ತ.ನಾ.: ಸುಬ್ರಮಣಿಯನ್ ಸ್ವಾಮಿ ಹೇಳಿಕೆಗೆ ವ್ಯಾಪಕ ಆಕ್ರೋಶ
ಚೆನ್ನೈ, ಜ.19: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಬೆಂಬಲಿಸಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗಿಯಾದವರನ್ನು ‘ಪೊರುಕ್ಕಿಗಳು’ (ರೌಡಿಗಳು) ಎಂದು ಸಂಬೋಧಿಸಿ ತಮಿಳರನ್ನು ಅವಹೇಳನಗೈದಿದ್ದಕ್ಕಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಎದುರಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ಜಲ್ಲಿಕಟ್ಟು ನಡೆದಿದ್ದೇ ಆದಲ್ಲಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಈ ಹಿಂದೆ ಟ್ವೀಟ್ ಮಾಡಿ ಸಾಕಷ್ಟು ಆಕ್ರೋಶಕ್ಕೀಡಾಗಿದ್ದ ಸ್ವಾಮಿ ಆನಂತರ ‘‘ಸಾಮಾಜಿಕ ಜಾಲತಾಣದಲ್ಲಿ ಧೀಮಂತರಂತೆ ನಡೆದುಕೊಂಡಿದ್ದವರು ಪ್ರತಿಭಟನೆ ನಡೆಯುತ್ತಿರುವಾಗ ಪೊಲೀಸ್ ಬಲದೆದುರು ತಲೆತಗ್ಗಿಸಿದ್ದಾರೆ’’ ಎಂದು ಲೇವಡಿ ಮಾಡಿದ್ದರು. ‘‘ನಾವು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಹೊರತಾಗಿ ಹಿಂಸಾತ್ಮಕವಾಗಿ ಪ್ರತಿಭಟಿಸುವುದಾಗಿ ಹೇಳಿದ್ದ ತಮಿಳುನಾಡಿನ ಪೊರುಕ್ಕಿಗಳು ಪೊಲೀಸರು ಸ್ಥಳಕ್ಕಾಗಮಿಸಿದಾಗ ಅಳುತ್ತಿದ್ದಾರೆ’’ ಎಂದು ಸ್ವಾಮಿ ಅಪಹಾಸ್ಯ ಮಾಡಿದ್ದರು. ಈಗಾಗಲೇ ಸ್ವಾಮಿಯನ್ನು ಅಣಕಿಸುವ ಹೇಳಿಕೆಗಳು ಹಲವು ಫೇಸ್ಬುಕ್ ಗ್ರೂಪ್ಗಳಲ್ಲಿ ಕಾಣಿಸಲಾರಂಭಿಸಿವೆ. ಜಲ್ಲಿಕಟ್ಟು ಪರವಾಗಿ ಪ್ರತಿಭಟಿಸುತ್ತಿರುವವರು ತಮ್ಮ ಶಾಂತಿಯುತ ಪ್ರತಿಭಟನೆಯ ಹೊರತಾಗಿಯೂ ಸ್ವಾಮಿ ತಮ್ಮನ್ನು ಅವಹೇಳನ ಮಾಡುವುದು ಸಹಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ತಮಿಳು ಸೆಲೆಬ್ರಿಟಗಳಾದ ಆರ್.ಜೆ.ಬಾಲಾಜಿ, ಖುಷ್ಬೂ ಕೂಡ ಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ.