ ಇಂಡಿಯನ್ಸ್‌ನ ತವರು ಮೈದಾನವಾಗಿದ್ದು, ಆ ತಂಡದ ನಾಯಕ ರೋಹಿತ್ ಶರ್ಮ ಹಾಗೂ ಕೋಚ್ ರಿಕಿ ಪಾಂಟಿಂಗ್‌ಗೆ ಸ್ಟೇಡಿಯಂನ ಬಗ್ಗೆ ಚೆನ್ನಾಗಿ ತಿಳಿದಿದೆ. ಆತಿಥೇಯ ಮುಂಬೈ ತಂಡ ಕಳೆದ ವರ್ಷದ ಐಪಿಎಲ್‌ನಲ್ಲಿ ಮೊದಲ ನಾಲ್ಕು ಪಂದ್ಯಗಳನ್ನು ಸೋಲುವ ಮೂಲಕ ಕಳಪೆ ಆರಂಭ ಪಡೆದಿತ್ತು ಕಳೆದ ವರ್ಷ ಮುಂಬೈ ತಂಡ ಗೆಲುವಿನ ಹಳಿಗೆ ಮರಳಲು ಪ್ರಮುಖ ಪಾತ್ರವಹಿಸಿದ್ದ ವಿಂಡೀಸ್ ಬ್ಯಾಟ್ಸ್‌ಮನ್ ಲೆಂಡ್ಲ್ ಸಿಮೊನ್ಸ್ ಮಾ.31 ರಂದು ನಡೆದ ಟ್ವೆಂಟಿ-20 ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಭಾರತದ ವಿರುದ್ದ ಆರ್ಭಟಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಐಪಿಎಲ್‌ನಲ್ಲಿ ಮತ್ತಷ್ಟು ನಿರೀಕ್ಷೆಯನ್ನು ಮೂಡಿಸಿದ್ದಾರೆ.

  ಮುಂಬೈ ಪರ ಸಿಮೊನ್ಸ್ ಹಾಗೂ ರೋಹಿತ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು, ಇಂಗ್ಲೆಂಡ್‌ನ ಹಾರ್ಡ್‌ಹಿಟ್ಟಿಂಗ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜೊಸ್ ಬಟ್ಲರ್,ಕೋರಿ ಆ್ಯಂಡರ್ಸನ್, ಬಿಗ್ ಹಿಟ್ಟರ್ ಕೀರನ್ ಪೊಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಅವರಿದ್ದಾರೆ.

ಮುಂಬೈ ತಂಡ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗರ ಅನುಪಸ್ಥಿತಿಯಲ್ಲಿ ತೆರವಾಗಿರುವ ಸ್ಥಾನವನ್ನು ತುಂಬಲು ಕಸರತ್ತು ನಡೆಸುತ್ತಿದೆ. ಮಾಲಿಂಗ ಲೀಗ್‌ನ ಮೊದಲಾರ್ಧದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ ಎಂದು ಕೋಚ್ ಪಾಂಟಿಂಗ್ ಗುರುವಾರ ತಿಳಿಸಿದ್ದಾರೆ.

ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಜಸ್‌ಪ್ರೀತ್ ಬುಮ್ರಾ, ಮಾಲಿಂಗರ ಸ್ಥಾನ ತುಂಬುವ ಸಾಧ್ಯತೆಯಿದ್ದು, ಬುಮ್ರಾಗೆ ಆ್ಯಂಡರ್ಸನ್, ಟಿಮ್ ಸೌಥಿ, ಮಿಚೆಲ್ ಮೆಕ್ಲಿನಘನ್ ಹಾಗೂ ಮರ್ಚಂಟ್ ಡಿ ಲಾಂಗ್ ಸಾಥ್ ನೀಡಲಿದ್ದಾರೆ.

ಸ್ಪಿನ್ ವಿಭಾಗದಲ್ಲಿ ಮುಂಬೈ ತಂಡ ಹಿರಿಯ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್‌ರನ್ನು ಹೆಚ್ಚು ಅವಲಂಭಿಸಿದೆ. ಟ್ವೆಂಟಿ-20 ವಿಶ್ವಕಪ್‌ನಲ್ಲಿ 15 ಸದಸ್ಯರ ತಂಡದಲ್ಲಿದ್ದ ಹರ್ಭಜನ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

ಮತ್ತೊಂದು ಪುಣೆ ತಂಡದ ಬ್ಯಾಟಿಂಗ್ ಸರದಿಯೂ ಬಲಿಷ್ಠವಾಗಿದೆ. ಆ ತಂಡದಲ್ಲಿ ಅಜಿಂಕ್ಯ ರಹಾನೆ, ಕೇವಿನ್ ಪೀಟರ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಮಾರ್ಷ್ ಹಾಗೂ ಎಫ್‌ಡು ಪ್ಲೆಸಿಸ್ ಹಾಗೂ ನಾಯಕ ಧೋನಿ ಅವರಿದ್ದಾರೆ.

ಪುಣೆ ತಂಡದಲ್ಲಿ ಅಲ್ಬಿ ಮೊರ್ಕೆಲ್ ಹಾಗೂ ಇರ್ಫಾನ್ ಪಠಾಣ್‌ರಂತಹ ಆಲ್‌ರೌಂಡರ್‌ಗಳಿದ್ದಾರೆ. ವೇಗ ಹಾಗೂ ಸ್ಪಿನ್ ಬೌಲಿಂಗ್ ವಿಭಾಗವನ್ನು ಕ್ರಮವಾಗಿ ಇಶಾಂತ್ ಶರ್ಮ ಹಾಗು ಆರ್.ಅಶ್ವಿನ್ ಮುನ್ನಡೆಸುವ ನಿರೀಕ್ಷೆಯಿದೆ. ಸ್ಪಿನ್ ವಿಭಾಗದಲ್ಲಿ ಅಶ್ವಿನ್ ಹಾಗೂ ಹರ್ಭಜನ್ ನಡುವೆ ಪೈಪೋಟಿ ಏರ್ಪಡಲಿದೆ. ಅಶ್ವಿನ್‌ಗೆ ಆಸ್ಟ್ರೇಲಿಯದ ಲೆಗ್ ಸ್ಪಿನ್ನರ್ ಆಡಮ್‌ಝಾಂಪ, ತಮಿಳುನಾಡಿನ ಮುಗುಗನ್ ಅಶ್ವಿನ್, ಮಧ್ಯಪ್ರದೇಶದ ಅಂಕಿತ್ ಶರ್ಮ ಸಾಥ್ ನೀಡಲಿದ್ದಾರೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಸಾಧನೆ

2008ರಲ್ಲಿ 5ನೆ ಸ್ಥಾನ, 2009ರಲ್ಲಿ 7ನೆ ಸ್ಥಾನ, 2010ರಲ್ಲಿ ರನ್ನರ್-ಅಪ್, 2011ರಲ್ಲಿ ಪ್ಲೇ-ಆಫ್, 2012ರಲ್ಲಿ ಪ್ಲೇ-ಆಫ್, 2013ರಲ್ಲಿ ಚಾಂಪಿಯನ್, 2014ರಲ್ಲಿ ಪ್ಲೇ-ಆಫ್ ಹಾಗೂ 2015ರಲ್ಲಿ ಚಾಂಪಿಯನ್.

ಹೈಲೈಟ್ಸ್

-ಮುಂಬೈ ಇಂಡಿಯನ್ಸ್ ಸತತ ಆರು ಋತುವಿನಲ್ಲಿ ಸೆಮಿಫೈನಲ್/ಪ್ಲೇ-ಆಫ್‌ಗೆ ತೇರ್ಗಡೆಯಾಗಿದೆ. ಕೇವಲ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರ ಅತ್ಯಂತ ಹೆಚ್ಚು ಬಾರಿ(8) ಪ್ಲೇ-ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

 -ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಹೋದರರಾದ ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ ಸ್ಥಾನ ಪಡೆದಿದ್ದಾರೆ.ಒಂದೇ ಐಪಿಎಲ್ ತಂಡದಲ್ಲಿ ಸಹೋದರರು ಸ್ಥಾನ ಪಡೆದಿರುವುದು ಇದೇ ಮೊದಲು.

-ಹರ್ಭಜನ್ ಸಿಂಗ್ ಹಾಗೂ ಲಸಿತ್ ಮಾಲಿಂಗ 2008ರಲ್ಲಿ ಐಪಿಎಲ್ ಆರಂಭವಾದಂದಿನಿಂದ ಇಂದಿನ ತನಕ ತಂಡದಲ್ಲಿದ್ದಾರೆ. ವಿರಾಟ್ ಕೊಹ್ಲಿ ಒಂದೇ ತಂಡದಲ್ಲಿ (ಆರ್‌ಸಿಬಿ) ಆಡುತ್ತಿರುವ ಇನ್ನೋರ್ವ ಆಟಗಾರ.

ತಂಡಗಳು:

 ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್: ಎಂಎಸ್ ಧೋನಿ(ನಾಯಕ), ಅಜಿಂಕ್ಯ ರಹಾನೆ, ಕೇವಿನ್ ಪೀಟರ್ಸನ್, ಎಫ್‌ಡು ಪ್ಲೆಸಿಸ್, ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್, ಜಸ್‌ಕರಣ್ ಸಿಂಗ್, ರವಿಚಂದ್ರನ್ ಅಶ್ವಿನ್, ಅಂಕಿತ್ ಶರ್ಮ, ಅಲ್ಬಿ ಮೊರ್ಕೆಲ್, ಇರ್ಫಾನ್ ಪಠಾಣ್, ಇಶಾಂತ್ ಶರ್ಮ, ಈಶ್ವರ ಪಾಂಡೆ, ತಿಸಾರ ಪೆರೇರ, ಸೌರಭ್ ತಿವಾರಿ, ಆರ್.ಪಿ. ಸಿಂಗ್, ರಜತ್ ಭಾಟಿಯಾ, ಅಂಕುಶ್ ಬೈನ್ಸ್, ಬಾಬಾ ಅಪರಾಜಿತ್, ಮುರುಗನ್ ಅಶ್ವಿನ್, ಅಶೋಕ್ ದಿಂಡಾ, ದೀಪಕ್ ಚಾಹರ್, ಸ್ಕಾಟ್ ಬೊಲ್ಯಾಂಡ್, ಪೀಟರ್ ಹ್ಯಾಂಡ್ಸ್‌ಕಾಂಬ್, ಆಡಮ್ ಝಾಂಪ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ(ನಾಯಕ), ಲೆಂಡ್ಲ್ ಸಿಮೊನ್ಸ್, ಪಾರ್ಥಿವ್ ಪಟೇಲ್, ಕೀರನ್ ಪೊಲಾರ್ಡ್, ಅಂಬಟಿ ರಾಯುಡು, ಹಾರ್ದಿಕ್ ಪಾಂಡ್ಯ, ಹರ್ಭಜನ್ ಸಿಂಗ್, ಕೋರಿ ಆ್ಯಂಡರ್ಸನ್, ಮಿಚೆಲ್ ಮೈಕ್ಲಿನಘನ್, ಜೊಸ್ ಬಟ್ಲರ್, ಉನ್ಮುಕ್ತ್ ಚಂದ್, ಮರ್ಚಂಟ್ ಡಿ ಲ್ಯಾಂಗ್, ಸಿದ್ದೇಶ್ ಲಾಡ್, ಜಸ್‌ಪ್ರೀತ್ ಬುಮ್ರಾ, ಶ್ರೇಯಸ್ ಗೋಪಾಲ್, ಟಿಮ್ ಸೌಥಿ, ಜಗದೀಶ್ ಸುಚಿತ್, ಆರ್.ವಿನಯಕುಮಾರ್, ಕ್ರುನಾಲ್ ಪಾಂಡ್ಯ, ನಾಥು ಸಿಂಗ್, ಅಕ್ಷಯ್ ವಖಾರೆ, ನಿತಿಶ್ ರಾಣಾ, ಜಿತೇಶ್ ಶರ್ಮ, ಕಿಶೋರ್ ಕಾಮತ್, ದೀಪಕ್ ಪೂನಿಯಾ

ಪಂದ್ಯ ಆರಂಭದ ಸಮಯ: ರಾತ್ರಿ 8:00

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News