ಹಿಂದುತ್ವದಿಂದ ಆಕರ್ಷಿತನಾಗಿದ್ದ ನಾರ್ವೆ ಹತ್ಯಾಕಾಂಡ ಅಪರಾಧಿ ಬ್ರೇವಿಕ್
ನಾರ್ವೆಯ ಬಂದೂಕು ದಾರಿ ಆಂಡರ್ಸ್ ಬೆಹ್ರಿಂಗ್ ಬ್ರೇವಿಕ್ ಅವರು ರಾಜಧಾನಿ ಓಸ್ಲೋ ಬಳಿ ದ್ವೀಪದಲ್ಲಿ ಇಟ್ಟ ಕಾರ್ ಬಾಂಬಿಗೆ ಸುಮಾರು 76 ಮಂದಿ ಹದಿಹರೆಯದವರು ಬಲಿಯಾಗಿದ್ದರು. ಆಗ ಬ್ರೇವಿಕ್ ಅಂತರ್ಜಾಲದಲ್ಲಿ ಪೋಸ್ಟ್ ಮಾಡಿರುವ 1,518 ಪುಟದ ಪ್ರಣಾಳಿಕೆಯಲ್ಲಿ ಭಾರತ ಮತ್ತು ಕೆಲವು ಹಿಂದೂ ರಾಷ್ಟ್ರೀಯವಾದಿಗಳಿಂದ ಪ್ರಭಾವಿತರಾಗಿದ್ದಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿ 2011ರಲ್ಲಿ ಪ್ರವೀಣ್ ಸ್ವಾಮಿ ಅವರು ಮಾಡಿರುವ ಈ ವರದಿ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಹಿಂದೂ ಸಂಘಟನೆಗಳು ತಮ್ಮ ವಿರುದ್ಧ ನಡೆಯುವ ಅನ್ಯಾಯವನ್ನು ಸಹಿಸದೆ ಇರುವುದು ಮತ್ತು ಪರಿಸ್ಥಿತಿ ನಿಯಂತ್ರಣ ಕಳೆದುಕೊಂಡಾಗ ಮುಸ್ಲಿಮರ ವಿರುದ್ಧ ಗಲಭೆಗಳು ಮತ್ತು ದಾಳಿಗಳನ್ನು ನಡೆಸುವುದನ್ನು ಬ್ರೇವಿಕ್ ಪ್ರಣಾಳಿಕೆಯಲ್ಲಿ ಪ್ರಶಂಸಿಸಿದ್ದಾರೆ. ಆರಂಭದಲ್ಲಿ ಆಂಡ್ರ್ಯೂ ಬ್ರೇವಿಕ್ ಎನ್ನುವ ಹೆಸರಿನಲ್ಲಿ ಪ್ರಕಟವಾದ ಪ್ರಣಾಳಿಕೆ ನಂತರ ಹಲವು ಹೆಸರುಗಳಲ್ಲಿ ಪೋಸ್ಟ್ ಆಗಿದೆ. ಈ ಪ್ರಣಾಳಿಕೆ ಸಿದ್ಧಪಡಿಸಲು ಬ್ರೇವಿಕ್ ಒಂಭತ್ತು ವರ್ಷ ಕೆಲಸ ಮಾಡಿದ್ದರು ಎನ್ನಲಾಗಿದೆ.
ಅಫ್ಘಾನಿಸ್ತಾನದ ಹಿಂದು ಕುಶ್ ಪ್ರಾಂತದಲ್ಲಿ ಹಿಂದೂಗಳ ಮಾರಣಹೋಮವಾಗಿರುವುದನ್ನು ಅಡಗಿಸಿಡುವ ಪಿತೂರಿಯಾಗಿದೆ ಎಂದು ಬ್ರೇವಿಕ್ ಹೇಳಿದ್ದರು. ಅದನ್ನು ಸಮರ್ಥಿಸಲು ತನ್ನ ಪ್ರಣಾಳಿಕೆಯಲ್ಲಿ ಹಿಂದೂ ಪಿತೂರಿ ಸಿದ್ಧಾಂತ ಎನ್ನುವ ವೆಬ್ತಾಣದ ವಿಷಯಗಳನ್ನು ಹೇಳಿದ್ದಾರೆ. ಇಂತಹ ಹಲವು ಹಿಂದೂ ವೆಬ್ತಾಣಗಳನ್ನು ಅವರು ತಮ್ಮ ಪ್ರಣಾಳಿಕೆಯಲ್ಲಿ ಮುಂದಿಟ್ಟಿದ್ದಾರೆ. ಭಾರತೀಯ/ ಹಿಂದೂ ಪ್ರತಿರೋಧವನ್ನು ಅವರು ವಿವರಿಸಲು ಹಿಂದುತ್ವ ಮತ್ತು ಕೇಸರೀಕರಣದ ಬಗ್ಗೆ ಹೇಳಿದ್ದಾರೆ.
ಒಂದು ಕಡೆ ಪ್ರಧಾನಿ ಮನ್ಮೋಹನ್ ಸಿಂಗ್ ಅವರು ಮುಸ್ಲಿಮರ ಪರ ಎಂದು ಆರೋಪಿಸಿದ್ದಾರೆ. ಯುರೋಪಿನ ಉನ್ನತವರ್ಗದಂತೆ ಭಾರತೀಯ ಉನ್ನತವರ್ಗವೂ ಮುಸ್ಲಿಮರು ಬೆಳೆಯಲು ಅವರನ್ನು ಓಲೈಸುತ್ತಾರೆ ಎಂದು ಬ್ರೇವಿಕ್ ಹೇಳಿದ್ದಾರೆ. ಬಹುಸಂಸ್ಕೃತಿಯ ವಿರುದ್ಧದ ಯುದ್ಧಕ್ಕೆ ತಯಾರಾಗಬೇಕಾದ ಎಲ್ಲಾ ವಿವರಗಳನ್ನೂ ಬ್ರೇವಿಕ್ ಈ ಪ್ರಣಾಳಿಕೆಯಲ್ಲಿ ಬಳಸಿಕೊಂಡಿದ್ದಾರೆ. ಯುದ್ಧಕ್ಕೆ ಬೇಕಾಗುವ ಸಮವಸ್ತ್ರಗಳು, ಲಾಂಛನಗಳು ಮತ್ತು ಪದಕಗಳನ್ನು ಭಾರತ ಮತ್ತು ಚೀನಾದಿಂದ ಆಮದು ಮಾಡುವ ಬಗ್ಗೆ ಮತ್ತು ಈಗಾಗಲೇ ಭಾರತದಿಂದ ಕೆಲವು ಲಾಂಛನದ ಮಾದರಿ ತರಿಸಿಕೊಂಡಿರುವುದನ್ನೂ ಹೇಳಿದ್ದರು. ಆದರೆ ಈ ಲಾಂಛನವನ್ನು ವಾರಣಾಸಿಯಲ್ಲಿ ನೆಲೆಸಿದ್ದ ಮುಸ್ಲಿಂ ನೇಕಾರರು ಮಾಡಿದ್ದೆನ್ನುವುದು ದೊಡ್ಡ ವಿಪರ್ಯಾಸ. ಅವರ ಪ್ರಕಾರ ಇಸ್ಲಾಂ ವಿರುದ್ಧ ಯುರೋಪ್ ಮತ್ತು ಉಪಖಂಡ ಜಂಟಿಯಾಗಿ ಪ್ರತಿರೋಧ ತೋರಿಸಬೇಕು. ಬಾಂಗ್ಲಾದೇಶ, ಭಾರತ ಮತ್ತು ಪಾಕಿಸ್ತಾನದ ಮುಸ್ಲಿಮೇತರ ಕಾರ್ಮಿಕರು ಯುರೋಪಿನಲ್ಲಿ ಕೆಲಸ ಮಾಡಲು ಯೋಗ್ಯರು ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಸಂಸದರಾಗಿದ್ದ ಬಿಪಿ ಸಿಂಘಾಲ್ ಬ್ರೇವಿಕ್ ಉದ್ದೇಶವನ್ನು ಸಮರ್ಥಿಸಿದರೂ ವಿಧಾನವನ್ನು ವಿರೋಧಿಸಿದ್ದರು. ಜಿಹಾದಿ ಭಯೋತ್ಪಾದನೆ ಮತ್ತು ಇಸ್ಲಾಂ ಚಳವಳಿ, ಅಥವಾ ಹಿಂದುತ್ವ ಹಿಂಸೆ ಮತ್ತು ಮುಖ್ಯವಾಹಿನಿಯ ಹಿಂದೂ ರಾಷ್ಟ್ರೀಯವಾದಿ ಅಥವಾ ಖಾಲಿಸ್ತಾನಿಗಳು ಮತ್ತು ಸಿಖ್ ನವಮೂಲಭೂತವಾದದ ನಡುವೆ ನೇರ ಸಂಪರ್ಕವಿಲ್ಲ. ಆದರೆ ಪ್ರತಿಯೊಂದೂ ಧಾರ್ಮಿಕ ನವಸಂಪ್ರದಾಯವಾದಿ ಪರಿಸರವನ್ನು ಬೆಳೆಸಲು ಮತ್ತು ಕ್ರೂರ ಹಿಂಸೆಗೆ ಕಾರಣವಾಗುತ್ತಿದೆ. ಈ ಕಾರಣದಿಂದ ಧ್ವೇಷಪೂರಿತ ಭಾಷಣಗಳನ್ನು ರಾಷ್ಟ್ರೀಯ ರಾಜಕೀಯ ಜೀವನದಿಂದ ನಿವಾರಿಸಬೇಕು ಎಂದು ವರದಿ ಬರೆದ ದ ಹಿಂದೂ ಪತ್ರಿಕೆ ಅಭಿಪ್ರಾಯಪಟ್ಟಿದೆ.
ಕೃಪೆ: blogs.wsj.com