ಕಾರ್ಕಳ: ತಮ್ಮ ಚಿತೆಯನ್ನು ತಾವೇ ನಿರ್ಮಿಸಿ ಆತ್ಮಹತ್ಯೆ ಮಾಡಿಕೊಂಡ ದಂಪತಿ

Update: 2016-12-24 07:29 GMT

ಕಾರ್ಕಳ, ಡಿ.24: ತಮ್ಮ ಚಿತೆಯನ್ನು ತಾವೇ ನಿರ್ಮಿಸಿಕೊಂಡು ಅದರಲ್ಲಿ ಮಲಗಿ ದಂಪತಿಯೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ತಾಲೂಕಿನ ಹಿರ್ಗಾನ ಗ್ರಾಮದಲ್ಲಿಂದು ಬೆಳಕಿಗೆ ಬಂದಿದೆ.

ಹಿರ್ಗಾ ಕಾನಂಗಿ ರಸ್ತೆಯ ಬೆಂಗಲ್ ನಿವಾಸಿಗಳಾದ ಸೀತಾರಾಮ ಆಚಾರ್ಯ(55) ಹಾಗೂ ಸುನಂದಾ(45) ಮೃತ ದಂಪತಿಯಾಗಿದ್ದಾರೆ. ಆತ್ಮಹತ್ಯೆ ಕೃತ್ಯ ನಡೆದು ಎರಡು ದಿನಗಳಾಗಿದ್ದು, ಜನವಾಸ ವಿರಳವಾಗಿರುವ ಪ್ರದೇಶದಲ್ಲಿ ಇವರ ಮನೆಯಿರುವುದರಿಂದ ಎರಡು ದಿನಗಳವರೆಗೂ ಯಾರ ಗಮನಕ್ಕೂ ಬಂದಿಲ್ಲ.

ತಮ್ಮ ಮನೆಯ ದೇವರ ಕೋಣೆಯಲ್ಲಿ ಸೌದೆಗಳಿಂದ ಚಿತೆ ನಿರ್ಮಿಸಿಕೊಂಡು ಅದಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಈ ವೇಳೆ ಮನೆಯ ಎಲ್ಲ ಬಾಗಿಲುಗಳನ್ನು ಮುಚ್ಚಿ ಒಳಗಿನಿಂದ ಚಿಲಕಿ ಹಾಕಲಾಗಿತ್ತು. ಚಿತೆಗೆ ಬಳಸಿದ ಕರ್ಪೂರ, ಗಂಧದ ತುಂಡುಗಳು, ಎಳ್ಳೆಣ್ಣೆ, ಊದುಬತ್ತಿಯ ಅವಶೇಷಗಳು ದೇವರ ಕೋಣೆಯಲ್ಲಿ ಪತ್ತೆಯಾಗಿವೆ. ದಂಪತಿ ಬೆಂಕಿಗೆ ಸಂಪೂರ್ಣ ಆಹುತಿಯಾಗಿದ್ದು, ಬರೀ ಮೂಳೆಗಳು ಮಾತ್ರ ಉಳಿದುಕೊಂಡಿವೆ.

ಇವರ ಮನೆಗಿಂತ  ದೂರಲ್ಲೊಂದು ಮನೆಯಿದ್ದು, ಅವರು ಡಿ.22ರಿಂದ ಮನೆಗೆ ಬಾಗಿಲು ಬೇರೆಲ್ಲೊ ತೆರಳಿದ್ದರು. ಇಂದು ಮನೆಗೆ ಹಿಂದಿರುಗಿದ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದೆ. ಮನೆಯ ಹಂಚು ಬೆಂಕಿಯಿಂದ ಹಾನಿಗೀಡಾಗಿರುವುದರಿಂದ ಸಂಶಯಗೊಂಡು ನೋಡಿದಾಗ ಈ ಕೃತ್ಯ ಬಯಲಾಗಿದೆ.

ದಂಪತಿಗೆ ಮಕ್ಕಳಿಲ್ಲವಾಗಿದ್ದು, ಇದೇ ಕೊರಗಿನಿಂದ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬೆಂಕಿಯಿಂದ ಇವರ ವಾಸದ ಮನೆಗೂ ಹಾನಿಯಾಗಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News