ಎಂ.ಲೀಲಾವತಿಗೆ ಮೋಹನನ್ ಸುವರ್ಣ ಮುದ್ರ ಪುರಸ್ಕಾರ
ತಿರುವನಂತಪುರಂ, ಸೆ.17: ಖ್ಯಾತ ಮಲಯಾಳಂ ವಿಮರ್ಶಕಿ ಹಾಗೂ ಶಿಕ್ಷಣ ತಜ್ಞೆ ಎಂ.ಲೀಲಾವತಿ ಅವರನ್ನು ಪ್ರತಿಷ್ಠಿತ ಎನ್. ಮೋಹನನ್ ಸುವರ್ಣ ಮುದ್ರ ಪುರಸ್ಕಾರ- 2016 ಕ್ಕೆ ಆಯ್ಕೆ ಮಾಡಲಾಗಿದೆ. ಖ್ಯಾತ ಸಣ್ಣಕತೆಗಳ ಲೇಖಕ ಎನ್.ಮೋಹನನ್ ಸ್ಮರಣಾರ್ಥ ಈ ಪುರಸ್ಕಾರ ನೀಡಲಾಗುತ್ತದೆ. ಈ ಪುರಸ್ಕಾರ ಒಂದು ಪವನ್ ಚಿನ್ನದ ಪದಕವನ್ನು ಹೊಂದಿದೆ.
ಮಲಯಾಳ ಭಾಷೆ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ದ್ವೈವಾರ್ಷಿಕ ಪುರಸ್ಕಾರಕ್ಕೆ ಲೀಲಾವತಿಯವರನ್ನು ಪತ್ರಕರ್ತರಾದ ಎಂ.ಜಿ.ರಾಧಾಕೃಷ್ಣನ್, ಎಂ.ಸರಿತಾ ವರ್ಮ ಮತ್ತು ಆತ್ಮರಾಮನ್ ಅವರನ್ನೊಳಗೊಂಡ ಸಮಿತಿಯು ಆಯ್ಕೆ ಮಾಡಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ದಿವಂಗತ ಒ.ಎನ್.ವಿ.ಕುರುಪ್ ಅವರು ಈ ಹಿಂದೆ ಈ ಪುರಸ್ಕಾರ ಪಡೆದಿದ್ದರು ಎಂದು ಈ ಪುರಸ್ಕಾರದ ಸ್ಥಾಪಕ ಸಂಸ್ಥೆ ‘ಸಮ್ಮೋಹನಮ್’ನ ಪದಾಧಿಕಾರಿಗಳು ತಿಳಿಸಿದ್ದಾರೆ. ತಿರುವನಂತಪುರಂ ಪ್ರೆಸ್ಕ್ಲಬ್ನಲ್ಲಿ ಅಕ್ಟೋಬರ್ 3ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.