ತೊಕ್ಕೊಟ್ಟು: ರೈಲು ಢಿಕ್ಕಿಯಾಗಿ ವ್ಯಾಪಾರಿ ಮೃತ್ಯು

Update: 2016-10-20 12:24 GMT

ಉಳ್ಳಾಲ, ಅ.20: ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲು ಢಿಕ್ಕಿ ಹೊಡೆದು ವ್ಯಕ್ತಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಮುಂಜಾನೆ ಓವರ್‌ಬ್ರಿಡ್ಜ್ ಕೆಳಗಡೆ ನಡೆದಿದೆ.

ಮೃತಪಟ್ಟವರನ್ನು ಸಂಜೀವ್ ಟಿ.ಎ. (66) ಎಂದು ಗುರುತಿಸಲಾಗಿದೆ. ಅವರು ಓವರ್‌ಬ್ರಿಡ್ಜ್‌ನ ಕೆಳಭಾಗದ ರಕ್ಷಾ ಕ್ಲಿನಿಕ್ ಸಮೀಪದಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದರು.

ಸಂಜೀವ್ ಅವರು ಮೂಲತ: ಕಾಸರಗೋಡು ಜಿಲ್ಲೆಯ ಉಪ್ಪಳದವರಾಗಿದ್ದು ಕಳೆದ ಒಂದು ವರ್ಷದಿಂದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಗಣೇಶನಗರದಲ್ಲೇ ತನ್ನ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರೆನ್ನಲಾಗಿದೆ. ಸಂಜೀವ್‌ರಿಗೆ ನಾಲ್ಕು ಪುತ್ರಿಯರು, ಓರ್ವ ಮಗನಿದ್ದು, ಒಬ್ಬಳು ಪುತ್ರಿ ಮತ್ತು ಪುತ್ರ ಅವಿವಾಹಿತರಾಗಿದ್ದಾರೆ.

ಗುರುವಾರ ಮುಂಜಾನೆ 5:30ಕ್ಕೆ ತನ್ನ ಅಂಗಡಿಯನ್ನು ತೆರೆಯಲು ರೈಲ್ವೇ ಹಳಿಯನ್ನು ದಾಟುತ್ತಿದ್ದ ಸಂದರ್ಭ ರೈಲು ಢಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ರೈಲ್ವೆ ಪೊಲೀಸರಿಗೆ ವಿಷಯ ತಿಳಿಸಿದ್ದು, ರೈಲ್ವೇ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News