ಹರ್ಯಾಣವನ್ನು ಬಯಲು ಶೌಚ ಮುಕ್ತವಾಗಿಸಲು ಹೊರಟಿರುವ ಸಿಎಂ ಸ್ವಗ್ರಾಮದಲ್ಲಿಯೇ ಶೌಚಾಲಯಗಳಿಲ್ಲ
ಚಂಡಿಗಡ,ಡಿ.21: ತನ್ನ ಸರಕಾರವು 2017ರ ವೇಳೆಗೆ ರಾಜ್ಯವನ್ನು ಬಯಲು ಶೌಚ ಮುಕ್ತವನ್ನಾಗಿಸಲಿದೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಅವರೇನೋ ಭಾರೀ ಉಮೇದಿನಿಂದ ಘೋಷಿಸಿದ್ದಾರೆ. ವಿಪರ್ಯಾಸವೆಂದರೆ ಅವರ ಸ್ವಗ್ರಾಮದಲ್ಲಿಯೇ ನೂರಾರು ಮನೆಗಳಲ್ಲಿ ಶೌಚಾಲಯಗಳಿಲ್ಲ. ಗ್ರಾಮಸ್ಥರಿಗೆ ದೇಹಬಾಧೆ ತೀರಿಸಿಕೊಳ್ಳಲು ಬಯಲು ಶೌಚವೊಂದೇ ಇರುವ ಏಕೈಕ ಮಾರ್ಗ.
ಖಟ್ಟರ್ 1954ರಲ್ಲಿ ರೋಹ್ಟಕ್ ಜಿಲ್ಲೆಯ ನಿಂದನ ಗ್ರಾಮದಲ್ಲಿ ಜನಿಸಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ನೆರೆಯ ಬನಿಯಾನಿ ಗ್ರಾಮಕ್ಕೆ ಸ್ಥಳಾಂತರಗೊಂಡು ಬಾಲ್ಯದ ಹೆಚ್ಚಿನ ವರ್ಷಗಳನ್ನು ಅಲ್ಲಿಯೇ ಕಳೆದಿದ್ದರು. ಇಂದು ಬನಿಯಾನಿ ಗ್ರಾಮದ 150 ಮನೆಗಳಲ್ಲಿ ಶೌಚಾಲಯಗಳಿಲ್ಲ. ಇದೇ ರೀತಿ ಮೂರು ಪಂಚಾಯತ್ಗಳನ್ನು ಒಳಗೊಂಡಿರುವ ನಿಂದನ ಗ್ರಾಮದಲ್ಲಿ ಶೌಚಾಲಯಗಳಿಲ್ಲದ ಮನೆಗಳ ಸಂಖ್ಯೆ 400ನ್ನು ದಾಟುತ್ತದೆ. ಈ ಪೈಕಿ ಒಂದು ಪಂಚಾಯತ್ ಸುಳ್ಳು ಅಂಕಿಅಂಶಗಳನ್ನು ನೀಡಿ ಬಯಲು ಶೌಚ ಮುಕ್ತವಾಗಿದ್ದಕ್ಕೆ ಒಂದು ಲಕ್ಷ ರೂ.ಗಳ ಬಹುಮಾನವನ್ನು ಪಡೆದಿದೆ ಎಂದು ಆಗಸ್ಟ್ನಲ್ಲಿ ಆರೋಪವನ್ನೂ ಮಾಡಲಾಗಿತ್ತು. ಪಂಚಾಯತ್ ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಮನೆಗಳು ಶೌಚಾಲಯಗಳನ್ನು ಹೊಂದಿಲ್ಲ ಎಂದು ಪಂಚಾಯತ್ ಸದ್ಯರು ಜಿಲ್ಲಾಡಳಿತಕ್ಕೆ ದೂರು ನೀಡುವುದರೊಂದಿಗೆ ‘ಬಯಲು ಶೌಚ ಮುಕ್ತ ’ಪಂಚಾಯತ್ ಎನ್ನುವ ಹೆಗ್ಗಳಿಕೆ ಠುಸ್ ಎಂದಿತ್ತು.
ಹರ್ಯಾಣ ರಾಜ್ಯ ಸ್ಥಾಪನೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಏಳು ಜಿಲ್ಲೆಗಳು ಬಯಲು ಶೌಚ ಮುಕ್ತವಾಗಿವೆ ಎಂದು ಪ್ರಕಟಿಸಿದ್ದರು. ಆದರೆ ಸಿಎಂ ಮನೋಹರಲಾಲ್ ಅವರ ಸ್ವಗ್ರಾಮಗಳು ಮಾತ್ರ ಬಯಲು ಶೌಚದಿಂದ ಕೊಳೆತು ನಾರುತ್ತಿವೆ. ಲಂಚದ ಆರೋಪಗಳು ಮತ್ತು ಸ್ಥಳೀಯ ಅಧಿಕಾರಿಗಳ ಒತ್ತಾಸೆಯ ಮೇರೆಗೆ ನಕಲಿ ದತ್ತಾಂಶಗಳ ಸೃಷ್ಟಿಯ ನಡುವೆ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಈ ಗ್ರಾಮಗಳಲ್ಲಿ ಸಂಪೂರ್ಣವಾಗಿ ಹಳ್ಳ ಹಿಡಿದಿದೆ.
ಬನಿಯಾನಿ ನಿವಾಸಿ ಲಕ್ಷ್ಮೀದೇವಿ(48)ಯ ಎರಡೂ ಕಾಲುಗಳು ಬಾತುಕೊಂಡಿದ್ದು ಹೆಜ್ಜೆಗಳನ್ನಿಡಲು ತುಂಬ ಕಷ್ಟ ಪಡಬೇಕಾಗಿದೆ. ಎದ್ದು ನಿಲ್ಲಲೂ ಒದ್ದಾಡುವ ಆಕೆ ಬಹಿರ್ದೆಸೆಗಾಗಿ ತುಂಬ ದೂರ ನಡೆದು ಹೋಗಬೇಕು. ಮನೆಯಲ್ಲೇಕೆ ಶೌಚಾಲಯ ಕಟ್ಟಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ 16 ಹರೆಯದ ಪುತ್ರಿಯ ತಾಯಿಯಾಗಿರುವ ಆಕೆ ‘‘ ಹುಡುಗಿ ಪ್ರಾಯಕ್ಕೆ ಬಂದಿದ್ದಾಳೆ ಎನ್ನುವುದು ಗೊತ್ತಿದೆ... ಅವಳು ಶೌಚಕ್ಕೆಂದು ಹೊರಗೆ ಹೋದಾಗ ಚಿಂತೆಯೂ ಕಾಡುತ್ತದೆ. ಆದರೆ ಏನು ಮಾಡಲಿ....ಶೌಚಾಲಯ ನಿರ್ಮಿಸಲು ನಮ್ಮ ಬಳಿ ಹಣವಿಲ್ಲ ’’ ಎಂದು ಅಳಲು ತೋಡಿಕೊಂಡಳು.
ಇಲ್ಲಿಯ ಹಲವಾರು ನಿವಾಸಿಗಳು ಆಡಳಿತದೊಂದಿಗೆ ಜಟಾಪಟಿಗಿಳಿದಿದ್ದು, ಶೌಚಾಲಯ ನಿರ್ಮಾಣಕ್ಕೆ 12,000 ರೂ.ಪ್ರೋತ್ಸಾಹ ಧನ ನೀಡುವಂತೆ ಆಗ್ರಹಿಸಿದ್ದಾರೆ. ಸರಕಾರದ ಯೋಜನೆಯಡಿ ಶೌಚಾಲಯ ನಿರ್ಮಾಣಗೊಂಡ ಬಳಿಕ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ, ಆದರೆ ಶೌಚಾಲಯ ನಿರ್ಮಾಣಕ್ಕೆ ಮೊದಲೇ ಅದು ತಮ್ಮ ಕೈಸೇರಬೇಕೆಂದು ಗ್ರಾಮಸ್ಥರು ಬಯಸುತ್ತಿದ್ದಾರೆ.
ಸರಕಾರ ನಮಗೆ ಮೊದಲೇ ಹಣ ನೀಡಿದರೆ ಶೌಚಾಲಯವನ್ನು ನಿರ್ಮಿಸುತ್ತೇವೆ. ಇಲ್ಲದಿದ್ದರೆ ಅದಕ್ಕೆ ವ್ಯಯಿಸಲು ನಮ್ಮ ಬಳಿ ಹಣವಿಲ್ಲ ಎಂದು ಬರ್ಫಿ ದೇವಿ ಎಂಬಾಕೆ ಹೇಳಿದಳು.
ಅಂದ ಹಾಗೆ ಈ ಹಿಂದೆ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದ ಕೆಲವರಿಗೆ ಕಹಿ ಅನುಭವ ಆಗಿದೆ. ನಿರ್ಮಾಣ ಪೂರ್ಣಗೊಂಡು ವರ್ಷಗಳೇ ಕಳೆದು ಹೋದರೂ ಅವರಿಗೆ ಪ್ರೋತ್ಸಾಹ ಧನ ಸಿಕ್ಕಿಲ್ಲ, ಸಿಕ್ಕ ಕೆಲವರು ಅದಕ್ಕಾಗಿ ಅಧಿಕಾರಿಗಳಿಗೆ ಲಂಚ ನೀಡಿದ್ದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.