ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ಮುಲ್ಕಿಯಲ್ಲಿ ಸೊಳ್ಳೆ ಉತ್ಪಾದನಾ ಕೇಂದ್ರ

Update: 2017-02-07 18:38 GMT

ಮುಲ್ಕಿ, ಫೆ.7: ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಅವ್ಯವಸ್ಥೆಯಿಂದ ಕಳೆದ ಕೆಲ ತಿಂಗಳಿನಿಂದ ಮುಲ್ಕಿ ಬಸ್ ನಿಲ್ದಾಣದ ಸಮೀಪ ಆರ್.ಆರ್. ಟವರ್ಸ್‌ ಮುಂಭಾಗದಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದ್ದು ವಿಪರೀತ ದುರ್ವಾಸನೆ ಯುಕ್ತ ವಾತಾವರಣ ಸೃಷ್ಟಿಯಾಗಿದೆ.

ಮುಲ್ಕಿ ಬಸ್ ನಿಲ್ದಾಣದ ಬಳಿಯ ಹೊಟೇಲ್ ಹಾಗೂ ಆಸ್ಪತ್ರೆಗಳ ತ್ಯಾಜ್ಯ ನೀರು ಒಳಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿ ಬದಿಯಲ್ಲೇ ಶೇಖರಣೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಮುಲ್ಕಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಕಾಮಗಾರಿ ವಿಳಂಬವಾಗಿರುವ ಕಾರಣ ಮುಲ್ಕಿ ನಪಂ ವತಿಯಿಂದ ನಡೆಯಬೇಕಿದ್ದ ಒಳಚರಂಡಿ ಕಾಮಗಾ ರಿಗೂ ತೊಡಕುಂಟಾಗಿದೆ. ಕೊಳಚೆ ನೀರು ಹೆದ್ದಾರಿ ಬದಿಯಲ್ಲಿ ಶೇಖರಣೆಗೊಂಡು ಕೆರೆಯಾಗಿ ಪರಿಣಮಿಸಿದ್ದು, ರೋಗ ಹರಡುವ ಸೊಳ್ಳೆಗಳ ವಾಸಸ್ಥಾನವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

 ಕಾಮಗಾರಿ ನಿಧಾನ ಗತಿಯಿಂದ ಸಾಗುತ್ತಿರುವ ಬಗ್ಗೆ ಸ್ಥಳೀಯರು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿರುವ ಬಗ್ಗೆ ಅರಿತ ಸಂಸದರು ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಒಂದು ವಾರದಲ್ಲಿ ಕಾಮಗಾರಿ ಪೂರ್ಣ ಗೊಳಿಸುವಂತೆ ಹೆದ್ದಾರಿ ಇಲಾಖೆಗೆ ತಾಕೀತು ಮಾಡಿದ್ದರು. ಆದರೆ, ಸಂಸದರ ಮಾತಿಗೂ ಬೆಲೆ ನೀಡದ ಗುತ್ತಿಗೆದಾರರು ಕಾಮಗಾರಿ ಇದುವರೆಗೂ ಯಾವುದೇ ಕಾಮಗಾರಿಯನ್ನು ಮಾಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಳಚೆ ನೀರಿನಲ್ಲಿ ಈಗಾಗಲೇ ಸೊಳ್ಳೆ ಉತ್ಪಾದನೆಯಾಗಿದ್ದು, ಮುಲ್ಕಿ ನಪಂ ಕೂಡಲೇ ತಾತ್ಕಾಲಿಕ ನೆಲೆಯಲ್ಲಾದರೂ ಪರಿ ಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News