ಬಿಜೆಪಿಯ ಪೂರ್ವಜರಿಗೆ ದೇಶದಲ್ಲಿ ಯಾವುದೇ ಇತಿಹಾಸ ಇಲ್ಲ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ವಾರಣಾಸಿ, ಮೇ 13: ವಾರಣಾಸಿಯಲ್ಲಿ ನಡೆದ ಜೆಡಿಯು ರಾಜ್ಯಮಟ್ಟದ ಕಾರ್ಯಕರ್ತರ ಸಮ್ಮೇಳನದಲ್ಲಿ ಭಾಗವಹಿಸಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಮಾತಿನ ಪ್ರಹಾರ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಹಳ ಅಹಂಕಾರಿಯಾಗಿದೆ. ಅದು ಹೇಳುವುದು ಮತ್ತು ಮಾಡುವುದರಲ್ಲಿ ಭಾರಿ ಅಂತರವಿದೆ. ಬಿಜೆಪಿ ತನ್ನ ಚುನಾವಣಾ ಭರವಸೆಗಳಿಂದ ಉಲ್ಟಾ ಹೊಡೆದಿದೆ. ಹದಿನೈದು ಲಕ್ಷ ರೂ.ನೀಡುವ ಭರವಸೆ ನೀಡಿದ ಬಿಜೆಪಿ ಇದನ್ನು ಒಟ್ಟಾರೆ ಎಂದು ಹೇಳತೊಡಗಿದೆ. ಇಂದು ದೇಶದಲ್ಲಿ ಜನರು ಸ್ವಯಂ ಮೋಸಹೋದೆವು ಎಂಬ ಅನುಭವ ಹೊಂದಿದ್ದಾರೆ. ಬಿಜೆಪಿ ಅವರ ನಿರೀಕ್ಷೆಗಳಿಗೆ ನೀರು ಸುರಿದಿದೆ ಎಂದ ನಿತೀಶ್ ಕುಮಾರ್ ಉತ್ತರಪ್ರದೇಶ ಜನತೆ ಬಿಜೆಪಿಯ ಕುರಿತು ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಿದ್ದಾರೆಂದು ವರದಿಯಾಗಿದೆ.
ಬಿಜೆಪಿಯ ಪೂರ್ವಜರಿಗೆ ದೇಶದಲ್ಲಿ ಯಾವುದೇ ಇತಿಹಾಸವಿಲ್ಲ. ಸ್ವಾತಂತ್ರ್ಯದ ಸಮರದಲ್ಲಿ ಬಿಜೆಪಿ ಮಂದಿ ಸಹಕರಿಸಿಲ್ಲ. ಭಗವಾಧ್ವಜದ ಜನರು ಈಗ ತ್ರಿವರ್ಣ ಧ್ವಜದ ಕುರಿತು ಮಾತಾಡುತ್ತಿದ್ದಾರೆ ಎಂದು ನಿತೀಶ್ ಮಾರ್ಮಿಕವಾಗಿ ಹೇಳಿದ್ದಾರೆ. ಬಿಹಾರಚುನಾವಣೆಯಲ್ಲಿ ಜೆಡಿಯು ನೀಡಿದ ಭರವಸೆಯನ್ನು ಪೂರೈಸಿದೆ. ಶರಾಬು ಬಂದ್ ಮಾಡಬೇಕೆಂಬುದು ಮಹಿಳೆಯರ ಬೇಡಿಕೆಯಾಗಿತ್ತು. ಬಿಹಾರದಲ್ಲಿ ಪಾನ ನಿರೋಧದಿಂದಾಗಿ ಮಹಿಳೆಯರು ತುಂಬಾ ಸಂತೋಷಗೊಂಡಿದ್ದಾರೆ. ಬಿಹಾರದ ಪಾನನಿರೋಧದ ನಂತರ ಝಾರ್ಖಂಡ್ನಲ್ಲಿ ಕೂಡಾ ಈ ಬೇಡಿಕೆ ತೀವ್ರವಾಗಿದೆ ಎಂದು ನಿತೀಶ್ ಹೇಳಿದ್ದಾಗಿ ವರದಿಗಳು ತಿಳಿಸಿವೆ.