ವಿವಾದಗಳ ನಡುವೆ ಶಿವನ ಮೂರ್ತಿಯ ಉದ್ಘಾಟನೆ

Update: 2017-02-24 18:02 GMT

ಕೊಯಂಬತ್ತೂರು, ಫೆ.24: ಆದಿಯೋಗಿ(ಹಿಂದೂ ಸಂಪ್ರದಾಯದ ಪ್ರಕಾರ ಶಿವನ ಒಂದು ಸ್ವರೂಪವೇ ಯೋಗಿ ಪಂಥದ ಪ್ರಥಮ ಯೋಗಿ)ಗೆ ಸಮರ್ಪಿತವಾದ 112 ಅಡಿ ಎತ್ತರದ ಶಿವನ ಮೂರ್ತಿಯನ್ನು ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಖ್ಯಾತ ಯೋಗಗುರು ಜಗ್ಗಿ ವಾಸುದೇವ್‌ಗೆ ಸೇರಿದ ಈಷ ಪ್ರತಿಷ್ಠಾನ ಈ ಮೂರ್ತಿಯ ನಿರ್ಮಾಣಕ್ಕೆ ಹಣದ ನೆರವು ನೀಡಿದೆ.

2012ರಿಂದಲೂ ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕಿರುವ ಈ ಪ್ರತಿಷ್ಠಾನವು ಇದೀಗ ಈ ಶಿವನ ಮೂರ್ತಿ ಪ್ರತಿಷ್ಠಾಪನೆಯ ಕಾರಣದಿಂದ ಮತ್ತೆ ವಿವಾದ ಹುಟ್ಟಿಸಿದೆ. ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯವಿರುವ ಅನುಮತಿಯನ್ನು ಪ್ರತಿಷ್ಠಾನ ಪಡೆದಿಲ್ಲ ಎಂದು ಕೊಯಂಬತ್ತೂರಿನ ಬುಡಕಟ್ಟು ಸಂಘಟನೆಯೊಂದು ಆರೋಪಿಸಿದೆ. ಆದರೆ ಜಿಲ್ಲಾಧಿಕಾರಿ, ಅರಣ್ಯ ಇಲಾಖೆ, ಬಿಎಸ್‌ಎನ್‌ಎಲ್ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ ಎಂದು ಪ್ರತಿಷ್ಠಾನ ತನ್ನ ವೆಬ್‌ಸೈಟಿನಲ್ಲಿ ಹೇಳಿಕೊಂಡಿದೆ.

ಸದ್ಗುರು ಜಗ್ಗಿ ವಾಸುದೇವ ಅವರ ಈಶ ಪ್ರತಿಷ್ಠಾನ ನಿರ್ಮಾಣ ಕಾನೂನನ್ನು ಉಲ್ಲಂಘಿಸಿದೆ ಎಂದು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರೋರ್ವರು ಆರೋಪಿಸಿದ್ದು , ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಈ ಕಾರ್ಯವನ್ನು ಸಮರ್ಥಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ.

 ಅಲ್ಲದೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಎಂ.ವೆಟ್ರಿಸೆಲ್ವನ್ ಎಂಬವರು ಈಶ ಪ್ರತಿಷ್ಠಾನದ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಈಶ ಪ್ರತಿಷ್ಠಾನವು ಕೊಯಂಬತ್ತೂರು ಜಿಲ್ಲೆಯ ಇಕ್ಕೆರೈ ಬೊಲ್ಲುವಂಪಟ್ಟಿ ಗ್ರಾಮದಲ್ಲಿ ನಿರ್ಮಿಸಿರುವ ಎಲ್ಲಾ ಅಕ್ರಮ ನಿರ್ಮಾಣ ಮತ್ತು ರಚನೆಗಳನ್ನು ಕೆಡಹುವಂತೆ ಮನವಿ ಮಾಡಿಕೊಂಡಿದ್ದಾರೆ.

   ಇದರ ಜೊತೆಗೆ, ಗೃಹನಿರ್ಮಾಣ ಮತ್ತು ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿಯವರೂ ಕೂಡಾ ಹೈಕೋರ್ಟ್‌ಗೆ ಪ್ರತಿ ಅಫಿದಾವಿತ್ ಸಲ್ಲಿಸಿದ್ದು ಇದರಲ್ಲಿ- ಈಶ ಪ್ರತಿಷ್ಠಾನವು ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿರುವುದಾಗಿ ತಿಳಿದುಬಂದಿದ್ದು , ಈ ಪ್ರಕಾರ 2012ರ ಫೆ.11ರಂದು ಕಾರ್ಯವನ್ನು ಸ್ಥಗಿತಗೊಳಿಸುವಂತೆ ನೋಟಿಸ್ ನೀಡಲಾಗಿದೆ. ಅಲ್ಲದೆ 2012ರ ಡಿ.24ರಂದು ಈ ಪ್ರದೇಶಕ್ಕೆ ಬೀಗ ಜಡಿದು ಮುಚ್ಚಿ ಬಿಡಲು ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.

 ಅದಾಗ್ಯೂ ಈ ಪ್ರತಿಷ್ಠಾನದ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಬ್ರೇಕ್ ಬಿದ್ದಿಲ್ಲ ಎನ್ನಲಾಗಿದೆ. ಸುಮಾರು 1,25,000 ಚದರ ಮೀಟರ್ ಪ್ರದೇಶದಲ್ಲಿ ಈ ಪ್ರತಿಷ್ಠಾನ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದೆ. ಈ ಪ್ರಕರಣದಲ್ಲಿ ನಾಲ್ಕು ರಿಟ್ ಅರ್ಜಿಗಳು ವಿಚಾರಣೆಗೆ ಬಾಕಿ ಇವೆ. ಆರೂ ಈ ಪ್ರಕರಣದ ವಿಚಾರಣೆ ಒಂದಿಂಚೂ ಮುಂದೆ ಸಾಗದಿರುವುದು ವಿಷಾದನೀಯ ಎಂದು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಡಿ.ಹರಿಪರಂಥಮನ್ ಹೇಳಿದ್ದಾರೆ. ಎಡಪಕ್ಷಗಳೂ ಈ ಬಗ್ಗೆ ಟೀಕೆ ನಡೆಸಿದ್ದು ಕಾನೂನು ಉಲ್ಲಂಘಿಸಿ ನಿರ್ಮಿಸಿರುವ ಮೂರ್ತಿಯ ಉದ್ಘಾಟನೆಗೆ ಪ್ರಧಾನಿ ಮೋದಿ ಬರುವ ಔಚಿತ್ಯ ಏನಿತ್ತು ಎಂದು ಪ್ರಶ್ನಿಸಿವೆ.

ಈ ಪ್ರತಿಷ್ಠಾನ ಕಾನೂನನ್ನು ಉಲ್ಲಂಘಿಸಿದೆ ಎಂದು ಸರಕಾರವೇ ಒಪ್ಪಿಕೊಂಡರೂ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಪಳನಿಸ್ವಾಮಿ ಮುಂತಾದ ಪ್ರಮುಖರು ಈ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News