ಒಳಚರಂಡಿ ಕಾಮಗಾರಿ: ಮಣು್ಣ ಕುಸಿದು ಕಾರ್ಮಿಕ ಮೃತು್ಯ
Update: 2017-01-13 18:57 GMT
ಉಡುಪಿ, ಜ.13: ಉಡುಪಿ ನಗರಸಭೆಯ ಒಳಚರಂಡಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ 11:30ರ ಸುಮಾರಿಗೆ ಕರಾವಳಿ ಬೈಪಾಸ್ ಬಳಿ ನಡೆದಿದೆ.
ಮೃತರನ್ನು ಬಿಹಾರ ಮೂಲದ ಬೀರ್ ಬಹದ್ದೂರು ಸಿಂಗ್(45) ಎಂದು ಗುರುತಿಸಲಾಗಿದೆ. ಇವರು ಮತ್ತು ಇನ್ನೊಬ್ಬ ಕಾರ್ಮಿಕ ಜೆಸಿಬಿ ಮೂಲಕ ಮಣ್ಣು ತೆಗೆದು ಮೇಲೆ ಹಾಕಿದ್ದ ಸುಮಾರು 8-10 ಅಡಿ ಆಳದ ತೋಡಿನಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮಣ್ಣು ಕುಸಿದು ಹೊಂಡಕ್ಕೆ ಬಿತ್ತೆನ್ನಲಾಗಿದೆ.
ಇನ್ನೋರ್ವ ಕಾರ್ಮಿಕ ಕೂಡಲೇ ಹೊಂಡದಿಂದ ಮೇಲೆ ಹತ್ತಿ ಅಪಾಯದಿಂದ ಪಾರಾದರು. ಆದರೆ ಬಹದ್ದೂರು ಸಿಂಗ್ ಮಣ್ಣಿನಡಿಗೆ ಸಿಲುಕಿ ಅಸ್ವಸ್ಥಗೊಂಡರು. ತಕ್ಷಣ ಜೆಸಿಬಿ ಮೂಲಕ ಮಣ್ಣನ್ನು ತೆಗೆದು ಅವರನ್ನು ಹೊರಗೆ ತೆಗೆದು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸಿಂಗ್ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.