ಜಿಲ್ಲೆಗೊಬ್ಬರಿಗೆ ಆದ್ಯತೆ, ಫೆ.23 ರಂದು ಪ್ರಶಸ್ತಿ ಪ್ರದಾನ : 30 ಕಲಾವಿದರಿಗೆ ಜಾನಪದ ಅಕಾಡಮಿ ಗೌರವ

Update: 2017-02-20 14:03 GMT

ಬೆಂಗಳೂರು, ಫೆ.20: ಕರ್ನಾಟಕ ಜಾನಪದ ಅಕಾಡಮಿಯ 2016 ನೆ ಸಾಲಿನ ಪ್ರಶಸ್ತಿಯನ್ನು ರಾಮನ್ನ ಊರ್ಫ ಚಿನ್ನ(ಬುಡಬುಡಕೆ), ಲೇಕ್ಕಮ್ಮ(ಹಂತಿ ಪದ), ಹೌಸಾಬಾಯಿ (ಚೌಡಿಕೆಪದ) ಸೇರಿದಂತೆ 30 ಜನರಿಗೆ ನೀಡಲಾಗುತ್ತಿದೆ ಎಂದು ಅಕಾಡಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದ್ದಾರೆ.

 ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ತಳ ಸಮುದಾಯಗಳಲ್ಲಿ ಹಲವಾರು ಜಾನಪದ ಕಲಾವಿದರಿದ್ದಾರೆ. ಆದರೆ, ಇದುವರೆಗೂ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದುದರಿಂದ ಈ ಬಾರಿ ಪ್ರಶಸ್ತಿಗೆ ಪ್ರತಿ ಜಿಲ್ಲೆಗೆ ಒಬ್ಬರಂತೆ 30 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ತಳ ಸಮುದಾಯದಲ್ಲಿನ ಕಲಾವಿದರನ್ನು ಗುರುತಿಸಲಾಗಿದೆ. ಅಲ್ಲದೆ, ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಗುರುತಿಸಲಾಗುತ್ತಿದೆ ಎಂದು ಹೇಳಿದರು.

  ಸೋಬಾನೆ ಪದ ಕಲಾವಿದೆ ಸಿದ್ದಮ್ಮ(ಬೆಂಗಳೂರು ನಗರ), ತಮಟೆ ವಾದನ ಕಲಾವಿದ ಗಂಗಪ್ಪ(ಬೆಂಗಳೂರು ಗ್ರಾಮಾಂತರ), ಮುನಿಯಪ್ಪ (ಕೋಲಾರ), ಪಟಾ ಕುಣಿತ ಕಲಾವಿದ ಚಿಕ್ಕಕೆಂಪಯ್ಯ(ರಾಮನಗರ), ಕೀಲು ಕುದುರೆ ಕಲಾವಿದ ಕೆ.ಬಿ.ಷಣ್ಮುಖಪ್ಪ (ದಾವಣಗೆರೆ), ಕಥನ ಕಾವ್ಯ ಕಲಾವಿದೆ ತಿಮ್ಮಕ್ಕ( ಚಿತ್ರದುರ್ಗ), ಗೊಂಡರ ಡಕ್ಕೆ ಕುಣಿತ ಕಲಾವಿದ ಸಂಕಯ್ಯ(ಶಿವಮೊಗ್ಗ).

ಜೋಗುಳ ಪದಗಳ ಕಲಾವಿದೆ ಶಕುಂತಲಾ ಬೂಸನೂರ(ಕಲಬುರಗಿ), ಜನಪದ ವೈದ್ಯ ಕಲಾವಿದ ಬೀರಪ್ಪ ಸಂಗಪ್ಪ ಮುತ್ಯಾ(ಬೀದರ್), ಜಾನಪದ ಗಾಯನ ಕಲಾವಿದೆ ಬಸಮ್ಮ ಲಿಂಗಪ್ಪ ಮಣ್ಣೂರು(ರಾಯಚೂರು), ದುರ್ಗಾಮುರ್ಗಿ ಕಲಾವಿದ ದೊಡ್ಡ ರಾಮಣ್ಣ(ಬಳ್ಳಾರಿ), ಚೆಂಚು ಕಾವ್ಯ ಕಲಾವಿದೆ ಚಂದಮ್ಮ ಭೀಮಪ್ಪ ಜಿಗಳೆ(ಯಾದಗಿರಿ), ಡೊಳ್ಳಿನ ಪದಕಲಾವಿದ ಇಮಾನ್‌ಸಾಬ್ ವಲ್ಲಪ್ಪನವರ್(ಧಾರವಾಡ), ಕರಡಿ ಮಜಲು ಕಲಾವಿದ ದಯಾನಂದ ಬಸಪ್ಪ ಆವಡಿ(ವಿಜಯಪುರ), ಚೌಡಿಕೆ ಪದಗಳ ಕಲಾವಿದೆ ಕಮಲವ್ವ(ಬಾಗಲಕೋಟೆ), ಗೌಳಿಗರ ನೃತ್ಯ ಕಲಾವಿದ ಚಿಟ್ಟು ವಿಟ್ಟು ಯಡಗೆ (ಉತ್ತರ ಕನ್ನಡ).

ಅಲ್ಲದೆ, ಸಂಪ್ರದಾಯ ಪದ ಕಲಾವಿದೆ ಬಸವ್ವ ಮ ಹರಿಜನ(ಹಾವೇರಿ) ಹಾಗೂ ನಂಜಮ್ಮ(ಹಾಸನ), ಯಲ್ಲಮ್ಮನ ಪದಗಳ ಕಲಾವಿದ ಶಂಕರಪ್ಪ ರಾಮಪ್ಪ ಸಂಕಣ್ಣವರ (ಗದಗ), ಮಕ್ಕಳ ಪದಗಳ ಕಲಾವಿದೆ ಮಹದೇವಮ್ಮ(ಮೈಸೂರು), ವೀರಭ್ರದನ ಕುಣಿತ ಕಲಾವಿದ ಮಹದೇವಪ್ಪ(ಮಂಡ್ಯ), ಹಸಲರ ಪದಗಳ ಕಲಾವಿದೆ ಲಕ್ಷ್ಮಿ(ಚಿಕ್ಕಮಗಳೂರು), ಪಾಡ್ದನ ಹಾಡುಗಾರಿಕೆ ಕಲಾವಿದೆ ಸುಮತಿ ಮೊಗೇರ್ತಿ(ದಕ್ಷಿಣಕನ್ನಡ), ಸೂಲಗಿತ್ತಿ ಕಲಾವಿದೆ ಬೆಳ್ಳಿ ಬಾಯಿ(ಉಡುಪಿ), ಜೇನುಕುರುಬ ಕೋಲಾಟ ಕಲಾವಿದ ಜೆ.ಕೆ.ತಮ್ಮ (ಕೊಡಗು), ಸೋಲಿಗರ ಪದಗಳ ಕಲಾವಿದೆ ಸಣ್ಣಮ್ಮ(ಚಾಮರಾಜನಗರ) ಇವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಇಂದಿನಿಂದ(ಫೆ.21) ಮೂರು ದಿನಗಳ ನಗರದ ಸಂಸ ಬಯಲು ರಂಗಮಂದಿರದಲ್ಲಿ ಜಾನಪದ ಉತ್ಸವ ಹಮ್ಮಿಕೊಳ್ಳಲಾಗಿದೆ. ಮೊದಲನೇ ದಿನ ಕಾರ್ಯಕ್ರಮವನ್ನು ಪ್ರಸಿದ್ಧ ಜಾನಪದ ಕಲಾವಿದ ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಚಾಲನೆ ನೀಡಲಿದ್ದು, ಜಾನಪದ ವಿದ್ವಾಂಸ ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಎರಡನೇ ದಿನ ನಗರದ ಕಸಾಪದಿಂದ 110 ಕಲಾ ತಂಡಗಳ ಜಾನಪದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕೊನೆ ದಿನ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಕೇಂದ್ರ ಸಚಿವ ಅನಂತಕುಮಾರ್, ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ತಜ್ಞರಿಗೆ ಗೌರವ

ಡಾ.ಬಿ.ಎಸ್.ತಲ್ವಾಡಿ ಮತ್ತು ಬಿ.ಕುಮುದ ಅವರಿಗೆ 2016 ನೆ ಸಾಲಿನ ತಜ್ಞಪ್ರಶಸ್ತಿಗಳಾದ ಡಾ.ಜಿ.ಶಂ.ಪ ಪ್ರಶಸ್ತಿ ಮತ್ತು ಡಾ.ಬಿ.ಎನ್.ಗದ್ಗಿಮಠ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

-ಪಿಚ್ಚಳ್ಳಿ ಶ್ರೀನಿವಾಸ್, ಜಾನಪದ ಅಕಾಡೆಮಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News