ಬಾಗಿಲು ಮುಚ್ಚಿ ಸರ್ವಾಧಿಕಾರಿ ಧೋರಣೆ: ಬಿಜೆಪಿ ಆರೋಪ

Update: 2016-05-31 13:46 GMT

ಪುತ್ತೂರು, ಮೇ 31: ಪುತ್ತೂರು ನಗರಸಭೆಯಲ್ಲಿ ಬಾಕಿ ಉಳಿದಿರುವ ಕಡತ ವಿಲೇವಾರಿ ಅಭಿಯಾನ ಇಂದಿನಿಂದ ಜೂ.4ರ ತನಕ ನಡೆಯಲಿದ್ದು, ಕಡತ ವಿಲೇವಾರಿ ಆರಂಭಗೊಂಡ ಮೊದಲ ದಿನದಂದೇ ಅಭಿಯಾನದ ವಿಚಾರದಲ್ಲಿ ಅಪಸ್ವರ ಎದ್ದಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಯಿತು.

ಮೇ 31ರಿಂದ ಜೂನ್ 4ವರೆಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಿರಂತರ 12 ಗಂಟೆಗಳ ಕಾಲ ಸಂಬಂಧಪಟ್ಟ ಸಿಬ್ಬಂದಿ ಪೌರಾಯುಕ್ತೆ ರೇಖಾ ಜೆ.ಶೆಟ್ಟಿ ನೇತೃತ್ವದಲ್ಲಿ ಕಡತ ವಿಲೇವಾರಿ ಅಭಿಯಾನ ಆರಂಭಿಸುತ್ತಿದ್ದು, ಈ ಅವಧಿಯಲ್ಲಿ ಅಗತ್ಯ ಸೇವೆಗಳು ಕಚೇರಿಯ ಕೆಳ ಹಂತದಲ್ಲಿ ನಡೆಯಲಿದ್ದು, ಮೇಲಿನ ಮಹಡಿಯಲ್ಲಿ ಸಾರ್ವಜನಿಕರ ಸೇವೆಗಳಿಗೆ ಲಭ್ಯವಾಗುವುದಿಲ್ಲ ಎಂದು ನಗರಸಭಾ ಅಧ್ಯಕ್ಷರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದರು. ಮಧ್ಯಾಹ್ನ 2ರಿಂದ 3 ಗಂಟೆ ಅವಧಿಯಲ್ಲಿ ಸಾರ್ವಜನಿಕರ ಭೇಟಿಗೆ ಮೇಲಿನ ಮಹಡಿಯಲ್ಲಿ ಅವಕಾಶವಿದೆ ಎಂದು ಪ್ರಕಟಿಸಿದ್ದರು.

ಮಂಗಳವಾರ ಬೆಳಗ್ಗೆ ಕಡತ ವಿಲೇವಾರಿ ಅಭಿಯಾನ 9 ಗಂಟೆಗೆ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ನಗರಸಭೆಯ ಬಾಗಿಲುಗಳನ್ನು ಮುಚ್ಚಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದನ್ನು ಆಕ್ಷೇಪಿಸಿದ ವಿಪಕ್ಷ ಸದಸ್ಯ ರಾಜೇಶ್ ಬನ್ನೂರು, ಜೀವಂಧರ್ ಜೈನ್ ಮತ್ತಿತರ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರು. ನಗರಸಭೆ ಕಚೇರಿಯನ್ನು ಬಂದ್ ಮಾಡುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಆಪಾದಿಸಿದರೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಭಿಯಾನ ನಡೆಸಲಾಗುತ್ತಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಸಮರ್ಥಿಸಿಕೊಂಡರು.

ಕಡತ ವಿಲೇವಾರಿ ವಿಚಾರದಲ್ಲಿ ನಗರಸಭೆ ಕಚೇರಿ ಬಾಗಿಲು ಬಂದ್ ಮಾಡುವ ಮೂಲಕ ಆಡಳಿತ ಪಕ್ಷದವರು ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ. ಸಾರ್ವಜನಕರಿಗೆ ತೊಂದರೆಯಾಗದ ರೀತಿಯಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆಡಳಿತ ಪಕ್ಷವಾದ ಕಾಂಗ್ರೆಸ್ ಸದಸ್ಯರು ಸ್ಪಷ್ಟ ಪಡಿಸಿದ್ದಾರೆ. ಈ ಆರೋಪ ಪ್ರತ್ಯಾರೋಪ ವಿವಾದಕ್ಕೆ ಕಾರಣವಾಗಿದೆ.

ದಿನ ನಿತ್ಯದ ಕೆಲಸ ಮತ್ತು ಜನರ ತುರ್ತು ಸೇವೆಗೆ ಯಾವುದೇ ತೊಂದರೆ ಆಗದಂತೆ ಕಡತ ವಿಲೇವಾರಿ ಅಭಿಯಾನ ಮಾಡುತ್ತಿದ್ದೇವೆ. ತುರ್ತು ಭೇಟಿಗೂ ಅವಕಾಶವಿದೆ ಎಂದು ನಗರಸಬೆಯ ಆಯುಕ್ತೆ ರೇಖಾ ಜೆ.ಶೆಟ್ಟಿ ಅವರು ಸ್ಪಷ್ಟ ಪಡಿಸಿದ್ದಾರೆ.

ವಿಪಕ್ಷ ಅಸಮಾಧಾನ

ಕಡತ ವಿಲೇವಾರಿ ಅಭಿಯಾನ ಮಂಗಳವಾರ ಬೆಳಗ್ಗೆ 9 ಗಂಟೆಗೆ ಆರಂಗೊಂಡಿದ್ದು, ಈ ಸಂದರ್ಭದಲ್ಲಿ ನಗರಸಭೆಯ ಬಾಗಿಲುಗಳನ್ನು ಮುಚ್ಚಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ನಾವು ಬಂದು ದೂರು ನೀಡಿದ ಮೇಲೆ ಬಾಗಿಲು ತೆರೆಯಲಾಗಿದೆ . 11 ಗಂಟೆಯವರೆಗೆ ಪ್ರಧಾನ ಬಾಗಿಲು ಮುಚ್ಚಿತ್ತು. ಇದರಿಂದ ಜನರಿಗೆ ತುಂಬಾ ಸಮಸ್ಯೆಯಾಗಿದೆ ಎಂದು ಆರೋಪಿಸಿರುವ ವಿಪಕ್ಷ ಬಿಜೆಪಿ ಸದಸ್ಯ ರಾಜೇಶ್ ಬನ್ನೂರು, ನಗರಸಭೆ ಎಂಬುದು ಇಲ್ಲಿ ಆಡಳಿತ ಮಾಡುವವರ ಸೊತ್ತಲ್ಲ, ಅದು ಪುತ್ತೂರಿನ ಜನರ ಸೊತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿಜೆಪಿಯ ಜೀವಂಧರ್ ಜೈನ್, ಎಪ್ರಿಲ್ ಒಂದರಿಂದ ಆನ್‌ಲೈನ್ ದಾಖಲೀಕರಣ ಕಡ್ಡಾಯವಾಗಿದ್ದು, ಇದಾದ ಬಳಿಕ ಹೆಚ್ಚೆಂದರೆ 150 ಕಡತ ಬಾಕಿ ಇರಬಹುದು. ಇದನ್ನು ವಿಲೇವಾರಿ ಮಾಡುವ ಹೆಸರಲ್ಲಿ ನಗರಸಭೆಯನ್ನು ಬಂದ್ ಮಾಡಿರುವುದು ಎಷ್ಟು ಸರಿ, ಹಾಗಾದರೆ ಪ್ರತೀ ತಿಂಗಳು ಈ ಪದ್ಧತಿ ಪುನರಾವರ್ತನೆ ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಆಡಳಿತದ ಸಮರ್ಥನೆ

ಖಾತೆ, ಕಟ್ಟಡ ಪರವಾನಿಗೆ, ಉದ್ಯಮ ಪರವಾನಿಗೆ ಸೇರಿದಂತೆ ಎಲ್ಲವನ್ನು ಆನ್‌ಲೈನ್ ಕಡ್ಡಾಯ ಮಾಡಿರುವ ಕಾರಣ ಬಾಕಿ ಕಡತ ವಿಲೇವಾರಿ ಮಾಡುವುದು ಈಗ ಅನಿವಾರ್ಯವಾಗಿದೆ. ಇಲ್ಲದಿದ್ದರೆ ನಿರಂತರ ವಿಳಂಬ ಮುಂದುವರಿಯಲಿದೆ. ಜನತೆಯ ಒಳಿತಿಗಾಗಿ ನಾವು ಈ ಅಭಿಯಾನ ಕೈಗೊಂಡಿದ್ದೇವೆ. ಹಿಂದೆ ನಗರಸಭೆಯ ವಾಸ್ತುದೋಷ ಹೆಸರಿನಲ್ಲಿ ತಿಂಗಳುಗಟ್ಟಲೆ ಬಾಗಿಲು ಮುಚ್ಚಿದ್ದವರು ಈಗ ಮಾತನಾಡುವ ನೈತಿಕತೆ ಹೊಂದಿಲ್ಲ. ಜನ ಬೇಡ ಅಂದ್ರೆ ಅಭಿಯಾನ ನಿಲ್ಲಿಸುತ್ತೇವೆ . ಬಿಜೆಪಿಯವರು ಹೇಳಿದರೆಂದು ನಿಲ್ಲಿಸುವುದಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಎಚ್. ಮುಹಮ್ಮದ್ ಅಲಿ ತಿಳಿಸಿದ್ದಾರೆ.

ನಗರಸಭೆ ಪ್ರವೇಶಿಸಲು ನಾಲ್ಕು ಪ್ರವೇಶಗಳಿದ್ದು, ಈ ಪೈಕಿ ಒಂದನ್ನು ಮಾತ್ರ ಮುಚ್ಚಲಾಗಿತ್ತು. ಇದರಿಂದ ಏನು ಸಮಸ್ಯೆ ಎಂದು ಪ್ರಶ್ನಿಸಿರುವ ನಗರ ಸಭೆಯ ಅಧ್ಯಕ್ಷೆ ಜಯಂತಿ ನಾಯ್ಕಿ ಬಲ್ನಾಡು ಅವರು ನಾನು ಅಧ್ಯಕ್ಷೆಯಾದ ಬಳಿಕ ಜಾರಿಗೆ ಬರುತ್ತಿರುವ ಜನೋಪಯೋಗಿ ಕಾರ್ಯಕ್ರಮಗಳನ್ನು ಕಂಡು ಹೊಟ್ಟೆಕಿಚ್ಚಿನಿಂದ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಡತ ವಿಲೇವಾರಿ ಅಭಿಯಾನದ ಬಗ್ಗೆ ಮುಂಚಿತವಾಗಿ ಪ್ರಕಟಣೆ ನೀಡಲಾಗಿದೆ. ಉಪವಿಭಾಗಾಧಿಕಾರಿಗೂ ಪೂರ್ವ ಮಾಹಿತಿ ನೀಡಲಾಗಿದೆ. ಅಗತ್ಯ ಸೇವೆಗಳಾದ ಜನನ- ಮರಣ ದಾಖಲಾತಿ, ನೀರಿನ ಬಿಲ್, ನಗದು ವಿಭಾಗ, ಆರೋಗ್ಯ ವಿಭಾಗ ಮತ್ತು ಸಕಾಲ ವಿಭಾಗಗಳು ನಗರಸಭೆಯ ನೆಲ ಮಾಳಿಗೆಯಲ್ಲಿದ್ದು, ಅದನ್ನು ಮುಚ್ಚಿಲ್ಲ. ಮೊದಲ ಅಂತಸ್ತಿನಲ್ಲಿ ತುರ್ತು ಸೇವೆಗಳಿಲ್ಲ. ಅಲ್ಲಿ ಕಡತ ವಿಲೇವಾರಿ ಅಭಿಯಾನ ಮಾಡಲಾಗುತ್ತಿದೆ. ಅಲ್ಲಿ ಕೂಡ ಮಧ್ಯಾಹ್ನ 2ರಿಂದ 3 ಗಂಟೆ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತಪ್ಪು ಸಂದೇಶಕ್ಕೆ ದಾರಿ

 ಕಡತ ವಿಲೇವಾರಿ ಅಭಿಯಾನ ಉತ್ತಮ. ಆದರೆ ನಗರ ಸಭೆಯ ಉಪಾಧ್ಯಕ್ಷನಾದ ನನಗೇ ಈ ವಿಚಾರ ಗೊತ್ತಿಲ್ಲ. ಉತ್ತಮ ಕೆಲಸ ಎಂದು ಬಾಗಿಲು ಮುಚ್ಚಿ ಮಾಡಬೇಕಾದ ಅಗತ್ಯ ಏನಿದೆ. ಇದು ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ನಗರಸಭೆಯ ಉಪಾಧ್ಯಕ್ಷ, ಬಿಜೆಪಿ ಸದಸ್ಯ ವಿಶ್ವನಾಥ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News