ಪಾಲ್ಘರ್ನಲ್ಲಿ ಅಪೌಷ್ಟಿಕತೆಯಿಂದ 17 ಮಕ್ಕಳ ಸಾವು: ಶಿವಸೇನೆ
Update: 2016-09-11 13:55 GMT
ಪಾಲ್ಘರ್(ಮಹಾರಾಷ್ಟ್ರ),ಸೆ.11: ಸೆ.9ರಂದು ಎರಡೂವರೆ ವರ್ಷಗಳ ಬಾಲಕನೋರ್ವ ಸಾವನ್ನಪ್ಪುವುದರೊಂದಿಗೆ ಬುಡಕಟ್ಟು ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಮೋಖದಾ ತಾಲೂಕಿನಲ್ಲಿ ಜುಲೈನಿಂದೀಚಿಗೆ ಅಪೌಷ್ಟಿಕತೆಯಿಂದ ಮೃತಪಟ್ಟಿರುವ ಮಕ್ಕಳ ಸಂಖ್ಯೆ 17ಕ್ಕೇರಿದೆ. ಇಂದಿಲ್ಲಿ ಈ ವಿಷಯವನ್ನು ತಿಳಿಸಿದ ಶಿವಸೇನಾ ಮುಖಂಡ ಮತ್ತು ಪಾಲ್ಘರ್ ಜಿಲ್ಲಾ ಪರಿಷದ್ ಸದಸ್ಯ ಪ್ರಕಾಶ ನಿಕಂ ಅವರು, ಅಪೌಷ್ಟಿಕತೆ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರಕಾರವು ಯಾವುದೇ ಕ್ರಮವನ್ನು ಕೈಗೊಳ್ಳದಿದ್ದರೆ ಗ್ರಾಮಸ್ಥರು ಭವಿಷ್ಯದಲ್ಲಿ ಸಾವನ್ನಪ್ಪುವ ಯಾವುದೇ ಮಗುವಿನ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ತಾಲೂಕು ಕಚೇರಿಗೆ ಅಥವಾ ಮಂತ್ರಾಲಯ(ರಾಜ್ಯ ಸಚಿವಾಲಯ)ಕ್ಕೂ ಒಯ್ಯಲಿದ್ದಾರೆ ಎಂದು ಹೇಳೀದರು. ರಾಜ್ಯ ಸರಕಾರವು ಗ್ರಾಮ ಶಿಶು ಕಲ್ಯಾಣ ಯೋಜನೆಯನ್ನು ಸ್ಥಗಿತಗೊಳಿಸಿದ್ದು ಪರಿಸ್ಥಿತಿ ಹದಗೆಡಲು ಕಾರಣವಾಗಿದೆ ಎಂದು ಮಾಜಿ ಶಾಸಕ ವಿವೇಕ ಪಂಡಿತ ಆರೋಪಿಸಿದರು.