×
Ad

ಲಡ್ಡೂ ಪಾಲಿಟಿಕ್ಸ್: ಟಿಎಂಸಿಗೆ ಮುಜುಗರ ತಂದ ನಕಲಿ ಫೋಟೋ

Update: 2016-04-23 23:16 IST

 ಕೋಲ್ಕತಾ,ಎ.23: ಬಿಜೆಪಿ ನಾಯಕ ರಾಜ್‌ನಾಥ್‌ಸಿಂಗ್‌ಅವರು ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಅವರಿಗೆ ಲಡ್ಡೊಂದನ್ನು ತಿನಿಸುವ ಛಾಯಾಚಿತ್ರವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ, ಆನಂತರ ಅದು ನಕಲಿಯೆಂದು ತಿಳಿದ ಬಳಿಕ ಮುಜುಗರಕ್ಕೀಡಾದ ಪ್ರಸಂಗ ಶನಿವಾರ ನಡೆದಿದೆ.

ಕೋಲ್ಕತಾದಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಟಿಎಂಸಿ ನಾಯಕ ಡೆರೆಕ್ ಓ ಬ್ರಿಯಾನ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಭಾಷಣಗಳು ಎರಡು ವಿಡಿಯೋ ಹಾಗೂ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ಸಿಂಗ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರಿಗೆ ಲಾಡು ತಿನ್ನಿಸುವ ಛಾಯಾಚಿತ್ರಗಳನ್ನು ಪ್ರದರ್ಶಿಸಿದರು.

ಈ ಚಿತ್ರದ ಬಗ್ಗೆ ಗಮನಸೆಳೆದ ಅವರು, ಬಿಜೆಪಿ ಹಾಗೂ ಸಿಪಿಎಂ, ‘ಅಂದರ್ ದೋಸ್ತಿ, ಬಾಹರ್ ಕುಸ್ತಿ’ ಎಂಬಂತೆ ನಾಟಕವಾಡುತ್ತಿವೆಯೆಂದು ಟೀಕಿಸಿದರು.

ಆನಂತರ ಬಿಜೆಪಿಯು ಹೇಳಿಕೆ ನೀಡಿ, ಟಿಎಂಸಿ ಬಿಡುಗಡೆಗೊಳಿಸಿದ ಈ ಛಾಯಾಚಿತ್ರವು ನಕಲಿಯೆಂದು ಸ್ಪಷ್ಟಪಡಿಸಿತು. ರಾಜ್‌ನಾಥ್‌ಸಿಂಗ್ ಪ್ರಧಾನಿ ನರೇಂದ್ರ ಮೋದಿಗೆ ಸಿಹಿ ತಿನ್ನಿಸುತ್ತಿರುವ ನೈಜ ಚಿತ್ರವನ್ನು ಫೋಟೋ ಶಾಪ್ ಮಾಡಿ ನಕಲಿ ಚಿತ್ರವನ್ನು ಸೃಷ್ಟಿಸಲಾಗಿದೆಯೆಂದು ಅದು ತಿಳಿಸಿತು. ಇದೇ ವೇಳೆ ನೈಜ ಛಾಯಾಚಿತ್ರದ ಪ್ರತಿಗಳನ್ನು ಅದು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿತು.ಇದರ ಬೆನ್ನಲ್ಲೇ ಟಿಎಂಸಿ ಆ ಛಾಯಾಚಿತ್ರವು ನಕಲಿಯೆಂದು ಒಪ್ಪಿಕೊಂಡಿತು ಕೂಡಲೇ ಅದನ್ನು ತನ್ನ ವೆಬ್‌ಸೈಟ್‌ನಿಂದ ತೆರವುಗೊಳಿಸಿತು.

 ತಿರುಚಿದ ಛಾಯಾಟಿತ್ರವನ್ನು, ಅದರಲ್ಲೂ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸುವುದು ಗಂಭೀರ ಅಪರಾಧವಾಗಿದ್ದು, ಈ ಬಗ್ಗೆ ಡೆರೆಕ್ ಓಬ್ರಿಯಾನ್ ಹಾಗೂ ಟಿಎಂಸಿ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಸಿಪಿಎಂ ಸಂಸದ ಮುಹಮ್ಮದ್ ಸಲೀಂ ತಿಳಿಸಿದ್ದಾರೆ.

ಟಿಎಂಸಿಯ ಈ ಕೃತ್ಯವು ಹತಾಶೆಯ ಕ್ರಮವಾಗಿದಯೆಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿದ್ಧಾರ್ಥನಾಥ್ ಸಿಂಗ್ ಟೀಕಿಸಿದ್ದು, ಈ ವಿಷಯವಾಗಿ ಕಾನೂನು ಕ್ರಮದ ಮೊರೆಹೋಗುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News