×
Ad

ಮುಸ್ಲಿಮರಿಗೆ ಮನೆ ಬಾಡಿಗೆ ನೀಡದ ಭಾರತೀಯರ ಮನಸ್ಥಿತಿಯ ವಿಶ್ವ ಸಂಸ್ಥೆಯ ತಜ್ಞರ ಟೀಕೆ , ಒಪ್ಪದ ಕೇಂದ್ರ ಸರಕಾರ

Update: 2016-04-26 12:20 IST

ಹೊಸದಿಲ್ಲಿ, ಎ. 26: ಮುಸ್ಲಿಮರಿಗೆ ಮನೆಬಾಡಿಗೆಗೆ ನೀಡಲು ನಿರಾಕರಿಸುವ ಭಾರತೀಯರ ಮನಸ್ಥಿತಿ ವಿಶ್ವ ಸಂಸ್ಥೆ ತಜ್ಞರ ಟೀಕೆಗೆ ಗುರಿಯಾಗಿದ್ದು, ಭಾರತಕ್ಕೆಇತ್ತೀಚೆಗೆ 12 ದಿನಗಳ ಭೇಟಿಗೆ ಆಗಮಿಸಿದ್ದ ವಿಶ್ವ ಸಂಸ್ಥೆಯ ವಿಶೇಷ ಅಧಿಕಾರಿ ಲೀಲಾನಿ ಫರ್ಹಾ ಇಲ್ಲಿನ ವಸತಿ ಕ್ಷೇತ್ರವನ್ನು ಪರಿಶೀಲನೆಗೈದಾಗ ಹಲವಾರು ದೂರು ದುಮ್ಮಾನಗಳು ಅವರ ಗಮನಕ್ಕೆ ಬಂದವು.

ದೆಹಲಿ, ಮುಂಬೈ ಮತ್ತಿತರ ದೊಡ್ಡ ನಗರಗಳಲ್ಲಿ ಮುಸ್ಲಿಮರಿಗೆ ಮನೆಯನ್ನು ಬಾಡಿಗೆಗೆ ಹುಡುಕುವುದು ತ್ರಾಸದಾಯಕ ಕಾರ್ಯವಾಗಿದೆಯೆಂಬುನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಮುಸ್ಲಿಮರೆಂದ ಕೂಡಲೇ ಬಾಡಿಗೆಗೆ ಮನೆ ನೀಡಲೊಲ್ಲೆ ಎಂದು ಹೇಳುವ ಮನೆ ಮಾಲಕರು, ಬಾಡಿಗೆಗೆ ಮನೆ ನೀಡಲು ಒಪ್ಪಿದರೂ ಮನೆಗೆ ನೆಂಟರಿಷ್ಟರು, ಸ್ನೇಹಿತರ್ಯಾರೂ ಬರಬಾರದೆಂಬ ಕಟ್ಟಳೆಗಳಿಂದಾಗಿ ಮುಸ್ಲಿಮರು ತಮ್ಮದೇ ಸಮುದಾಯದ ಜನ ಹೆಚ್ಚಾಗಿ ವಾಸಿಸುವೆಡೆ ಮನೆಗಳನ್ನು ಹುಡುಕುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಭಾರತದಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳ ಹಾಗೂ ಮಹಿಳೆಯರ ವಿರುದ್ಧ ತಾರತಮ್ಯದ ಇತಿಹಾಸವಿದೆಯೆಂದು ಹಾಗೂ ಈ ನೀತಿ ಈಗಲೂ ಹಲವು ವಿಧದಲ್ಲಿ ತೋರ್ಪಡುತ್ತಿದೆಯೆಂದು ತನ್ನ ಹೇಳಿಕೆಯಲ್ಲಿ ಫರ್ಹಾ ತಿಳಿಸಿದ್ದು ಭಾರತ ಸರಕಾರಕ್ಕೆ ಇರಿಸುಮುರಿಸುಂಟು ಮಾಡಿದೆ.

ಜಿನೇವಾದಲ್ಲಿ ಮಾರ್ಚ್ 2017 ರಲ್ಲಿ ನಡೆಯುವ ವಿಶ್ವ ಸಂಸ್ಥೆಯ ಮಾನವ ಹಕ್ಕು ಮಂಡಳಿಯ 34ನೆ ಅಧಿವೇಶನದಲ್ಲಿ ಈ ಬಗ್ಗೆ ವಿಸ್ತತ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದ ಅವರು ತನ್ನ ಅವಲೋಕನಾ ವರದಿಯನ್ನು ಮೊದಲು ಭಾರತ ಸರಕಾರಕ್ಕೆ ಸಲ್ಲಿಸಿ ಅದರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಆದರೆ ಫರ್ಹಾರ ಅಭಿಪ್ರಾಯ ಭಾರತ ಸರಕಾರಕ್ಕೆ ಅಸಮಾಧಾನ ತಂದಿದ್ದು ಆಕೆಯ ಅಭಿಪ್ರಾಯ ಭಾರತದ ಬಗ್ಗೆ ವಿಶ್ವ ಸಂಸ್ಥೆಗೆ ಇರುವ ಅಭಿಪ್ರಾಯಕ್ಕೆ ತಾಳೆಯಾಗಬೇಕೆಂದೇನೂ ಇಲ್ಲವೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ತರುವಾಯ ಬಲವಂತದ ತೆರವು ಕಾರ್ಯಾಚರಣೆ ಹಾಗೂ ನೆಲಸಮ ಕಾರ್ಯಾಚರಣೆಗೆ ನಿಷೇಧ ಹೇರಬೇಕೆಂದು ಹೇಳಿದ ಫರ್ಹಾ ಭಾರತಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳನ್ವಯ ರಾಷ್ಟ್ರೀಯ ವಸತಿ ನೀತಿಯ ಅಗತ್ಯವಿದೆಯೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News