×
Ad

ರಣಜಿ ಟ್ರೋಫಿ: ಹಾಲಿ ಚಾಂಪಿಯನ್ ಮುಂಬೈ ಸೆಮಿ ಫೈನಲ್‌ಗೆ

Update: 2016-12-27 23:34 IST

ರಾಯ್‌ಪುರ, ಡಿ.27: ಅಭಿಷೇಕ್ ನಾಯರ್ ಆಲ್‌ರೌಂಡ್ ಆಟದ ಸಹಾಯದಿಂದ ಹಾಲಿ ಚಾಂಪಿಯನ್ ಮುಂಬೈ ತಂಡ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಮಂಗಳವಾರ ಇಲ್ಲಿ ಕೊನೆಗೊಂಡ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ತಂಡ ಹೈದರಾಬಾದ್ ತಂಡವನ್ನು 30 ರನ್‌ಗಳ ಅಂತರದಿಂದ ಮಣಿಸಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 14 ರನ್ ಮುನ್ನಡೆ ಪಡೆದಿದ್ದ ಮುಂಬೈ ಎಲ್ಲ ಒತ್ತಡವನ್ನು ಮೀರಿ ಹೈದರಾಬಾದ್‌ಗೆ ಸವಾಲಾಯಿತು.

ಐದನೆ ಹಾಗೂ ಅಂತಿಮ ದಿನದಾಟವಾದ ಮಂಗಳವಾರ ಗೆಲುವಿಗೆ 232 ರನ್ ಗುರಿ ಪಡೆದಿದ್ದ ಹೈದರಾಬಾದ್ ತಂಡ 201 ರನ್‌ಗೆ ಆಲೌಟಾಯಿತು. ನಾಯರ್ (5-40)ಹಾಗೂ ಎಡಗೈ ಸ್ಪಿನ್ನರ್ ವಿಜಯ್ ಗೊಹಿಲ್(5/64) ಹೈದರಾಬಾದ್‌ನ್ನು ಕಟ್ಟಿಹಾಕಿ ಮುಂಬೈ ಸೆಮಿಫೈನಲ್‌ಗೆ ತಲುಪಲು ನೆರವಾದರು.

  ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಬಾಲಚಂದ್ರ ಅನಿರುದ್ಧ 187 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ಗಳ ಸಹಿತ ಅಜೇಯ 84 ರನ್ ಗಳಿಸಿದ್ದರೂ ನಾಯರ್ ಬೌಲಿಂಗ್ ದಾಳಿಯ ಮುಂದೆ ಅವರ ಪ್ರಯತ್ನ ಕೈಗೂಡಲಿಲ್ಲ. ಕೊನೆಯ ದಿನವಾದ ಸೋಮವಾರ ಹೈದರಾಬಾದ್‌ನ ಉಳಿದ 3 ವಿಕೆಟ್‌ಗಳನ್ನು ಉರುಳಿಸಿದ ನಾಯರ್ ಪಂದ್ಯದಲ್ಲಿ 100ರನ್‌ಗೆ 9 ವಿಕೆಟ್ ಕಬಳಿಸಿದರು.

ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ನಾಯರ್ ಮುಂಬೈ ತಂಡಕ್ಕೆ ಮತ್ತೊಮ್ಮೆ ಆಸರೆಯಾದರು. ಕಳೆದ ಒಂದು ದಶಕದಿಂದ ನಾಯರ್ ಮುಂಬೈ ಯಶಸ್ಸಿಗೆ ದೊಡ್ಡ ಕಾಣಿಕೆ ನೀಡುತ್ತಾ ಬಂದಿದ್ದಾರೆ.

 7 ವಿಕೆಟ್‌ಗಳ ನಷ್ಟಕ್ಕೆ 121 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಹೈದರಾಬಾದ್‌ಗೆ ಕೊನೆಯ ದಿನದಾಟದಲ್ಲಿ ಗೆಲುವಿಗೆ 111 ರನ್ ಅಗತ್ಯವಿತ್ತು. 8ನೆ ವಿಕೆಟ್‌ಗೆ 64 ರನ್ ಸೇರಿಸಿದ ಮೂರನೆ ಕ್ರಮಾಂಕದ ಬ್ಯಾಟ್ಸ್‌ಮನ್ ಅನಿರುದ್ಧ ಹಾಗೂ ಚಾಮಾ ಮಿಲಿಂದ್(29) ಹೋರಾಟವನ್ನು ಮುಂದುವರಿಸಿದರು.

ಒಂದು ಹಂತದಲ್ಲಿ 7 ವಿಕೆಟ್‌ಗೆ 187 ರನ್ ಗಳಿಸಿ ಗೆಲುವಿನ ಹಾದಿಯಲ್ಲಿದ್ದ ಹೈದರಾಬಾದ್‌ಗೆ ನಾಯರ್ ಸವಾಲಾದರು. ಮೊದಲಿಗೆ ಮಿಲಿಂದ್ ವಿಕೆಟ್ ಕಬಳಿಸಿದ ನಾಯರ್ ಆ ಬಳಿಕ ಮುಹಮ್ಮದ್ ಸಿರಾಜ್‌ರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.

ಆಗ 11ನೆ ಕ್ರಮಾಂಕದ ರವಿಕಿರಣ್(1) ಜೊತೆ ಅಂತಿಮ ವಿಕೆಟ್‌ಗೆ 16 ರನ್ ಸೇರಿಸಿದ ಅನಿರುದ್ಧ್ ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು. ಕಿರನ್ ವಿಕೆಟ್ ಕಬಳಿಸಿದ ನಾಯರ್ ಮುಂಬೈಗೆ ರೋಚಕ ಗೆಲುವು ತಂದುಕೊಟ್ಟು ಮತ್ತೊಮ್ಮೆ ಸೆಮಿಫೈನಲ್‌ಗೆ ತಲುಪಲು ನೆರವಾದರು.

ರೋಚಕವಾಗಿ ಸಾಗಿದ್ದ ಸೆಮಿಫೈನಲ್‌ನಲ್ಲಿ ಮುಂಬೈ ತಂಡದ ಪರ ನಾಯರ್, ವಿಜಯ್ ಗೊಹಿಲ್ ಬೌಲಿಂಗ್‌ನಲ್ಲಿ ಮಿಂಚಿದರೆ, ಆದಿತ್ಯ ತಾರೆ 2 ಅರ್ಧಶತಕ ಹಾಗೂ ಸಿದ್ದೇಶ್ ಲಾಡ್ ಶತಕ ಹಾಗೂ 46 ರನ್ ಬಾರಿಸಿ ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್

ಮುಂಬೈ 294 ಹಾಗೂ 217

ಹೈದರಾಬಾದ್: 280 ಹಾಗೂ 71 ಓವರ್‌ಗಳಲ್ಲಿ 201

(ಬಿ.ಅನಿರುದ್ಧ ಅಜೇಯ 84, ಅಭಿಷೇಕ್ ನಾಯರ್ 5-40, ವಿಜಯ್ 5-64)

ಸಮಿತ್ ತ್ರಿಶತಕ ಸಾಹಸ: ಗುಜರಾತ್ ಸೆಮಿ ಫೈನಲ್‌ಗೆ

ಜೈಪುರ, ಡಿ.27: ಆರಂಭಿಕ ದಾಂಡಿಗ ಸಮಿತ್ ಗೊಹಿಲ್ ಬಾರಿಸಿದ ಅಜೇಯ 359 ರನ್ ನೆರವಿನಿಂದ ಗುಜರಾತ್ ತಂಡ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತೇರ್ಗಡೆಯಾಗಿದೆ.

 ಈ ಮೂಲಕ ಗುಜರಾತ್ 2016-17 ರ ಋತುವಿನ ರಣಜಿ ಟ್ರೋಫಿಯಲ್ಲಿ ಅಂತಿಮ ನಾಲ್ಕರ ಘಟ್ಟ ತಲುಪಿದ 4ನೆ ತಂಡವಾಗಿದೆ.

ಒಡಿಶಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 64 ರನ್ ಮುನ್ನಡೆಯ ಆಧಾರದಲ್ಲಿ ಗುಜರಾತ್ ಸೆಮಿ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿದೆ. ಗುಜರಾತ್ ಅಂತಿಮ ನಾಲ್ಕರ ಘಟ್ಟ ತಲುಪಲು ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ಸಮಿತ್ ಗೊಹಿಲ್ ಮಹತ್ವದ ಕಾಣಿಕೆ ನೀಡಿದರು.

ಮೊದಲ ಇನಿಂಗ್ಸ್‌ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ್ದ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

26ರ ಹರೆಯದ ಸಮಿತ್ ತ್ರಿಶತಕ ಬಾರಿಸಿ ದಿನದ ಹೀರೋವಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ಗರಿಷ್ಠ 104 ರನ್ ಗಳಿಸಿದ್ದ ಸಮಿತ್ ಅಜೇಯ 359 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದರು.

  ಗುಜರಾತ್ 8 ವಿಕೆಟ್ ನಷ್ಟಕ್ಕೆ 514 ರನ್‌ನಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿತು. ಹಾರ್ದಿಕ್ ಪಟೇಲ್ ಹಾಗೂ ಜಸ್‌ಪ್ರಿತ್ ಬುಮ್ರಾ ಜೊತೆಗೂಡಿ ಅಂತಿಮ 2 ವಿಕೆಟ್ ನೆರವಿನಿಂದ ಉಪಯುಕ್ತ ಜೊತೆಯಾಟ ನಡೆಸಿದ ಸಮಿತ್ ಗುಜರಾತ್ ತಂಡ 2ನೆ ಇನಿಂಗ್ಸ್‌ನಲ್ಲಿ 641 ರನ್ ದಾಖಲಿಸಲು ಕಾರಣರಾದರು.

ಇಲ್ಲಿನ ಸವಾಯ್ ಮಾನ್ ಸಿಂಗ್ ಸ್ಟೇಡಿಯಂ ಪಿಚ್ ಬೌಲಿಂಗ್ ಹಾಗೂ ಬ್ಯಾಟಿಂಗ್‌ಗೆ ನೆರವು ನೀಡಿದರೂ, ಒಡಿಶಾ ಬೌಲರ್‌ಗಳು ಫೀಲ್ಡರ್‌ಗಳ ಕಳಪೆ ಪ್ರದರ್ಶನದಿಂದ ಕೈಸುಟ್ಟುಕೊಂಡರು. ಸಮಿತ್ 299 ರನ್ ಗಳಿಸಿದ್ದಾಗ ಕ್ಯಾಚ್ ಕೈಚೆಲ್ಲಿದ ಹಲವು ಅವಕಾಶ ಕಳೆದುಕೊಂಡಿತು.

ಒಡಿಶಾ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಸಮಿತ್ ಈ ಟೂರ್ನಿಯಲ್ಲಿ 351 ರನ್ ಗಳಿಸಿದ್ದ ಮಹಾರಾಷ್ಟ್ರದ ಸ್ವಪ್ನಿಲ್ ಗುಗಾಲೆ ದಾಖಲೆಯನ್ನು ಮುರಿದರು. ಸಮಿತ್ ರಣಜಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ ಆರಂಭಿಕ ಆಟಗಾರ ನೆಂಬ ಕೀರ್ತಿಗೆ ಭಾಜನರಾದರು.

 ಎರಡನೆ ಇನಿಂಗ್ಸ್ ಆರಂಭಿಸಿದ ಒಡಿಶಾ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವ ಮೊದಲು 22 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿತು. ನಾಯಕ ಗೋವಿಂದ್ ಪದ್ದಾರ್ ಬೇಗನೆ ಔಟಾದರು. 19ರ ಹರೆಯದ ಆರಂಭಿಕ ದಾಂಡಿಗ ಸುಭ್ರಾಂಶು ಸೇನಪತಿ ಅಜೇಯ 57 ರನ್ ಗಳಿಸಿ ಚೊಚ್ಚಲ ಅರ್ಧಶತಕ ಬಾರಿಸಿದರು.

ಗುಜರಾತ್ ತಂಡ ಜ.1 ರಂದು ನಾಗ್ಪುರದಲ್ಲಿ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಜಾರ್ಖಂಡ್ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಮೊದಲ ಇನಿಂಗ್ಸ್: 263

(ಚಿರಾಗ್ ಗಾಂಧಿ 81, ರಶ್ ಕಲಾರಿಯ 73, ಬಸಂತ್ ಮೊಹಾಂತಿ 5-68)

ಗುಜರಾತ್ ಎರಡನೆ ಇನಿಂಗ್ಸ್: 641(ಸಮಿತ್ ಗೊಹಿಲ್ ಅಜೇಯ 359, ಪ್ರಿಯಾಂಕ್ ಪಾಂಚಾಲ್ 81,ಧೀರಜ್ ಸಿಂಗ್ 6-147)

ಒಡಿಶಾ ಪ್ರಥಮ ಇನಿಂಗ್ಸ್: 199(ಸೂರ್ಯಕಾಂತ್ ಪ್ರಧಾನ್ 47, ಜಸ್‌ಪ್ರಿತ್ ಬುಮ್ರಾ 5-41)

ಒಡಿಶಾ ಎರಡನೆ ಇನಿಂಗ್ಸ್: 81/1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News