×
Ad

‘ಇಸ್ ಕೋ 72 ಹೂರೋಂ ಕೆ ಪಾಸ್ ಭೇಜ್‌ನಾ ಹೈ’

Update: 2016-10-24 22:38 IST

 ಹೊಸದಿಲ್ಲಿ,ಅ.24: ಜೆಎನ್‌ಯು ವಿದ್ಯಾರ್ಥಿ ನಜೀಬ್ ಜಂಗ್ ನಾಪತ್ತೆಯಾಗುವ ಮುನ್ನಾ ದಿನದ ರಾತ್ರಿ ನಡೆದಿದ್ದ ಘಟನಾವಳಿಗಳನ್ನು ಪ್ರತ್ಯಕ್ಷದರ್ಶಿಯೋರ್ವ ಬಯಲುಗೊಳಿಸಿದ್ದಾನೆ.


ಅ.14ರಂದು ರಾತ್ರಿ ಸುಮಾರು 30 ವಿದ್ಯಾರ್ಥಿಗಳ ಗುಂಪೊಂದು ನಜೀಬ್ ಜಂಗ್ ಮೇಲೆ ಹಲ್ಲೆ ನಡೆಸಿ,ಅವಾಚ್ಯ ಶಬ್ದಗಳಿಂದ ಬೈಯ್ದು ಕೋಮು ನಿಂದನೆಯನ್ನು ಮಾಡಿತ್ತೆನ್ನಲಾಗಿದೆ. ಅ.15ರಿಂದ ನಜೀಬ್ ನಾಪತ್ತೆಯಾಗಿದ್ದಾನೆ.


ಗುಂಪಿನಲ್ಲಿದ್ದ ಕೆಲವರು ‘ಇಸ್ ಕೋ 72 ಹೂರೋಂ ಕೆ ಪಾಸ್ ಭೇಜ್‌ನಾ ಹೈ(ನಾವು ಅವನನ್ನು 72 ಕನ್ಯೆಯರ ಬಳಿಗೆ ಕಳುಹಿಸುತ್ತೇವೆ)’ಎಂದು ಹೇಳುತ್ತಿದ್ದುದು ಕೇಳಿಬಂದಿತ್ತು.
ಅಂದು ರಾತ್ರಿ ನಡೆದಿದ್ದ ಘಟನೆಗಳನ್ನು ಜೆಎನ್‌ಯುದಲ್ಲಿ ಎಂ.ಫಿಲ್ ವಿದ್ಯಾರ್ಥಿಯಾಗಿರುವ ಶಾಹಿದ್ ರಝಾ ಖಾನ್ ನೆನಪಿಸಿಕೊಂಡಿದ್ದಾನೆ.
14ರಂದು ನಡೆದಿದ್ದೇನು...?


ಅಂದು ರಾತ್ರಿ ಏನೋ ಶಬ್ದ ಕೇಳಿದ ಖಾನ್ ಹಾಸ್ಟೆಲ್‌ನ ಮೊದಲ ಮಹಡಿಗೆ ಧಾವಿಸಿದ್ದ. ಖಾನ್ ಕೆಳಗೆ ಬರುತ್ತಿರುವುದನ್ನು ಕಂಡು ಎಬಿವಿಪಿ ಕಾರ್ಯಕರ್ತ ವಿಕ್ರಾಂತ ಕುಮಾರ ಆತನ ಬಳಿಗೆ ಬಂದು,ನಜೀಬ್ ತನ್ನನ್ನು ವಿನಾಕಾರಣ ಹೊಡೆಯುತ್ತಿದ್ದಾನೆ,ಅವನಿಂದ ರಕ್ಷಿಸು ಎಂದು ಕೇಳಿಕೊಂಡಿದ್ದ.


ಆದರೆ ಖಾನ್ ನಜೀಬ್‌ನ ರೂಮಿಗೆ ತೆರಳಿದಾಗ ಕಂಡ ದೃಶ್ಯ ಬೇರೆಯೇ ಆಗಿತ್ತು. ಆತನ ಬಾಯಿ ಮತ್ತು ಮೂಗಿನಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿತ್ತು. ಖಾನ್ ಮತ್ತು ಇತರರು ಸೇರಿಕೊಂಡು ನಜೀಬ್‌ನನ್ನು ತೊಳೆಸಲೆಂದು ಬಾತ್‌ರೂಮಿಗೆ ಕರೆದೊಯ್ದಿದ್ದರಷ್ಟೇ, ಸುಮಾರು 25-30 ಇತರ ವಿದ್ಯಾರ್ಥಿಗಳ ಗುಂಪು ಬಾತ್‌ರೂಮಿಗೇ ನುಗ್ಗಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿತ್ತು.


ಮೆಸ್ ಕಾರ್ಯದರ್ಶಿ ಹುದ್ದೆಗೆ ಚುನಾವಣೆ ಪ್ರಚಾರಕ್ಕಾಗಿ ವಿಕ್ರಾಂತ್ ನಜೀಬ್ ರೂಮಿಗೆ ತೆರಳಿದ್ದು,ಆ ವೇಳೆ ಆತನೊಂದಿಗೆ ಜಗಳವಾಡಿದ್ದ ಎನ್ನಲಾಗಿದೆ. ವಿಕ್ರಾಂತ್ ತನ್ನ ಮಣಿಗಂಟಿಗೆ ಕೆಂಪು ದಾರ ಕಟ್ಟಿಕೊಂಡಿದ್ದನ್ನು ನೋಡಿ ನಜೀಬ್ ಆತನ ಮೇಲೆ ಹಲ್ಲೆ ನಡೆಸಿದ್ದ ಎಂದು ಎಬಿವಿಪಿ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.
 ಗುಂಪು ನಜೀಬ್‌ನನ್ನು ಮೇಲಿನ ಮಹಡಿಗೆ ಎಳೆದೊಯ್ದಿತ್ತು. ಅದೇ ವೇಳೆ ಅಲ್ಲಿದ್ದವರಾರೋ ದೀಪಗಳನ್ನು ಆರಿಸಿದ್ದರು, ಕತ್ತಲಲ್ಲೂ ನಜೀಬ್‌ಗೆ ಹೊಡತಗಳು ಬೀಳುತ್ತಿದ್ದವು ಎಂದು ಖಾನ್ ಹೇಳಿದ್ದಾನೆ.


ಗುಂಪು ನಜೀಬ್‌ನನ್ನು ವಾರ್ಡನ್ ರೂಮಿಗೆ ಎಳೆದೊಯ್ದಿತ್ತು. ಕನಿಷ್ಠ ವಾರ್ಡನ್ ಆದರೂ ನಿಷ್ಪಕ್ಷಪಾತವಾಗಿ ವರ್ತಿಸಬೇಕಾಗಿತ್ತು. ಅಲ್ಲಿ ಎಲ್ಲ ತಪ್ಪನ್ನೂ ನಜೀಬ್ ತಲೆಗೇ ಕಟ್ಟಲಾಗಿತ್ತು. ‘ಇಸ್ ಕೋ 72 ಹೂರೋಂ ಕೆ ಪಾಸ್ ಭೇಜ್‌ನಾ ಹೈ’ಎಂದು ಅವರು ಹೇಳುತ್ತಲೇ ಇದ್ದರು ಎಂದು ಖಾನ್ ನೆನಪಿಸಿಕೊಂಡಿದ್ದಾನೆ.


ನಜೀಬ್‌ನ ಗುಣನಡತೆಯ ಬಗ್ಗೆ ಆತನ ರೂಮ್‌ಮೇಟ್ ಕಾಸಿಂ ವಾರ್ಡನ್‌ಗೆ ಮುಚ್ಚಳಿಕೆಯನ್ನೂ ಬರೆದು ಕೊಟ್ಟಿದ್ದ. ಆತ ಸಿಡುಕಿನ ಸ್ವಭಾವದವಲ್ಲ. ಆತ ಮಾನಸಿಕ ಅಸ್ವಸ್ಥ ಎಂಬ ಎಬಿವಿಪಿ ಆರೋಪ ಸಂಪೂರ್ಣ ಸುಳ್ಳು ಎಂದಾತ ಸ್ಪಷ್ಟಪಡಿಸಿದ್ದ. ನಜೀಬ್ ಒಂಟಿ ಜೀವಿಯಾಗಿದ್ದಾನೆ ಮತ್ತು ತನ್ನಷ್ಟಕ್ಕೆ ತಾನಿರುತ್ತಾನೆ ಎಂದು ಆತ ಬರೆದಿದ್ದ. ವಿಚಿತ್ರವೆಂದರೆ,ನಜೀಬ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಹಾಸ್ಟೆಲ್‌ನಿಂದ ಆತನನ್ನು ನಿರ್ಬಂಧಿಸಬೇಕು ಎಂದು ಆತ ಬರೆದಿದ್ದಾನೆ.


 ಈ ಮುಚ್ಚಳಿಕೆ ಪತ್ರದ ಋಜುತ್ವ ದೃಢಪಟ್ಟಿಲ್ಲ. ಈ ಪತ್ರವನ್ನು ಕಾಸಿಂ ಬರೆದಿದ್ದಲ್ಲ,ಎಬಿವಿಪಿ ಸದಸ್ಯ ಬರೆದಿದ್ದು ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿವೆ.
ಮಾನಸಿಕ ಅಸ್ವಸ್ಥ ವಿದ್ಯಾರ್ಥಿ ಜೆಎನ್‌ಯುದಲ್ಲಿ ಅತ್ಯಂತ ಕಠಿಣ ಕೋರ್ಸ್‌ನ್ನು ವ್ಯಾಸಂಗ ಮಾಡುವುದು ಸಾಧ್ಯವೇ? ಆತ ಅತ್ಯಂತ ಬುದ್ಧಿವಂತನಾಗಿದ್ದ ಎಂದು ನಜೀಬ್‌ನ ಚಿಕ್ಕಮ್ಮನ ಮಗಳು ಸದಾಫ್ ಮುಶಾರಫ್ ಸುದ್ದಿಗಾರರಿಗೆ ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News