ಆರೆಸ್ಸೆಸ್ ನಾಯಕನ ಮೀಸಲಾತಿ ವಿರೋಧಿ ಹೇಳಿಕೆ ಟೀಕಿಸಿದ ಅಠವಳೆ

Update: 2017-01-23 18:17 GMT

ಹೈದರಾಬಾದ್,ಜ.23: ಮೀಸಲಾತಿ ಬಗ್ಗೆ ಆರೆಸ್ಸೆಸ್ ವಕ್ತಾರ ಮನಮೋಹನ್ ವೈದ್ಯ ಅವರ ಹೇಳಿಕೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಹಾಯಕ ಸಚಿವ, ಭಾರತೀಯ ರಿಪಬ್ಲಿಕನ್ ಪಕ್ಷ (ಆರ್‌ಪಿಐ)ದ ನಾಯಕ ರಾಮ್‌ದಾಸ್ ಅಠವಳೆ ಟೀಕಿಸಿದ್ದು, ದೇಶದಿಂದ ಜಾತಿ ಪದ್ಧತಿಯು ತೊಲಗಿದಾಗ ಮಾತ್ರವೇ ಜಾತಿ ಆಧಾರಿತ ಮೀಸಲಾತಿ ಕೊನೆಗೊಳ್ಳಲಿದೆಯೆಂದು ಅವರು ಪ್ರತಿಪಾದಿಸಿದ್ದಾರೆ.

ಹೈದರಾಬಾದ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮೀಸಲಾತಿ ಬಗ್ಗೆ ವೈದ್ಯ ನೀಡಿರುವ ಹೇಳಿಕೆಯು ಅವರ ವೈಯಕ್ತಿಕ ಅನಿಸಿಕೆಯಾಗಿದ್ದು, ಅದನ್ನು ತಾನು ತಿರಸ್ಕರಿಸುವುದಾಗಿ ಹೇಳಿದರು. ಇತ್ತೀಚೆಗೆ ವೈದ್ಯ ಅವರು, ಜಾತಿ ಆಧಾರಿತ ಮೀಸಲಾತಿಯು ಒಂದು ಹಂತದಲ್ಲಿ ಕೊನೆಗೊಳ್ಳಬೇಕಾಗಿದೆಯೆಂದು ಹೇಳುವ ಮೂಲಕ ವಿವಾದದ ಕಿಡಿಯೆಬ್ಬಿಸಿದ್ದರು.
ವಾಸ್ತವವಾಗಿ ಎಲ್ಲಾ ಜಾತಿಗಳ ಆವಶ್ಯಕತೆಗಳಿಗೆ ಅನುಗುಣವಾಗಿ ಜಾತಿ ಆಧಾರಿತ ಮೀಸಲಾತಿಯನ್ನು ಶೇ.75ರಷ್ಟು ಹೆಚ್ಚಿಸಬೇಕೆಂದು ಆಗ್ರಹಿಸಿದ ಅಠವಳೆ, ಶೇ.25ರಷ್ಟು ಮೀಸಲಾತಿಯನ್ನು ಇತರ ಜಾತಿಗಳ ಅಭ್ಯರ್ಥಿಗಳಿಗೆ ತೆರೆದಿಡಬೇಕೆಂದರು. ತಾನು ಹಾಗೂ ತನ್ನ ಪಕ್ಷವು ಆರ್ಥಿಕ ಮೀಸಲಾತಿಯನ್ನು ಬೆಂಬಲಿಸುವುದಿಲ್ಲವೆಂದುಆರ್‌ಪಿಐನ  ಸಂಸ್ಥಾಪಕರೂ ಆದ ಅಠವಳೆ ತಿಳಿಸಿದರು. ಆರ್‌ಪಿಐ ಕೇಂದ್ರದ ಆಡಳಿತಾರೂಢ ಎನ್‌ಡಿಎ ಸರಕಾರದ ಅಂಗಪಕ್ಷವಾಗಿದೆ. ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ತನ್ನ ಬೆಂಬಲ ಘೋಷಿಸಿದ್ದಾರೆಂದು ಅಠವಳೆ ಗಮನಸೆಳೆದರು.
ಆರ್‌ಪಿಐ ಉತ್ತರಪ್ರದೇಶದಲ್ಲಿ 150 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಇತರ ಕ್ಷೇತ್ರಗಳಲ್ಲಿ ಅದು ಬಿಜೆಪಿಯನ್ನು ಬೆಂಬಲಿಸುತ್ತಿದೆಯೆಂದು ಅಠವಳೆ ತಿಳಿಸಿದರು.

..................................


ಮೀಸಲಾತಿಗಾಗಿ ಜಾಟರಿಂದ ಮತ್ತೆ ಮುಷ್ಕರದ ಬೆದರಿಕೆ
ಗುರ್ಗಾಂವ್,ಜ.23: ಸರಕಾರಿ ಉದ್ಯೋಗಿಗಳಲ್ಲಿ ಮೀಸಲಾತಿ ನೀಡಬೇಕೆಂಬ ತಮ್ಮ ಬೇಡಿಕೆಯನ್ನು ಮನೋಹರ್ ಲಾಲ್ ಕಟ್ಟರ್ ಸರಕಾರವು ಈಡೇರಿಸಿಲ್ಲವೆಂದು ಆರೋಪಿಸಿರುವ ಹರ್ಯಾಣದ ಜಾಟ್ ಸಂಘಟನೆಗಳು, ರಾಜ್ಯದ 19 ಜಿಲ್ಲೆಗಳಲ್ಲಿ ಮತ್ತೆ ಮುಷ್ಕರಕ್ಕಿಳಿಯುವ ಬೆದರಿಕೆಯೊಡ್ಡಿವೆ.
ಜಾಟ್ ಸಂಘಟನೆಗಳ ಮುಷ್ಕರವನ್ನು ಎದುರಿಸಲು ಪೊಲೀಸರನ್ನು ಸನ್ನದ್ದಗೊಳಿಸಲಾಗುತ್ತಿದ್ದು, ರವಿವಾರ ಗುರ್ಗಾಂವ್‌ನಲ್ಲಿ ಅಣಕು ಕವಾಯತೊಂದನ್ನು ನಡೆಸಲಾಗಿದೆಯೆಂದು ಸ್ಥಳೀಯ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಮನೀಶ್ ಸೆಹಗಲ್ ತಿಳಿಸಿದ್ದಾರೆ.

ಮುಂದಿನ ವಾರ ಮುಷ್ಕರವನ್ನು ಆರಂಭಿಸುವ ಯೋಜನೆಯನ್ನು ಜಾಟ್ ನಾಯಕರು ಹೊಂದಿದ್ದು, ಈಗಾಗಲೇ ಹರ್ಯಾಣ ಹಾಗೂ ದಿಲ್ಲಿಯ ಆಸುಪಾಸಿನ 250 ಗ್ರಾಮಗಳ ಜನರ ಬೆಂಬಲ ತಮಗೆ ದೊರೆತಿರುವುದಾಗಿ ಹೇಳಿಕೊಂಡಿದ್ದಾರೆ. ‘‘ಜಾಟ್ ಸಮುದಾಯಕ್ಕೆ ಓಬಿಸಿ ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ಕಳೆದ 11 ತಿಂಗಳುಗಳಿಂದ ನಾವು ಹಲವಾರು ಹಳ್ಳಿಗಳಲ್ಲಿ ಪಂಚಾಯತ್ ಸಭೆಗಳನ್ನು ನಡೆಸಿದ್ದೇವೆ ಎಂದು ಅಖಿಲ ಭಾರತ ಜಾಟ್ ಮೀಸಲಾತಿ ಸಂಘರ್ಷ ಸಮಿತಿಯ ಅಧ್ಯಕ್ಷ ಯಶ್‌ಪಾಲ್ ಮಲಿಕ್ ತಿಳಿಸಿದ್ದಾರೆ.
ಮೀಸಲಾತಿಯನ್ನು ಪಡೆಯುವುದಕ್ಕಾಗಿ ಜಾಟ್ ಸಮುದಾಯವು ಯಾವುದೇ ಸವಾಲನ್ನು ಎದುರಿಸಲು ಸಿದ್ಧವೆಂದು ಹೇಳಿದ ಅವರು ಹರ್ಯಾಣದ ಬಿಜೆಪಿ ಸರಕಾರವು ತಮ್ಮನ್ನು ವಂಚಿಸಿದೆಯೆಂದು ಆರೋಪಿಸಿದರು. ‘‘ ಹರ್ಯಾಣ ಹಾಗೂ ಕೇಂದ್ರದ ಬಿಜೆಪಿ ಸರಕಾರವು ಕಳೆದ ಸಲ ನಮ್ಮನು ವಂಚಿಸಿತ್ತು ಹಾಗೂ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಮಾಡಲು ಹುಸಿ ಭರವಸೆಗಳನ್ನು ನೀಡಿತ್ತು. ಅಲ್ಲದೆ ಮುಷ್ಕರದ ವೇಳೆ ಖಾಸಗಿ ಹಾಗೂ ಸರಕಾರಿ ಸೊತ್ತುಗಳಿಗೆ ಹಾನಿ ಮಾಡಿದ್ದಾರೆಂದು ಆರೋಪಿಸಿ ಜಾಟ್ ಯುವಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿತ್ತೆೆಂದು’’ ಮಲಿಕ್ ಆಪಾದಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News