ಕೇರಳದ ದಾವೂದ್ ಬಂಟ ದಿಲ್ಲಿಯಲ್ಲಿ ಬಂಧನ
ಹೊಸದಿಲ್ಲಿ, ಡಿ.23: ಭೂಗತಪಾತಕಿ ದಾವೂದ್ ಇಬ್ರಾಹೀಂ ತಂಡದ ಕೇರಳದ ವ್ಯಕ್ತಿಯನ್ನು ದಿಲ್ಲಿಯಲ್ಲಿ ಎನ್ಐಎ(ರಾಷ್ಟ್ರೀಯ ತನಿಖಾ ದಳ) ಬಂಧಿಸಿದೆ. ನಕಲಿ ನೋಟು ವಿತರಣೆ ತಂಡಕ್ಕೆ ಸೇರಿದ ಸಲಾಂ ಯಾನೆ ಅಬ್ದುಲ್ ಸಲಾಂ ಎಂಬಾತನನ್ನು ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಈತ ಮಲಪ್ಪುರಂನ ನಿವಾಸಿ ಎನ್ನಲಾಗಿದೆ.
2014ರಲ್ಲಿ ನೆಡುಂಬಾಶ್ಶೇರಿ ವಿಮಾನನಿಲ್ದಾಣದಲ್ಲಿ ಒಂಬತ್ತು ಲಕ್ಷ ರೂಪಾಯಿ ನಕಲಿ ನೋಟು ವಶ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ. ಸೌದಿ ಅರೇಬಿಯದಿಂದ ದಿಲ್ಲಿಗೆ ಬಂದು ಇಳಿಯುತ್ತಿದ್ದ ಈತನನ್ನು ಎನ್ಐಎ ಬಂಧಿಸಿತು. ಈತನನ್ನು ಸೌದಿ ಅರೇಬಿಯ ಗಡಿಪಾರು ಮಾಡಿದೆ ಎನ್ನಲಾಗಿದೆ.
ದಾವೂದ್ ಇಬ್ರಾಹೀಂ ಬಲಗೈ ಬಂಟ ಅಫ್ತಾಬ್ ಭಕ್ತಿಯ ನಿಕಟವರ್ತಿ ಈತನೆಂದು ಎನ್ಐಎ ಆರೋಪ ಪಟ್ಟಿಯಲ್ಲಿದೆ. ಪಾಕಿಸ್ತಾನದಿಂದ ಕೊಲ್ಲಿರಾಷ್ಟ್ರಗಳ ಮೂಲಕ ಭಾರತಕ್ಕೆ ಈತ ನಕಲಿ ನೋಟು ಕಳುಹಿಸುತ್ತಿದ್ದ ತಂಡದ ಪ್ರಧಾನ ವ್ಯಕ್ತಿ ಎನ್ನಲಾಗಿದೆ. 2013ರಲ್ಲಿ ನೆಡುಂಬಶ್ಶೇರಿ ವಿಮಾನನಿಲ್ದಾಣದಲ್ಲಿ ಸೆರೆಯಾದ ಹಸನ್ ಎಂಬಾತ ಅಬ್ದುಲ್ ಸಲಾಂ ಕುರಿತು ಸುಳಿವು ನೀಡಿದ್ದ. ನಂತರ ಪ್ರಕರಣ ಎನ್ಐಎಗೆ ಒಪ್ಪಿಸಲಾಗಿತ್ತು. ಈಗ ಎರ್ನಾಕುಲಂನ ವಿಶೇಷ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.