ವ್ಯಾಟಿಕನ್ ನಲ್ಲಿ ಮದರ್ ತೆರೇಸಾಗೆ ಸಂತ ಪದವಿ ಪ್ರದಾನ

Update: 2016-09-04 14:09 GMT

ವ್ಯಾಟಿಕನ್,ಸೆ.4: ತನ್ನ ಇಡೀ ಜೀವಮಾನವನ್ನು ದೀನದಲಿತರು,ಅನಾಥ ರೋಗಿಗಳ ಸೇವೆಯಲ್ಲಿ ಮತ್ತು ನೊಂದವರ ಕಣ್ಣೀರೊರೆಸುವುದರಲ್ಲಿ ಕಳೆದು ಕೋಟ್ಯಂತರ ಜನರ ತಾಯಿಯೆನಿಸಿಕೊಂಡಿದ್ದ ಕೋಲ್ಕತಾದ ಕ್ರೈಸ್ತ ಸನ್ಯಾಸಿನಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮದರ ತೆರೆಸಾ ಅವರಿಗೆ ರವಿವಾರ ವ್ಯಾಟಿಕನ್‌ನಲ್ಲಿ ಸಂತ ಪದವಿಯನ್ನು ಘೋಷಿಸಲಾಯಿತು.

ತೆರೆಸಾರ 19ನೇ ಪುಣ್ಯತಿಥಿಯ ಮುನ್ನಾದಿನ ಬೆಳಿಗ್ಗೆ ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ನಡೆದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಒಂದು ಲಕ್ಷ ಯಾತ್ರಿಕರ ಉಪಸ್ಥಿತಿಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಮದರ್‌ಗೆ ಸಂತ ಪದವಿಯನ್ನು ವಿಧ್ಯುಕ್ತವಾಗಿ ಘೋಷಿಸಿದರು.

ಈ ಐತಿಹಾಸಿಕ ಸಮಾರಂಭವನ್ನು ಕಣ್ಣಲ್ಲಿ ತುಂಬಿಕೊಳ್ಳಲು ಯಾತ್ರಿಗಳ ಬೇಡಿಕೆ ಎಷ್ಟಿತ್ತೆಂದರೆ ವ್ಯಾಟಿಕನ್ ದುಪ್ಪಟ್ಟು ಪ್ರವೇಶಪತ್ರಗಳನ್ನು ವಿತರಿಸಬೇಕಿತ್ತು. ಆದರೆ ಜಾಗದ ಅಭಾವ ಮತ್ತು ಭದ್ರತಾ ನಿರ್ಬಂಧಗಳಿಂದಾಗಿ ಸಭಿಕರ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಸೀಮಿತಗೊಳಿಸಲಾಗಿತ್ತು. ವ್ಯಾಟಿಕನ್‌ನ ಆಗಸದಲ್ಲಿ ಹೆಲಿಕಾಪ್ಟರ್‌ಗಳು ಭದ್ರತಾ ವ್ಯವಸ್ಥೆಯ ಮೇಲೆ ನಿಗಾ ಇರಿಸಿದ್ದವು. ಸುಮಾರು 3,000ಕ್ಕೂ ಅಧಿಕ ಅಧಿಕಾರಿಗಳು ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ನೆರೆದವರಲ್ಲಿ ತೆರೆಸಾರ ಮಿಷನರೀಸ್ ಆಫ್ ಚ್ಯಾರಿಟಿಯ ಇಟಲಿಯ ಶಾಖೆಗಳು ನೋಡಿಕೊಳ್ಳುತ್ತಿರುವ ಸುಮಾರು 1,500 ಬಡವರೂ ಸೇರಿದ್ದು, ಪ್ರಾರ್ಥನಾ ಸಭೆಯ ಬಳಿಕ ಅವರೆಲ್ಲ ಪೋಪ್ ಅವರು ಆಯೋಜಿಸಿದ್ದ ಬೃಹತ್ ಪಿಜ್ಜಾ ಔತಣಕೂಟದಲ್ಲಿ ಅತಿಥಿಗಳಾಗಿದ್ದರು.

ತನ್ನ ಹರೆಯದಲ್ಲಿಯೇ ಕೋಲ್ಕತಾಕ್ಕೆ ಬಂದಿದ್ದ ತೆರೆಸಾ ಮೊದಲು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದು, ಬಳಿಕ ದೀನದಲಿತರು ಮತ್ತು ಅನಾಥ ರೋಗಿಗಳ ಸೇವೆಯಲ್ಲಿಯೇ ತನ್ನ ಆಯುಷ್ಯವನ್ನು ಕಳೆದಿದ್ದರು. ಈ ಸೇವೆಯಿಂದಾಗಿ ಅವರು ಜಗತ್ತಿನಲ್ಲಿಯ ಅತ್ಯಂತ ಪ್ರಸಿದ್ಧ ಮಹಿಳೆಯರಲ್ಲೊಬ್ಬರಾಗಿದ್ದರು. ಆಗ ಒಟ್ಟೊಮನ್ ಸಾಮ್ರಾಜ್ಯದ ಭಾಗವಾಗಿದ್ದು ಈಗ ಮೆಸೆಡೋನಿಯಾದ ರಾಜಧಾನಿಯಾಗಿರುವ ಸ್ಕೋಪ್ಜೆಯಲ್ಲಿ ಕೊಸೊವನ್ ಆಲ್ಬೇನಿಯನ್ ದಂಪತಿಯ ಪುತ್ರಿಯಾಗಿ ಜನಿಸಿದ್ದ ತೆರೆಸಾ ತ್ಯಾಗ ಮತ್ತು ಉದಾತ್ತತೆಗಳ ಕ್ರೈಸ್ತ ವೌಲ್ಯಗಳ ಸಂಕೇತವಾಗಿ ವಿಶ್ವಾದ್ಯಂತ ಆರಾಧಿಸಲ್ಪಡುತ್ತಿದ್ದಾರೆ.

ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ತೆರೆಸಾ ಶೀಘ್ರವೇ ಸಂತ ಪದವಿಗೇರಿದ್ದಾರೆ. 2003ರಲ್ಲಿ ಆಗಿನ ಪೋಪ್ ಜಾನ್ ಪಾಲ್-2 ಅವರು ತೆರೆಸಾರನ್ನು ಸಂತ ಪದವಿಗೇರಲು ಮೊದಲ ಸೋಪಾನವಾದ ‘ಮುಕ್ತಿವಂತೆ ’ ಎಂದು ಘೋಷಿಸಿದ್ದರು.

ವ್ಯಾಟಿಕನ್ ತೆರೆಸಾರನ್ನು ಸಂತ ಪದವಿಗೇರಿಸಲು ಎರಡು ಪವಾಡಗಳು ಅಗತ್ಯವಾಗಿದ್ದವು. ಮೊದಲ ಪವಾಡ 2002ರಲ್ಲಿ ಸ್ಥಿರೀಕರಿಸಲ್ಪಟ್ಟಿತ್ತು. ತೆರೆಸಾರ ನಿಧನದ ಒಂದು ವರ್ಷದ ಬಳಿಕ ಅವರ ಆಶೀರ್ವಾದದಿಂದಾಗಿಯೇ ತಾನು ಗರ್ಭಕೋಶದ ಕ್ಯಾನ್ಸರ್‌ನಿಂದ ಗುಣಮುಖಳಾಗಿದ್ದೇನೆ ಎಂದು ಭಾರತೀಯ ಮಹಿಳೆ ಮೊನಿಕಾ ಬೆಸ್ರಾ ಹೇಳಿದ್ದರು. ಆದರೆ ಕೆಲವು ಸ್ಥಳೀಯ ಆರೋಗ್ಯಾಧಿಕಾರಿಗಳು ಪ್ರಾರ್ಥನೆಯ ಪವಾಡವನ್ನು ತಳ್ಳಿ ಹಾಕಿ ಮಂದುವರಿದ ವೈದ್ಯಕೀಯ ಜ್ಞಾನ ಆಕೆ ಗುಣಮುಖಳಾಗಲು ಕಾರಣವೆಂದು ಪ್ರತಿಪಾದಿಸಿದ್ದರು.

ಎರಡನೇ ಪವಾಡವನ್ನು ವ್ಯಾಟಿಕನ್ ಕಳೆದ ವರ್ಷ ಒಪ್ಪಿಕೊಂಡಿತ್ತು. ತೆರೆಸಾರ ಪ್ರಾರ್ಥನೆಯಿಂದಾಗಿ ತನ್ನ ಪತ್ನಿ ಫೆರ್ನಾಂಡಾಳಲ್ಲಿ ಕಾಣಿಸಿಕೊಂಡಿದ್ದ ಮಿದುಳು ಗಡ್ಡೆ ಮಾಯವಾಗಿದೆ ಎಂದು ಬ್ರಾಝಿಲ್ ನಿವಾಸಿ ಮಾರ್ಸಿಲೊ ಹಡ್ಡಾದ್ ಆ್ಯಂಡ್ರಿನೊ ಹೇಳಿದ್ದರು. ಅದಾದ ಎಂಟು ವರ್ಷಗಳ ಬಳಿಕ ಈ ದಂಪತಿ ಇಂದಿನ ಸಮಾರಂಭದಲ್ಲಿ ಭಾಗಿಯಾಗಿದ್ದರು.
     
ಕೋಲ್ಕತಾದ ಮದರ್ ಹೌಸ್‌ನಲ್ಲಿ ಸಂಭ್ರಮಾಚರಣೆ

ಮದರ್ ತೆರೆಸಾ ಅವರ ಕರ್ಮಭೂಮಿಯಾಗಿದ್ದ ಕೋಲ್ಕತಾದಲ್ಲಿ ಭಾರೀ ಸಂಖ್ಯೆಯ ವಿದೇಶಿಯರು ಸೇರಿದಂತೆ ಸಾವಿರಾರು ಆಸ್ತಿಕರು ಸಂತ ಪದವಿಯ ಸಂಭ್ರಮವನ್ನಾಚರಿಸಿದರು.
ಮಿಷನರೀಸ್ ಆಫ್ ಚ್ಯಾರಿಟೀಸ್‌ನ ಕೇಂದ್ರ ಕಚೇರಿ ಮದರ್ ಹೌಸ್‌ನಲ್ಲಿ ಮೂರು ಬೃಹತ್ ಟಿವಿ ಪರದೆಗಳನ್ನು ಅಳವಡಿಸಲಾಗಿತ್ತು. ನೂರಾರು ಕ್ರೈಸ್ತ ಭಗಿನಿಯರು ಮತ್ತು ತೆರೆಸಾರ ಅನುಯಾಯಿಗಳು ವ್ಯಾಟಿಕನ್‌ನಲ್ಲಿ ನಡೆದ ಸಂತ ಪದವಿ ಪ್ರದಾನ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಿದರು. ಸಾರ್ವಜನಿಕರ ವೀಕ್ಷಣೆಗಾಗಿ ಮದರ್ ಹೌಸ್‌ನ ಹೊರಗೆ ಇನ್ನೊಂದು ಟಿವಿ ಪರದೆಯನ್ನು ವ್ಯವಸ್ಥೆ ಮಾಡಲಾಗಿತ್ತು.
ಬೆಳಿಗ್ಗೆಯಿಂದಲೇ ಮದರ್ ಹೌಸ್‌ನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರಿಸಲಾಗಿತ್ತು. ಸಾವಿರಾರು ಜನರು ಆಗಮಿಸಿ ತೆರೆಸಾರ ಸಮಾಧಿಗೆ ಗೌರವಾರ್ಪಣೆ ಮಾಡಿದರು.

ವಿಶೇಷ ಅಂಚೆಚೀಟಿ ಬಿಡುಗಡೆ

ಮದರ್ ತೆರೆಸಾ ಅವರಿಗೆ ರವಿವಾರ ವ್ಯಾಟಿಕನ್‌ನಲ್ಲಿ ಸಂತ ಪದವಿ ಪ್ರದಾನದ ಸಂಭ್ರಮದ ನಡುವೆಯೇ ಭಾರತೀಯ ಅಂಚೆ ಇಲಾಖೆಯು ಮುಂಬೈನಲ್ಲಿ ಅವರ ಸ್ಮರಣಾರ್ಥ ವಿಶೇಷ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿದೆ.
ಕೇಂದ್ರ ಸಹಾಯಕ ಸಂಪರ್ಕ ಸಚಿವ ಮನೋಜ ಸಿನ್ಹಾ ಅವರು ಇಲ್ಲಿಯ ಡಿವೈನ್ ಚೈಲ್ಡ್ ಹೈಸ್ಕೂಲ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ತೆರೆಸಾರ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿದರು.
ಮಿಷನರೀಸ್ ಆಫ್ ಚ್ಯಾರಿಟಿಯ ಪ್ರತಿನಿಧಿಗಳಾಗಿ ಬಿಷಪ್ ಆ್ಯಗ್ನೆಲೊ ಗ್ರೇಷಿಯಸ್ ಮತ್ತು ಭಗಿನಿ ರುಬೆಲ್ಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News