ಕಾಶ್ಮೀರ: ಗೋಲಿಬಾರ್ಗೆ ಇಬ್ಬರು ಬಲಿ
ಜಮ್ಮು, ಎ.12: ಜಮ್ಮುಕಾಶ್ಮೀರದ ಹಂಡ್ವಾರದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಕೆಲವು ಯೋಧರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಭದ್ರತಾಪಡೆಗಳು ಗುಂಡು ಹಾರಿಸಿದ್ದರಿಂದ ಇಬ್ಬರು ಮೃತಪಟ್ಟಿದ್ದಾರೆ.
ಕುಪ್ವಾರಾ ಜಿಲ್ಲೆಯ ಹಂಡ್ವಾರ ಪಟ್ಟಣದಲ್ಲಿ ವಿದ್ಯಾರ್ಥಿನಿಯು ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಭದ್ರತಾಪಡೆಗಳ ಕೆಲವು ಯೋಧರು ಆಕೆಗೆ ಕಿರುಕುಳ ನೀಡಿದರೆನ್ನಲಾಗಿದೆ. ಇದರಿಂದ ಕೆರಳಿದ ಸಾರ್ವಜನಿಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಉದ್ರಿಕ್ತ ಪ್ರತಿಭಟನಾಕಾರರು ಭದ್ರತಾಪಡೆಗಳ ಠಾಣೆಗಳ ಮೇಲೂ ಕಲ್ಲೆಸೆಯತೊಡಗಿದರು. ಆಗ ಅಲ್ಲಿದ್ದ ಯೋಧರು ಜನರ ಮೇಲೆ ಗುಂಡು ಹಾರಿಸಿದರೆಂದು ಮೂಲಗಳು ತಿಳಿಸಿವೆ. ಗುಂಡೆಸೆತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದು, ಅವರನ್ನು ಇಕ್ಬಾಲ್ ಅಹ್ಮದ್ ಹಾಗೂ ನಯೀಮ್ ಭಟ್ ಎಂದು ಗುರುತಿಸಲಾಗಿದೆ. ಈ ಮಧ್ಯೆ ಸೇನಾಪಡೆಯು ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿ, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಹಾಗೂ ತಪ್ಪಿತಸ್ಥರನ್ನು ಕಾನೂನು ಪ್ರಕಾರವಾಗಿ ಶಿಕ್ಷೆಗೊಳಪಡಿಸಲಾಗುವುದೆಂದು ಅದು ಹೇಳಿದೆ.