ಮನೆಗೆ ನುಗ್ಗಿ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಆರೋಪಿಯ ಸೆರೆ

Update: 2016-05-05 11:57 GMT

ಉಪ್ಪಿನಂಗಡಿ, ಮೇ 5: ಅಪ್ರಾಪ್ತ ಬಾಲಕಿಯೋರ್ವಳು ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭ ನೆರೆಮನೆಯ ವ್ಯಕ್ತಿಯೋರ್ವ ಅಲ್ಲಿಗೆ ತೆರಳಿ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನೆಲ್ಯಾಡಿಯ ಮೊರಂಕಾಲದ ಆನಂದ (30) ಬಂಧಿತ ಆರೋಪಿ. ನೆಲ್ಯಾಡಿ ಮೊರಂಕಾಲದಲ್ಲಿ ಪರಿಶಿಷ್ಟ ಜಾತಿಯ ಅಪ್ರಾಪ್ತ ಬಾಲಕಿಯೋರ್ವಳು ಮೇ 4ರಂದು ಮಧ್ಯಾಹ್ನ ತನ್ನ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ನೆರೆಮನೆಯ ನಿವಾಸಿ ಆನಂದ ಎಂಬಾತ ಇವರ ಮನೆಗೆ ಬಂದಿದ್ದು, ಈ ಬಾಲಕಿಯಲ್ಲಿ ತಾನು ನಿನ್ನನ್ನು ಪ್ರೀತಿಸುತ್ತೇನೆ. ಅದಕ್ಕೆ ನೀನು ಒಪ್ಪಬೇಕು ಎಂದು ಹೇಳಿದ್ದ. ಇದಕ್ಕೆ ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿಯು ಬಾಲಕಿಯ ಮಾನಭಂಗಕ್ಕೆ ಯತ್ನಿಸಿ ಪರಾರಿಯಾಗಿದ್ದ ಎನ್ನಲಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದು, ಉಪ್ಪಿನಂಗಡಿಯಲ್ಲಿರುವ ಪ್ರೊಬೆಷನರಿ ಎಎಸ್ಪಿ ಲಕ್ಷ್ಮಣ್ ನಿಂಬರ್ಗಿ ಅವರ ನಿರ್ದೇಶನದಂತೆ ಆರೋಪಿಯನ್ನು ನೆಲ್ಯಾಡಿ ಬಸ್ ನಿಲ್ದಾಣದ ಬಳಿ ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News