ಸಂಘಪರಿವಾರ ಮುಕ್ತ ಭಾರತಕ್ಕೆ ಸಚಿವ ರೈ ಕರೆ

Update: 2016-05-03 19:01 GMT

ಮಂಗಳೂರು, ಮೇ 3: ಭಾರತವನ್ನು ಹಸಿವು ಮುಕ್ತಗೊಳಿಸುವುದರ ಜೊತೆಗೆ ಸಂಘ ಪರಿವಾರ ಮುಕ್ತ ಭಾರತ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
 ಜಿಲ್ಲಾಧಿಕಾರಿ ಕಚೇರಿ ಬಳಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಮಾಡುತ್ತಿರುವ ಆರೋಪವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು.

ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿಯಂತಹ ವ್ಯಕ್ತಿಯ ಮಾತುಗಳು ನಮಗೆ ಅಗತ್ಯವಿಲ್ಲ. ಅಪಪ್ರಚಾರದ ಮೂಲಕ ಸಂಘ ಪರಿವಾರ ಶಕ್ತಿಗಳು ಅಧಿಕಾರ ಪಡೆಯಲು ಮಾಡುವ ಹುನ್ನಾರಕ್ಕೆ ಸರಿಯಾದ ಉತ್ತರ ನೀಡಬೇಕಾಗಿದೆ. ಸುಳ್ಳು ಆರೋಪಗಳ ಮೂಲಕ ಯುವಜನತೆಯನ್ನು ಹಾದಿ ತಪ್ಪಿಸುವ ಸಂಘ ಪರಿವಾರದ ವಿರುದ್ಧ ಕಾಂಗ್ರೆಸ್ ವತಿಯಿಂದ ನಿರಂತರ ಹೋರಾಟ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ಮೇಯರ್ ಹರಿನಾಥ್, ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ, ಐವನ್ ಡಿಸೋಜ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಮಾತನಾಡಿದರು. ಶಶಿಧರ ಹೆಗ್ಡೆ, ಈಶ್ವರ ಉಳ್ಳಾಲ, ಮಾಜಿ ಮೇಯರ್ ಅಶ್ರಫ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News