ಸಂವಿಧಾನ ಪೀಠ ರಚನೆ: ದಿಲ್ಲಿ ಸರಕಾರದ ಅರ್ಜಿ ಪರಿಶೀಲನೆಗೆ ಸುಪ್ರೀಂ ಒಪ್ಪಿಗೆ
Update: 2017-02-23 12:22 GMT
ಹೊಸದಿಲ್ಲಿ,ಫೆ.23: ಲೆಫ್ಟಿನೆಂಟ್ ಗವರ್ನರ್ರನ್ನು ದಿಲ್ಲಿಯ ಆಡಳಿತಾತ್ಮಕ ಮುಖ್ಯಸ್ಥ ರನ್ನಾಗಿ ಘೋಷಿಸಿರುವ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ತಾನು ಸಲ್ಲಿಸಿರುವ ಮೇಲ್ಮನವಿಗಳ ತ್ವರಿತ ವಿಚಾರಣೆಗಾಗಿ ಸಂವಿಧಾನ ಪೀಠವನ್ನು ರಚಿಸುವಂತೆ ಆಪ್ ಸರಕಾರವು ಸಲ್ಲಿಸಿರುವ ಅರ್ಜಿಯನ್ನು ತಾನು ಪರಿಶೀಲಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿತು.
ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠದೆದುರು ವಿಷಯವನ್ನು ಪ್ರಸ್ತಾಪಿಸಿದ ದಿಲ್ಲಿ ಸರಕಾರದ ಪರ ವಕೀಲ ಗೋಪಾಲ ಸುಬ್ರಮಣಿಯಂ ಅವರು, ಇದನ್ನು ಪಂಚ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಒಪ್ಪಿಸಲಾಗಿದೆ ಮತ್ತು ಹಾಗೆ ಮಾಡುವಾಗ ಇದೊಂದು ತುರ್ತು ವಿಷಯವೆಂದು ನ್ಯಾಯಾಲಯವು ಒಪ್ಪಿಕೊಂಡಿತ್ತು ಎನ್ನುವುದನ್ನು ನೆನಪಿಸಿದರು.