ವಿಟ್ಲ: ರಸ್ತೆ ಅಪಘಾತಕ್ಕೆ ವಗ್ಗದ ಯುವಕ ಬಲಿ

Update: 2017-02-06 04:25 GMT

ವಿಟ್ಲ, ಫೆ.6:  ಔತಣಕೂಟವೊಂದನ್ನು ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಅಪಾಯಕಾರಿ ತಿರುವಿನಲ್ಲಿ ಬೈಕ್ ಸವಾರ ನಿಯಂತ್ರಣ ತಪ್ಪಿ ಮನೆಮೇಲೆ ಉರುಳಿ ಬಿದ್ದು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕಲ್ಲಕಟ್ಟ ಎಂಬಲ್ಲಿ ರವಿವಾರ ತಡರಾತ್ರಿ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಕಾರಿಂಜೆ ನಿವಾಸಿ ಪುಷ್ಪರಾಜ್ (೨೧) ಮೃತಪಟ್ಟವರು. 
ವಿಟ್ಲ ಕಸಬಾ ಗ್ರಾಮದ ಚಂದಳಿಕೆ ಎಂಬಲ್ಲಿ ನಡೆಯುತ್ತಿದ್ದ ಔತಣಕೂಟ ಮುಗಿಸಿಕೊಂಡು ರಾತ್ರಿ ೨ ಗಂಟೆಗೆ ಸುಮಾರಿಗೆ ಪುತ್ತೂರು ರಸ್ತೆಯಾಗಿ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲಕಟ್ಟ ತಿರುವಿನಲ್ಲಿ ಬೈಕ್ ನಿಯಂತ್ರಣ ಕಳೆದು ಆನಂದ ಕಲ್ಲಕಟ್ಟ ಎಂಬವರ ಮನೆಯ ಮೇಲೆ ಉರುಳಿ ಬಿದ್ದಿದೆ. ಮನೆಯ ಮೇಲೆ ಬಿದ್ದ ಬೈಕ್ ಮಹಡಿಯ ಮೇಲಿನಿಂದ ಉರುಳಿ ಬಿದ್ದ ರಭಸಕ್ಕೆ ಪುಷ್ಪರಾಜ್‌ ಗಂಭೀರ ಗಾಯಗೊಂಡಿದ್ದರು. ಕೂಡಲೇ ಮನೆಯವರು ಪುಷ್ಪರಾಜ್‌ ರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದರು.

ಉರುಳಿ ಬಿದ್ದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮನೆಗೂ ಹಾನಿ ಸಂಭವಿಸಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವರದಿ: ಮೂಸಾ ಕಲೀಮ್

contributor

Editor - ವರದಿ: ಮೂಸಾ ಕಲೀಮ್

contributor

Similar News