×
Ad

ಮುಸ್ಲಿಮ್ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ಒಡವೆ ಒತ್ತೆಯಿಟ್ಟ ಟೀಚರ್!

Update: 2016-06-09 23:31 IST

  ಹೈದರಾಬಾದ್, ಜೂ.9 : ಜಾತಿ, ಧರ್ಮಗಳ ಹೆಸರಿನಲ್ಲಿ ಕಚ್ಚಾಡುವ ಜನರ ನಡುವೆ ಮಾನವತೆಯ ಹಣತೆ ಬೆಳಗಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಶ್ರೀ ದೇವಿ ಎಂಬ ಹೆಸರಿನ ಟೀಚರ್. ಅವರೇನು ಮಾಡಿದರು ಗೊತ್ತೇ ? ತಮ್ಮ ಬಡ ಮುಸ್ಲಿಮ್ ವಿದ್ಯಾರ್ಥಿಯೊಬ್ಬನಿಗೆ ಭವನ್ಸ್ ಕಾಲೇಜಿನಲ್ಲಿ ಪ್ರವೇಶ ದಕ್ಕಿಸುವ ಸಲುವಾಗಿ ತಮ್ಮ ಒಡವೆಗಳನ್ನೇ ಒತ್ತೆಯಿಟ್ಟು ಆತನ ಒಂದು ವರ್ಷದ ಫೀಸ್ ಪಾವತಿಸಿದ್ದಾರೆ. ಆಕೆಯ ಈ ಮಹಾನ್ ಕಾರ್ಯವನ್ನು ಗುರುತಿಸಿ ಹೀಲಿಂಗ್ ಹ್ಯಾಂಡ್ ಎಂಬ ಸಂಸ್ಥೆ ಆಕೆಗೆ ರೂ. 14,000 ನಗದನ್ನು ಕಾಣಿಕೆಯಾಗಿ ನೀಡಿದೆಯಲ್ಲದೆ ಶಿಕ್ಷಕಿ ಒತ್ತೆಯಿಟ್ಟ ಒಡವೆಯನ್ನು ರೂ. 27,000 ಪಾವತಿಸಿ ಬಿಡಿಸಿಕೊಂಡಿದೆ.

   ಸಿಯಾಸತ್ ಡೈಲಿ ಪತ್ರಿಕೆಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ದೈನಿಕದ ಸುದ್ದಿ ಸಂಪಾದಕ ಆಮಿರ್ ಆಲಿ ಖಾನ್ ಶ್ರೀದೇವಿ ಟೀಚರ್‌ಗೆ ನಗದು ಪುರಸ್ಕಾರ ನೀಡಿ ಆಕೆಗೆ ಶಾಲು ಹೊದಿಸಿ ಸನ್ಮಾನಿಸಿದರು. ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಆಡಳಿತ ಟ್ರಸ್ಟಿ ಡಾ. ಶೌಕತ್ ಅಲಿ ಮಿರ್ಜಾ ಮತ್ತು ಪೈಝ್-ಇ- ಆವ್ ಟ್ರಸ್ಟ್ ಇದರ ಕಾರ್ಯದರ್ಶಿ ಇಫ್ತಿಕಾರ್ ಹುಸೈನ್ ಉಪಸ್ಥಿತರಿದ್ದರು.
    ಈ ಸಂದರ್ಭ ಮಾತನಾಡಿದ ಮಿರ್ಝಾ ಘಟನಾವಳಿಗಳನ್ನು ವಿವರಿಸಿದ್ದು ಹೀಗೆ. ಮಲೌಳಿಯಲ್ಲಿ ಆಟೊ ಚಾಲಕನಾಗಿದ್ದ ಮುಸ್ಲಿಮ್ ವ್ಯಕ್ತಿಯೊಬ್ಬರ ಪುತ್ರನಿಗೆ ಹೆಲ್ಪಿಂಗ್ ಹ್ಯಾಂಡ್ ಈ ಹಿಂದೆ ಶಿಕ್ಷಣದ ಉದ್ದೇಶಕ್ಕಾಗಿ ರೂ. 11,500 ನೀಡಿತ್ತು. ಅದೇ ಹುಡುಗನ ಕಿರಿಯ ಸಹೋದರನಿಗೆ ಭವನ್ಸ್ ಕಾಲೇಜಿನಲ್ಲಿ ಪ್ರವೇಶಾತಿ ಶುಲ್ಕ ಪಾವತಿಸಲು ಹಣವಿಲ್ಲದೆ ಆತನ ತಂದೆ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಆದರೆ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಒಂದೇ ಕುಟುಂಬದ ಇಬ್ಬರಿಗೆ ಹಣಕಾಸು ಸಹಾಯ ಮಾಡುವಂತಿರಲಿಲ್ಲ. ಮರುದಿನ ಬಾಲಕನ ಹೆತ್ತವರು ರೂ. 20,000ದೊಂದಿಗೆ ಆತನನ್ನು ಕಾಲೇಜಿಗೆ ದಾಖಲು ಮಾಡಿದಾಗ ಎಲ್ಲರಿಗೂ ಆಶ್ಚರ್ಯ ಕಾದಿತ್ತು. ಶ್ರೀದೇವಿ ಟೀಚರ್ ತಮ್ಮ ಒಡವೆಗಳನ್ನು ಒತ್ತೆಯಿಟ್ಟು ಆತನಿಗೆ ಕಾಲೇಜು ಫೀಸ್‌ಗೆ ಹಣ ಹೊಂದಿಸಿದ್ದರೆಂದು ನಂತರವಷ್ಟೇ ತಿಳಿದು ಬಂದಿತ್ತು.
 ಅವರ ಈ ಕಾರ್ಯವನ್ನು ಗುರುತಿಸಿದ ಸಂಸ್ಥೆ ಅವರನ್ನು ಸನ್ಮಾನಿಸಿತ್ತಲ್ಲದೆ ಅದರ ಟ್ರಸ್ಟಿ ಝಕಿ ಅಬ್ಬಾಸ್ ನಾಸೆರ್ ಇಬ್ಬರು ಸಹೋದರರ ಶೈಕ್ಷಣಿಕ ಶುಲ್ಕ ರೂ 23,000 ಭರಿಸುವ ಭರವಸೆಯಿತ್ತರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News