ಬಿಜೆಪಿ ದೇಶವನ್ನು ಹಾಳು ಮಾಡುತ್ತಿದೆ: ಕೇಜ್ರಿವಾಲ್
ಹೊಸದಿಲ್ಲಿ,ಅ.23: ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿರುವ ‘ಎ ದಿಲ್ ಹೈ ಮುಷ್ಕಿಲ್’ ಚಿತ್ರದ ಬಿಡುಗಡೆಗಾಗಿ ಎಂಎನ್ಎಸ್ ಮತ್ತು ಚಿತ್ರ ನಿರ್ಮಾಪಕರ ನಡುವಿನ ಸಂಧಾನ ಮಾತುಕತೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಹಿಸಿದ್ದ ಪಾತ್ರದ ಕುರಿತು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಂದು ಬಿಜೆಪಿಯನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
ಬಿಜೆಪಿ ದೇಶವನ್ನು ಹಾಳು ಮಾಡುತ್ತದೆ ಎಂದು ಟ್ವೀಟಿಸಿರುವ ಅವರು, ‘ಹಫ್ತಾ ವಸೂಲಿ’ಯ ರೂಪದಲ್ಲಿ ‘ಎ ದಿಲ್...’ ವಿವಾದ ಬಗೆಹರಿದಿದೆ ಎಂಬ ಇನ್ನೊಂದು ಟ್ವಿಟರ್ ಪೋಸ್ಟ್ಗೆ ಸಹಮತಿಯನ್ನು ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಿ ಕಲಾವಿದರನ್ನು ಹಾಕಿಕೊಂಡು ಚಿತ್ರಗಳನ್ನು ಮಾಡಿರುವ ನಿರ್ಮಾಪಕರಿಗೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಒಡ್ಡಿರುವ ಷರತ್ತುಗಳಿಗೆ ಸೇನೆಯು ಸೇರಿದಂತೆ ವಿವಿಧ ಕಡೆಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಚಿತ್ರ ನಿರ್ಮಾಪಕರು ಸೇನೆಯ ಕಲ್ಯಾಣ ನಿಧಿಗೆ ಐದು ಕೋ.ರೂ.ನ್ನು ಪಾವತಿಸಬೇಕು ಎನ್ನುವುದು ಠಾಕ್ರೆ ಒಡ್ಡಿರುವ ಷರತ್ತುಗಳಲ್ಲೊಂದಾಗಿದೆ.
ಎಂಎನ್ಎಸ್ನ ತಂತ್ರಗಳಿಗೆ ಮಣಿದಿರುವುದಕ್ಕೆ ಮತ್ತು ಮಹಾರಾಷ್ಟ್ರದಲ್ಲಿ ಕಾನೂನಿನ ಆಡಳಿತವನ್ನು ಖಚಿತಪಡಿಸುವಲ್ಲಿ ವಿಫಲಗೊಂಡಿದ್ದಕ್ಕೆ ಫಡ್ನವೀಸ್ ಅವರೂ ಪ್ರತಿಪಕ್ಷಗಳಿಂದ ಟೀಕೆಗಳಿಗೆ ಗುರಿಯಾಗಿದ್ದಾರೆ.