ಕೇರಳವೆಂಬ 'ಹುಚ್ಚಾಸ್ಪತ್ರೆ'ಯಲ್ಲಿ ವಿವೇಕ ಬಿತ್ತಿದ ಗುರು

Update: 2016-09-14 11:42 GMT

ಪ್ರಸಕ್ತ ವರ್ಷದಿಂದ  ನಾರಾಯಣ ಗುರು ಜಯಂತಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಅಚರಿಸಲು ನಿರ್ಧರಿಸಿದೆ. ಈ ಕಾರಣದಿಂದಾಗಿ ರಾಜ್ಯದ ಹಲವು ಭಾಗಗಳಿಂದ ಸ್ನೇಹಿತರು ನಾರಾಯಣ ಗುರುಗಳ ಬಗ್ಗೆ ನನ್ನಿಂದ ಮಾಹಿತಿ ಕೇಳುತ್ತಿದ್ದಾರೆ. ನಿಜವಾದ ನಾರಾಯಣ ಗುರುಗಳನ್ನು ಪರಿಚಯಿಸುವ ಪುಸ್ತಕಗಳು ಮಲಯಾಳಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಬಂದಿವೆ. ಆದರೆ ಕನ್ನಡದಲ್ಲಿ ಅಂತಹ ಪುಸ್ತಕಗಳಿಲ್ಲ. ಅಂತಹದ್ದೊಂದು ಪುಸ್ತಕ ಬರೆಯಬೇಕೆಂಬ ನನ್ನ ಬಹುದಿನಗಳ ಕನಸು ನನಸಾಗಿಲ್ಲ. ಈ ಹಿನ್ನೆಲೆಯಲ್ಲಿ 2000ನೇ ವರ್ಷದಲ್ಲಿ ಮುಂಬೈನ ವಿಚಾರ ಸಂಕಿರಣದಲ್ಲಿ ಮಾಡಿದ ಭಾಷಣವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು ನಾರಾಯಣ ಗುರುಗಳನ್ನು ವೈಭವಿಕರಿಸದೆ ಅವರು ನಡೆಸಿದ್ದ ಧಾರ್ಮಿಕ,ಸಾಮಾಜಿಕ ಮತ್ತು ಶೈಕ್ಷಣಿಕ ಚಳವಳಿಯ ಸ್ಥೂಲಚಿತ್ರವನ್ನು ನೀಡಿದೆ ಎಂದು ನಾನು ನಂಬಿದ್ದೇನೆ. ದಯವಿಟ್ಟು ಇದನ್ನು ಓದಿ ಮತ್ತೆ ಶೇರ್ ಮಾಡಿ.

-----------------------------------------------------------------------------------------------

19ನೇ ಶತಮಾನದುದ್ದಕ್ಕೂ, ದೇಶದ ವಿವಿಧೆಡೆಗಳಲ್ಲಿ ಎರಡು ಪ್ರತ್ಯೇಕ ವಿಚಾರಧಾರೆಗಳ ಸುಧಾರಣಾವಾಧಿ ಚಳವಳಿಗಳು ನಡೆದವು. ಮೊದಲನೆಯದ್ದು ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಕೇಶವ ಸೇನ್, ರಾನಡೆ, ದೇವಿಂದ್ರನಾಥ ಠಾಕೂರ್, ಅನಿ ಬೆಸೆಂಟ್ ಮೊದಲಾದ ಇಂಗ್ಲೀಷ್ ಕಲಿತ ಮೇಲ್ಜಾತಿಯಿಂದಲೇ ಬಂದವರ ನೇತೃತ್ವದ ಚಳವಳಿಗಳು. ಇವು ಮಹಿಳೆಯರು ಮತ್ತು ಶೋಷಿತರಿಗಾಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿದವು.
ಸತಿ ಪದ್ಧತಿ, ವಿಧವಾ ವಿವಾಹ, ವರದಕ್ಷಿಣಿ, ಮೊದಲಾದ ಬಹುಮಟ್ಟಿಗೆ ಮೇಲ್ಜಾತಿ ಸಮಾಜದಲ್ಲಿನ ಅದರಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಸಾಮಾಜಿಕ ಅನಿಷ್ಟಗಳ ನಿವಾರಣೆ, ಈ ಚಳವಳಿಗಳ ಮುಖ್ಯ ಉದ್ದೇಶವಾಗಿತ್ತು. ಆರ್ಯ ಸಮಾಜ ಪ್ರಾರಂಭಿಸಿದ್ದ 'ಶುದ್ಧಿ ಚಳವಳಿ'ಯನ್ನು ಗಮಿಸಿದರೆ, ಕೆಳವರ್ಗದ ಜನ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವುದನ್ನು ತಪ್ಪಿಸುವುದು ಕೂಡ ಈ ಚಳವಳಿಗಳ ಮುಖ್ಯ ಉದ್ದೇಶವಾಗಿತ್ತೋ ಏನೋ ಎಂಬ ಅನುಮಾನ ಕೂಡಾ ಮೂಡುತ್ತದೆ. ಈ ಚಳವಳಿಗಳು ಕೈಗೆತ್ತಿಕೊಂಡ ಬಹಳಷ್ಟು ಸಮಸ್ಯೆಗಳು ತಳಸಮುದಾಯದ ಜ್ವಲಂತ ಸಮಸ್ಯೆಯಾಗಿರಲಿಲ್ಲ.
ಅದೇ ಕಾಲಕ್ಕೆ ಕೆಳವರ್ಗದಿಂದಲೇ ಮೂಡಿ ಬಂದ ನಾಯಕರು, ವರ್ಣಾಶ್ರಮ ವ್ಯವಸ್ಥೆಯನ್ನು ಪ್ರಶ್ನಿಸುವ ಚಳವಳಿಗಳ ನೇತೃತ್ವ ವಹಿಸಿದ್ದರು. ಒಡಿಶಾದಲ್ಲಿ ಮಹಿಮಾ ಸ್ವಾಮಿ ಎಂಬುವವರ ನೇತೃತ್ವದಲ್ಲಿ ಆದಿವಾಸಿಗಳು ತಮಗೆ ಪ್ರವೇಶವಿಲ್ಲವೆಂಬ ಕಾರಣಕ್ಕೆ ಪುರಿಯ ಜಗನ್ನಾಥ ದೇವಾಲಯವನ್ನು ಸುಡಲು ಪ್ರಯತ್ನಿಸಿದ್ದರು.
ಕೊನೆಗೆ ಮಹಿಮಾ ಸ್ವಾಮಿ 1850ರಲ್ಲಿ ಮಹಿಮಾ ಧರ್ಮ ಎಂಬ ಹೊಸಧರ್ಮವನ್ನೇ ಬೋಧಿಸಿದ. ಅದೇ ಕಾಲಕ್ಕೆ ಮಧ್ಯಪ್ರದೇಶದ ಛತ್ತೀಸಘಡದ ಅಸ್ಪೃಶ್ಯರ ಒಂದು ಪಂಗಡವಾಗಿದ್ದ ಚಮ್ಮಾರರಲ್ಲಿ ಸತ್ನಮ್ ಪಂಥ ಹುಟ್ಟಿಕೊಂಡಿತ್ತು. ಅವರು ಪ್ರತಿಭಟನೆಯ ಅಂಗವಾಗಿ ತಾವೇ ಜನಿವಾರ ಹಾಕಿಕೊಳ್ಳತೊಡಗಿದ್ದರು.
1873ರಲ್ಲಿ ಫುಲೆ, ಸತ್ಯಶೋಧಕ ಸಮಾಜದ ಮೂಲಕ ಜಾತಿನಾಶ, ಮಹಿಳಾ ವಿಮೋಚನೆಯ ಕಾರ್ಯ ಪ್ರಾರಂಭಿಸಿದ್ದರು. ಕೋಲ್ಲಾಪುರದ ಸಾಹು ಮಹಾರಾಜರು, ನ್ಯಾಯಾಲಯಗಳಲ್ಲಿನ ಹುದ್ದೆಗಳಲ್ಲಿ ಶೇ.50ರಷ್ಟನ್ನು ಬ್ರಾಹ್ಮಣೇತರರಿಗೆ ಮೀಸಲಿಟ್ಟಿದ್ದರು. ತಮಿಳುನಾಡಿನಲ್ಲಿ ಪೆರಿಯಾರ್ ಅವರ ಸ್ವಾಭಿಮಾನ ಚಳವಳಿಗೆ ರಂಗ ಸಜ್ಜಾಗತೊಡಗಿತ್ತು. ಸತ್ಯಶೋಧಕ ಸಮಾಜ, ಮಹಿಮಾ ಧರ್ಮ, ಸತ್ನಾಂ ಪಂಥ, ಪೆರಿಯಾರ್ ಅವರ ಸ್ವಾಭಿಮಾನ ಚಳವಳಿ ಅಲ್ಲಿನ ಸಮಾಜಗಳಲ್ಲಿ ಯಾವ ರೀತಿಯ ಕಂಪನಗಳನ್ನು ಉಂಟು ಮಾಡಿತ್ತೋ, ಅಂತಹದ್ದೇ ಒಂದು ಸ್ಫೋಟಕ ಸ್ಥಿತಿ 1888ರಲ್ಲಿ ನಾರಾಯಣ ಗುರುಗಳು ಅರವಿಪುರಂನಲ್ಲಿ ಶಿವ ದೇವಾಲಯ ಸ್ಥಾಪಿಸಿದಾಗ, ಕೇರಳದ ಹಿಂದೂ ಸಮಾಜದಲ್ಲಿ ನಿರ್ಮಾಣವಾಗಿತ್ತು.
ಅದೂ ಶಂಕರಚಾರ್ಯರು ಹುಟ್ಟಿದ ನಾಡಿನಲ್ಲಿ ಅಸ್ಪೃಶ್ಯನೊಬ್ಬ, ಅಸ್ಪೃಶ್ಯರಿಗಾಗಿ ನಿರ್ಮಿಸಿದ್ದ 'ಸ್ಪೃಶ್ಯ' ದೇವರ ದೇವಾಲಯ.
ಮೊದಲ ದೇವಾಲಯ ಸ್ಥಾಪನೆಯ ನಂತರದ 48 ವರ್ಷಗಳ ಕಾಲ ಅಲ್ಲಿನ ಶೋಷಿತರ ಕೊರಳ ದನಿಯಾಗಿ ಮೂಡಿಬಂದ ಸುಧಾರಣಾ ಚಳವಳಿ ಕೇರಳದ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳ ಚಿತ್ರವನ್ನೇ ಬದಲಾಯಿಸಿಬಿಟ್ಟಿತು.
ಈ ಚಳವಳಿಯ ಮೊದಲ 40 ವರ್ಷಗಳಲ್ಲಿ ನಾರಾಯಣ ಗುರುಗಳು ಜೊತೆಯಲ್ಲಿದ್ದುಕೊಂಡೇ ಮಾರ್ಗದರ್ಶನ ನೀಡಿದರೆ, ಅವರ ಸಾವಿನ ನಂತರ ಸುಮಾರು ಎಂಟು ವರ್ಷಗಳ ಹೋರಾಟಕ್ಕೆ ಅವರ ತತ್ವಗಳೇ ಚಳವಳಿಯ ದಾರಿಗೆ ಬೆಳಕಾಗಿತ್ತು. ಅಸ್ಪೃಶ್ಯರಿಗೂ ದೇವಸ್ಥಾನ ಪ್ರವೇಶ ಅವಕಾಶ ನೀಡುವ 'ದೇವಾಲಯ ಪ್ರವೇಶ' ಘೋಷಣೆ ಹೊರಬಿದ್ದಾಗ ಅದನ್ನು ನೋಡಲು ನಾರಾಯಣ ಗುರುಗಳು ಜೀವಂತವಿರಲಿಲ್ಲ.
ಒಂದು ಚಳವಳಿಯ ಸೋಲು-ಗೆಲುವು, ಅದರ ಸಿದ್ಧಾಂತ, ಸಂಘಟನೆ ಮತ್ತು ಹೋರಾಟದ ನೆಲೆಗಳನ್ನು ಅವಲಂಬಿಸಿರುತ್ತದೆ. ನಾರಾಯಣ ಗುರು ಚಳವಳಿಯ ಎಲ್ಲಾ ಮಗ್ಗುಲುಗಳನ್ನು ಈ ರೀತಿಯ ಸಮಾಜ ವಿಜ್ಞಾನದ ಹಿನ್ನೆಲೆಯಲ್ಲಿ ಅಧ್ಯಯನ ನಡೆಸುವ ಪ್ರಯತ್ನ ನಡೆದದ್ದು ಕಡಿಮೆ. ಈ ರೀತಿಯ ಅಧ್ಯಯನದ ಕೊರತೆಯಿಂದಾಗಿಯೇ ನಾರಾಯಣ ಗುರು ಅವರನ್ನು ವೈಯಕ್ತಿಕವಾಗಿ ವೈಭವೀಕರಿಸಿ ಅವರನ್ನು ದೇವರು ಮಾಡಿ ಊರೆಲ್ಲ ಗುಡಿಗಳನ್ನು ಕಟ್ಟಲಾಗಿದೆ. ಗುರುಗಳನ್ನು ದೇವರು ಮಾಡುವ ಭರದಲ್ಲಿ ಅವರ ನೇತೃತ್ವದ ಸುಧಾರಣಾವಾದಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ, ಅನೇಕ ಅನುಯಾಯಿಗಳ ಪರಿಚಯ ಹೊರಜಗತ್ತಿಗೆ ಆಗಿಲ್ಲ.
ನಾರಾಯಣ ಗುರು ಚಳವಳಿ, ಪ್ರಮುಖವಾಗಿ ಐದು ಹಂತಗಳಲ್ಲಿ ನಡೆಯಿತು.
ಮೊದಲನೆಯದು ಡಾ.ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ, ಎರಡನೆಯದು, ನಾರಾಯಣ ಗುರು ನೇತೃತ್ವದ ಸಾಮಾಜಿಕ ಸುಧಾರಣೆ, ಮೂರನೆಯದು ಕುಮಾರನ್ ಆಶಾನ್ ನೇತೃತ್ವದ ಶಾಲೆಗಳಲ್ಲಿ ಪ್ರವೇಶಕ್ಕಾಗಿ ನಡೆದ ಚಳವಳಿ, ನಾಲ್ಕನೆಯದು ಟಿ.ಕೆ.ಮಾಧವನ್ ನೇತೃತ್ವದಲ್ಲಿ ದೇವಾಲಯಗಳ ಪ್ರವೇಶ ಮತ್ತು ಅಸ್ಪೃಶ್ಯತೆಯ ವಿರುದ್ಧ ನಡೆದ ಚಳವಳಿ ಹಾಗೂ ಕೊನೆಯದಾಗಿ, ಸಿ.ಕೇಶವನ್ ನೇ�

Writer - ದಿನೇಶ್ ಅಮಿನ್ ಮಟ್ಟು

contributor

Editor - ದಿನೇಶ್ ಅಮಿನ್ ಮಟ್ಟು

contributor

Similar News