×
Ad

ಅದಾನಿ, ಅಂಬಾನಿಗಳಿಗೆ ನೋಟು ರದ್ದತಿ ಮೊದಲೇ ಗೊತ್ತಿತ್ತು ಎಂದ ಬಿಜೆಪಿ ಶಾಸಕ

Update: 2016-11-17 10:04 IST

ಹೊಸದಿಲ್ಲಿ, ನ.17 :  ಅದಾನಿ, ಅಂಬಾನಿ ಸಹಿತ ಹಲವಾರು ಪ್ರಮುಖ ಉದ್ಯಮಿಗಳಿಗೆ ಸರಕಾರದ ನೋಟು ರದ್ದತಿ ಯೋಜನೆಯ ಬಗ್ಗೆ ಮೊದಲೇ ಗೊತ್ತಿತ್ತು ಎಂದು ಬಿಜೆಪಿ ಶಾಸಕರೊಬ್ಬರು ಹೇಳುವ ವೀಡಿಯೊ ಬಹಿರಂಗಗೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸ್ವಯಂಘೋಷಿತ ಕಾಂಗ್ರೆಸ್ ಬೆಂಬಲಿಗನೆಂದು ಹೇಳಿಕೊಂಡ ವ್ಯಕ್ತಿ ಮೂಲತಃ ಪೋಸ್ಟ್ ಮಾಡಿದ್ದ ಈ ವೀಡಿಯೊವನ್ನು ರಹಸ್ಯವಾಗಿ ಚಿತ್ರೀಕರಿಸಿದಂತೆ ಕಾಣುತ್ತಿದ್ದು ಅದರಲ್ಲಿ ರಾಜಸ್ಥಾನದ ಕೋಟಾ ಕ್ಷೇತ್ರದ ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜಪುತ್ ಅವರು ಪ್ರಮುಖ ಉದ್ಯಮಿಗಳು ತಮ್ಮಲ್ಲಿದ್ದ ಕಪ್ಪು ಹಣವನ್ನು  ಸರಕಾರ ನೋಟು ರದ್ದತಿ ಬಗ್ಗೆ ಘೋಷಿಸುವ ಮೊದಲೇ ವಿಲೇವಾರಿ ಮಾಡಿದ್ದರೆಂದು ಹೇಳಿದ್ದಾರೆ.

``ಅದೊಂದು ಹಂತ ಹಂತವಾದ ಕ್ರಮವಾಗಿರಬಹುದು. ಎಲ್ಲವೂ ಸರಿಯಾಗುವ ತನಕ ಸರಕಾರ ಜನರಿಗೆ ಸ್ವಲ್ಪ ಸಮಯಾವಕಾಶ ಕೊಡಬಹುದಾಗಿತ್ತು. ಅದಾನಿ ಹಾಗೂ ಅಂಬಾನಿಗಳಿಗೆ ಈ ವಿಚಾರ ಮೊದಲೇ ಗೊತ್ತಿತ್ತು,'' ಎಂದು ರಾಜಪುತ್ ಹೇಳಿದ್ದಾರೆ.
ಸರಿಯಾದ ಯೋಜನೆಯಿಲ್ಲದೆ ಜಾರಿಗೊಳಿಸಲಾದ ಈ ನೋಟು ರದ್ದತಿಯನ್ನು ಬಿಜೆಪಿ ಶಾಸಕ ಟೀಕಿಸುತ್ತಿರುವುದು  ವೀಡಿಯೊದಲ್ಲಿ ಕಾಣಬಹುದಾಗಿದೆ.

ಭವಾನಿ ಸಿಂಗ್ ವಿವಾದಗಳಿಗೆ ಹೊಸಬರೇನಲ್ಲ. ಈ ಹಿಂದೆ ಅವರು ಕೋಟಾದಲ್ಲಿರುವ ಬಿಹಾರಿ ವಿದ್ಯಾರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಪರೀಕ್ಷಿಸಬೇಕೆಂದು ಹೇಳಿದ್ದರೆ, ಹೆಲ್ಮೆಟ್ ಧರಿಸಿದರೆ  ತಲೆ ಬೋಳಾಗುವುದೆಂಬ ನೆಪವೊಡ್ಡಿ ಬೈಕು ಸವಾರರಿಗೆ ಹೆಲ್ಮೆಟ್ ಧರಿಸದಂತೆಯೂ ತಾಕೀತು ಮಾಡಿ ರಾಜಪುತ್ ಸುದ್ದಿಯಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News