ಕುಡಿಯುವ ನೀರು, ಹಕ್ಕು ಪತ್ರಕ್ಕೆ ಒತ್ತಾಯಿಸಿ ಎಸ್‌ಡಿಪಿಐ ಧರಣಿ

Update: 2016-12-05 18:40 GMT

ಮುಲ್ಕಿ, ಡಿ.5: ಕುಡಿಯುವ ನೀರು, ಹಕ್ಕು ಪತ್ರ ಸೇರಿದಂತೆ ಸರಕಾರಿ ಸವಲತ್ತುಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಮುಲ್ಕಿ ಮೂಡುಬಿದಿರೆ ಕ್ಷೇತ್ರ ಎಸ್‌ಡಿಪಿಐ ವತಿಯಿಂದ ಸೋಮವಾರ ಮುಲ್ಕಿ ನಗರ ಪಂಚಾಯತ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಧರಣಿೆ ನಡೆಸಿದರು.
 ಈ ಸಂದರ್ಭ ಮಾತನಾಡಿದ ಮುಲ್ಕಿ ಮೂಡುಬಿದಿರೆ ಕ್ಷೇತ್ರ ಅಧ್ಯಕ್ಷ ಎ.ಕೆ. ಅಶ್ರಫ್, ಮುಲ್ಕಿ ಸೇರಿದಂತೆ ಈ ಭಾಗದ ಹಲವು ಪ್ರದೇಶಗಳ ಜನತೆ ಕುಡಿಯುವ ನೀರಿನ ತೀವ್ರ ಅಭಾವವನ್ನು ಎದುರಿಸುತ್ತಿದ್ದರೂ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ವಹಿಸಿದ್ದಾರೆ ಎಂದು ದೂರಿದರು.
 ಈ ಬಾರಿ ನವೆಂಬರ್‌ನಲ್ಲಿಯೇ ನೀರಿನ ಅತೀವ ಸಮಸ್ಯೆ ಕಾಣಿಸಿಕೊಂಡಿದೆ. ಆದರೆ ನಪಂ ವಾರಕ್ಕೆ ಕೇವಲ 2 ಗಂಟೆಗಳ ಕಾಲ ನೀರು ನೀಡುತ್ತಿದೆ. ಅದು ಯಾವುದಕ್ಕೂ ಸಾಕಾಗುತ್ತಿಲ್ಲ. ಜನತೆ ನೀರಿಗಾಗಿ ಚಡಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟವರು ಸದ್ಯ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಜೊತೆಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಬಡವರಾದ ಗ್ರಾಮಸ್ಥರು ನೀರಿನ ಬಿಲ್‌ಪಾವತಿಸಲು ಶಕ್ತರಲ್ಲದ ಕಾರಣ ಬಿಲ್‌ಗಳು ಬಾಕಿಯಾಗುವಂತಾಗಿದೆ. ಆದ್ದರಿಂದ ಈ ವರೆಗಿನ ನೀರಿನ ಬಿಲ್‌ಗಳನ್ನು ಮನ್ನಾಮಾಡಬೇಕೆಂದು ವಿನಂತಿಸಿದ ಧರಣಿ ನಿರತರು, ಮುಂದಿನ ತಿಂಗಳಿಂದ ಸರಿಯಾಗಿ ನೀರು ನೀಡುವ ಜೊತೆಗೆ ಶುಲ್ಕ ಸಂಗ್ರಹಕ್ಕೂ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
   
 ನಪಂ ವ್ಯಾಪ್ತಿಯ ಕಾರ್ನಾಡು ಸರ್ವೇ ನಂಬರ್ 59ರಲ್ಲಿ ಸುಮಾರು 70 ಕುಟುಂಬಗಳು ಕಳೆದ 25 ವರ್ಷಗಳಿಂದಲೂ ವಾಸವಾಗಿವೆ. ಆದರೆ, ಅವರಿಗೆ ಈ ವರೆಗೂ ಹಕ್ಕು ಪತ್ರಗಳನ್ನು ವಿತರಿಸದ ಕಾರಣ ಸರಕಾರದ ವಿವಿಧ ಸವಲತ್ತುಗಳಿಂದ ವಂಚಿತರಾಗುವಂತಾಗಿದೆ. ಎಲ್ಲ ಕುಟುಂಬಗಳಿಗೆ ಶೀಘ್ರ ಹಕ್ಕು ಪತ್ರಗಳನ್ನು ವಿತರಿಸಬೇಕೆಂದು ಧರಣಿ ನಿರತರು ಆಗ್ರಹಿಸಿದರು. ಬಳಿಕ ಮುಲ್ಕಿ ನಪಂ ಮುಖ್ಯಾಧಿಕಾರಿ ಶ್ರೀಮತಿ ಹಿಂದೂ ಸ್ಥಳಕ್ಕೆ ಆಗಮಿಸಿ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಮನವಿಯನ್ನು ಸಂಬಂಧಪಟ್ಟವರಿಗೆ ರವಾನಿಸಿ ಮುಖ್ಯಾಧಿಕಾರಿಯ ನೆಲೆಯಲ್ಲಿ ನೀಡಬಹುದಾದ ಎಲ್ಲಸಹಕಾರ ನಿಡುವುದಾಗಿ ಭರವಸೆ ನೀಡಿದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News