ಹರ್ಯಾಣದ ರಾಜ್ಯಸಭಾ ಚುನಾವಣೆ ರದ್ದುಗೊಳಿಸುವಂತೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ,ಜೂ.13: ರಾಜ್ಯಸಭೆಯ ಎರಡು ಸ್ಥಾನಗಳಿಗಾಗಿ ಹರ್ಯಾಣದಿಂದ ನಡೆದಿದ್ದ ಚುನಾವಣೆಯನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗವನ್ನು ಆಗ್ರಹಿಸಿದೆ. ತನ್ನ ಬೆಂಬಲಿತ ಅಭ್ಯರ್ಥಿ ಚುನಾವಣೆಯಲ್ಲಿ ಸೋಲಲು ಬಿಜೆಪಿ ಮತ್ತು ಆರೆಸ್ಸೆಸ್ ಒಳಸಂಚು ಕಾರಣವೆಂದು ಅದು ಆರೋಪಿಸಿದೆ.
ಪಕ್ಷೇತರ ಅಭ್ಯರ್ಥಿಯಾಗಿದ್ದ ಖ್ಯಾತ ನ್ಯಾಯವಾದಿ ಆರ್.ಕೆ.ಆನಂದ್ ಅವರನ್ನು ಸೋಲಿಸಲು ಮನೋಹರ್ಲಾಲ್ ಖಟ್ಟರ್ ಆಡಳಿತವು ಸರಕಾರಿ ಯಂತ್ರವನ್ನು ದುರುಪಯೋಗಿಸಿಕೊಂಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಪಕ್ಷದ ಹರ್ಯಾಣ ಘಟಕದ ಅಧ್ಯಕ್ಷ ಅಶೋಕ ತನ್ವರ್ ಮತ್ತು ಅದರ ಕಾನೂನು ವಿಭಾಗದ ಕಾರ್ಯದರ್ಶಿ ಕೆ.ಸಿ.ಮಿತ್ತಲ್ ಅವರನ್ನೊಳಗೊಂಡ ನಿಯೋಗವು ಆರೋಪಿಸಿದೆ.
ರಾಜ್ಯಸಭಾ ಚುನಾವಣೆಯ ಮತ ಎಣಿಕೆ ವೇಳೆ 14 ಕಾಂಗ್ರೆಸ್ ಶಾಸಕರ ಮತಗಳು ಅಸಿಂಧುಗೊಂಡಿದ್ದು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿದ್ದ ಝೀ ಟಿವಿಯ ಅಧ್ಯಕ್ಷ ಸುಭಾಷ್ ಚಂದ್ರ ಅವರು ಆಯ್ಕೆಯಾಗಿದ್ದರು. ಆನಂದ್ ಅವರು ಐಎನ್ಎಲ್ಡಿ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದರು.