ಮೂರನೆ ಟೆಸ್ಟ್‌ಗೆ ಭುವಿ ಅಲಭ್ಯ

Update: 2016-10-05 18:09 GMT

ಹೊಸದಿಲ್ಲಿ, ಅ.5: ಬೆನ್ನುನೋವಿನಿಂದ ಬಳಲುತ್ತಿರುವ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಇಂದೋರ್‌ನಲ್ಲಿ ಶನಿವಾರ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ ಮೂರನೆ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಕುಮಾರ್ ಬದಲಿಗೆ ಶಾರ್ದೂಲ್ ಠಾಕೂರ್‌ಗೆ ಕರೆ ನೀಡಲಾಗಿದೆ.

ಭುವನೇಶ್ವರ್ ಕೋಲ್ಕತಾದಲ್ಲಿ ನಡೆದ 2ನೆ ಟೆಸ್ಟ್‌ನಲ್ಲಿ ಭಾರತ ತಂಡ 178 ರನ್‌ಗಳ ಅಂತರದಿಂದ ಜಯ ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು. ಕೋಲ್ಕತಾ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲು ಸಹಿತ ಒಟ್ಟು 6 ವಿಕೆಟ್ ಕಬಳಿಸಿದ್ದರು.

ಭುವಿ ಬೌಲಿಂಗ್‌ನಿಂದಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 112 ರನ್ ಮುನ್ನಡೆ ಪಡೆದಿತ್ತು. ಭುವಿಗೆ ಎರಡನೆ ಟೆಸ್ಟ್ ಪಂದ್ಯದ ವೇಳೆ ಬೆನ್ನುನೋವು ಕಾಣಿಸಿಕೊಂಡಿತ್ತು. ಭುವಿ ಟೆಸ್ಟ್‌ನಿಂದ ಹೊರಗುಳಿಯುತ್ತಿರುವ ಭಾರತದ 2ನೆ ಪ್ರಮುಖ ಬೌಲರ್. ಇಶಾಂತ್ ಶರ್ಮ ಚಿಕುನ್‌ಗುನ್ಯಾ ಸೋಂಕಿನಿಂದಾಗಿ ಈಗಾಗಲೇ ಟೂರ್ನಿಯಿಂದ ಹೊರ ನಡೆದಿದ್ದಾರೆ.

 ಠಾಕೂರ್ ಭಾರತದ ಪರ ಇನ್ನಷ್ಟೇ ಟೆಸ್ಟ್ ಪಂದ್ಯ ಆಡಬೇಕಾಗಿದೆ. ಮುಂಬೈನ ಈ ಬೌಲರ್ ಜುಲೈ-ಆಗಸ್ಟ್‌ನಲ್ಲಿ ನಡೆದ ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News