ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ‘ಅಭಯ ನಿಧಿ’: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ
ಬೆಂಗಳೂರು, ಜ. 27: ಬಾಲನ್ಯಾಯ ಕಾಯ್ದೆ ಆಶಯದಂತೆ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಪ್ರಾಸಾಂಗಿಕ ವೆಚ್ಚ ಮತ್ತು ವೈದ್ಯಕೀಯ ವೆಚ್ಚಕ್ಕಾಗಿ 1ಲಕ್ಷ ರೂ.ನೀಡಲು ‘ಅಭಯ ನಿಧಿ’ಯನ್ನು ಸ್ಥಾಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಈ ನಿಧಿಯಡಿ 227ಮಕ್ಕಳಿಗೆ ಸಹಾಯ ಒದಗಿಸಲಾಗಿದೆ ಎಂದರು.
ತುಮಕೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೊಸದಾಗಿ ಬಾಲಕಿಯರ ಬಾಲಮಂದಿರ ಆರಂಭಿಸಲು ಆದೇಶ ಹೊರಡಿಸಲಾಗಿದೆ. ಹಾಗೆಯೇ ಚಿತ್ರದುರ್ಗದಲ್ಲಿ ಬಾಲಕರ ಬಾಲಮಂದಿರ ಮತ್ತು ಬೀದರ್ ಜಿಲ್ಲೆಯಲ್ಲಿ ನೂತನ ವೀಕ್ಷಣಾಲಯ ಆರಂಭಿಸಲು ಆದೇಶ ಹೊರಡಿಸಲಾಗಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೆರೆದ ತಂಗುದಾಣಗಳಲ್ಲಿ ಆಶ್ರಯ ಪಡೆದ ಮಕ್ಕಳು ಭವಿಷ್ಯದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ಅವರಿಗೆ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ವೃತ್ತಿಪರ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಉಮಾಶ್ರೀ ಅಧಿಕಾರಿಗಳಿಗೆ ಸೂಚಿಸಿದರು.
ದಿನಭತ್ತೆ ಹೆಚ್ಚಳ: ಬೇರೆ-ಬೇರೆ ಭಾಗಗಳಿಂದ ಬೆಂಗಳೂರಿಗೆ ಬಂದ ನಿರ್ಗತಿಕ ಮಕ್ಕಳನ್ನು ಅವರವರ ಊರುಗಳಿಗೆ ಕರೆದುಕೊಂಡು ಹೋಗುವ ಬೆಂಗಾವಲು ಸಿಬ್ಬಂದಿಗಳಿಗೆ (ಪೊಲೀಸರು ಮತ್ತು ಸ್ವಯಂ ಸೇವಾ ಸಂಘದ ಪ್ರತಿನಿಧಿಗಳು ಹಾಗೂ ಇಲಾಖೆ ಸಿಬ್ಬಂದಿ) ಪ್ರಸ್ತುತ ದಿನವೊಂದಕ್ಕೆ 100 ರೂ.ದಿನಭತ್ತೆ ನೀಡಲಾಗುತ್ತಿತ್ತು. ಅದನ್ನು 250 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ ಎಂದು ಉಮಾಶ್ರೀ ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿಗಳಲ್ಲಿ ವಿಲೇ ಆಗದಿರುವ ಪ್ರಕರಣಗಳನ್ನು ಶೀಘ್ರವೇ ವಿಲೇ ಮಾಡಲು ಕ್ರಮ ಕೈಗೊಳ್ಳಬೇಕು. ನೂರು ದಿನಕ್ಕಿಂತಲೂ ಹೆಚ್ಚಿಗೆ ಯಾವುದೇ ಪ್ರಕರಣವನ್ನು ಬಾಕಿ ಇಡಬಾರದು. ಎಲ್ಲ ಅಧ್ಯಕ್ಷರುಗಳು ತಮ್ಮ ಸಮಿತಿಗಳಲ್ಲಿ ಪ್ರಕರಣ ವಿಲೇವಾರಿಗೆ ಕೂಡಲೇ ಚಾಲನೆ ನೀಡಿ ಶೀಘ್ರವೇ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು.
ಇದುವರೆಗೂ ವಿವಿಧ ಮಕ್ಕಳ ಕಲ್ಯಾಣ ಸಮಿತಿಗಳ ಮುಂದೆ ಹಾಜರಾದ 7,874 ಮಕ್ಕಳಲ್ಲಿ 6,706 ಮಕ್ಕಳಿಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪೋಷಕರಿಗೆ ಸೇರಿಸುವ ಹಾಗೂ ಇತರ ಸಂಸ್ಥೆಗಳಿಗೆ ದಾಖಲಿಸುವ ಮೂಲಕ ುನರ್ವಸತಿ ಕಲ್ಪಿಸಲಾಗಿದೆ ಎಂದರು.
ರಾಜ್ಯದಲ್ಲಿ ಬಾಲನ್ಯಾಯ ಕಾಯ್ದೆಯಡಿ ಈವರೆಗೆ 662 ಸಂಸ್ಥೆಗಳ ನೋಂದಣಿ ಮಾಡಲಾಗಿದೆ. ಕಳೆದ ಸಾಲಿನಲ್ಲಿ 174 ಮಕ್ಕಳನ್ನು ದತ್ತು ನೀಡಲಾಗಿದೆ. ಈ ವರ್ಷ ಡಿಸೆಂಬರ್ ಅಂತ್ಯದವರೆಗೆ 176 ಮಕ್ಕಳನ್ನು ದತ್ತು ನೀಡಲಾಗಿದೆ. 14 ಮಕ್ಕಳನ್ನು ವಿದೇಶಗಳಿಗೆ ದತ್ತು ನೀಡಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಕಲ್ಯಾಣ ಸಮಿತಿಗಳು ತಮ್ಮಲ್ಲಿ ಅಹವಾಲು ಹೇಳಿಕೊಂಡು ಬರುವವರ ಜೊತೆ ಮಾನವೀಯತೆಯಿಂದ ವರ್ತಿಸಬೇಕು. ಬರುವವರು ನೊಂದು ಬಂದಿರುತ್ತಾರೆ. ಅವರಿಗೆ ಸ್ಪಂದಿಸಿ ಸೂಕ್ತ ಪರಿಹಾರವನ್ನು ಒದಗಿಸಿಕೊಡಲು ಪ್ರಯತ್ನಿಸಬೇಕೆಂದರು.
ಮಮತೆಯ ತೊಟ್ಟಿಲು: ‘ಅನಾಥ ಮಕ್ಕಳನ್ನು ಸ್ವೀಕರಿಸಲು ವಿವಿಧ ಕಡೆಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಹಾಗೂ ಸಂಘ-ಸಂಸ್ಥೆಗಳಲ್ಲಿ ತೊಟ್ಟಿಲುಗಳನ್ನು ಇರಿಸಲು ಕಾರ್ಯಕ್ರಮ ರೂಪಿಸಲಾಗಿದ್ದು, ಇದಕ್ಕೆ ಮಮತೆಯ ತೊಟ್ಟಿಲು ಎಂದು ಹೆಸರಿಡಲಾಗಿದೆ’
-ಉಮಾಶ್ರೀ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ