ಪೊಲೀಸ್ ಬೆಂಗಾವಲಿನೊಂದಿಗಿದ್ದ ವಿಚಾರಣಾಧೀನ ಕೈದಿಯ ಹತ್ಯೆ

Update: 2017-02-25 09:00 GMT

ಮದುರೈ,ಫೆ.25: ತನ್ನ ವಿರೋಧಿ ಗ್ಯಾಂಗಿನಿಂದ ಕೊಲೆಯಾಗಿರುವ ದಲಿತ ನಾಯಕ ಪಶುಪತಿ ಪಾಂಡ್ಯನ್ ನಿಕಟವರ್ತಿ ಸಿಂಗಾಂರಂ ಅಲಿಯಾಸ್ ಬಾಲಸುಬ್ರಮಣಿಯನ್ (48) ಎಂಬಾತನನ್ನು ನಿನ್ನೆ ಪೊಲೀಸ್ ಬೆಂಗಾವಲಿನಲ್ಲಿ ತಿರುನೆಲ್ವೆಲಿಯ ಪಾಳ್ಯಂಕೊಟ್ಟೈ ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗಲೇ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹತ್ಯೆಗೈದಿದೆ.

    ಕೊಲೆಯಾಗಿರುವ ಬಾಲಸುಬ್ರಮಣಿಯನ್ ತೂತ್ತುಕುಡಿಯ ಅತ್ತೂರ ಬಳಿಯ ಪುಲ್ಲವೇಲಿ ನಿವಾಸಿಯಾಗಿದ್ದು, ಕೊಲೆ ಸೇರಿದಂತೆ ಒಂಭತ್ತು ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು. ತೂತ್ತುಕುಡಿ ಜೈಲಿನಲ್ಲಿದ್ದ ಆತನನ್ನು ಕಾಲುನೋವಿನ ಚಿಕತ್ಸೆಗಾಗಿ ಪಾಳ್ಯಂಕೊಟ್ಟೈ ಜೈಲಿಗೆ ಸ್ಥಳಾಂತರಗೊಳಿಸಲಾಗಿತ್ತು. ನಿನ್ನೆ ಬೆಳಿಗ್ಗೆ ಪ್ರಕರಣವೊಂದರ ವಿಚಾರಣೆಗಾಗಿ ಬಾಲಸುಬ್ರಮಣಿಯನ್‌ನನ್ನು ಪೊಲೀಸ್ ಜೀಪಿನಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿತ್ತು. ಜೀಪಿನಲ್ಲಿ ಚಾಲಕನ ಜೊತೆಗೆ ಮೂವರು ಪೊಲೀಸರು ಮತ್ತು ಎಸ್‌ಐ ವೀರಬಾಹು ಇದ್ದರು. ಸುಮಾರು ಎಂಟು ಕಿ.ಮೀ. ದೂರಕ್ಕೆ ಸಾಗುತ್ತಿದ್ದಂತೆ ಕೆಟಿಸಿ ನಗರ ಎಂಬಲ್ಲಿಯ ಚೆಕ್‌ಪೋಸ್ಟ್ ಬಳಿ ತಲುಪುತ್ತಿದ್ದಂತೆ ಕಾರುಗಳು ಮತ್ತು ಆಟೋರಿಕ್ಷಾಗಳಲ್ಲಿ ಕಾದು ಕುಳಿತಿದ್ದ 13 ಜನರ ಗುಂಪು ಪೊಲೀಸ್ ಜೀಪನ್ನು ತಡೆದು ನಿಲ್ಲಿಸಿತ್ತು. ಏನಾಗುತ್ತಿದೆ ಎನ್ನುವುದು ಪೊಲೀಸರಿಗೆ ಗೊತ್ತಾಗುವ ಮುನ್ನವೇ ಅವರ ಮೇಲೆ ಮೆಣಸಿನ ಪುಡಿ ಮಿಶ್ರಗೊಳಿಸಿದ್ದ ನೀರನ್ನು ಎರಚಿದ ದುಷ್ಕರ್ಮಿಗಳು ಬಾಲಸುಬ್ರಮಣಿಯನ್‌ನನ್ನು ಜೀಪಿನಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ. ತೀವ್ರಗಾಯಗಳಿಂದ ರಕ್ತದ ಮಡುವಲ್ಲಿ ಕುಸಿದು ಬಿದ್ದಾಗ ಅಲ್ಲಿಂಂಪರಾರಿಯಾಗಿದ್ದಾರೆ. ಬಾಲಸುಬ್ರಮಣಿಯನ್‌ನನ್ನು ತಕ್ಷಣ ತಿರುನೆಲ್ವೆಲಿಯ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿ ಯಾಗದೆ ಕೊನೆಯುಸಿರೆಳೆದಿದ್ದಾನೆ.

 ಈ ಹತ್ಯೆಯ ಹಿಂದೆ ತೂತ್ತುಕುಡಿಯ ಸುಭಾಷ ಪಣ್ಣೈಯರ್ ಮತ್ತು ಆತನ ಗ್ಯಾಂಗಿನ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ಸುಮಾರು 25 ವರ್ಷಗಳಿಂದಲೂ ಪಶುಪತಿ ಪಾಂಡ್ಯನ್ ಮತ್ತು ಪಣ್ಣೈಯರ್ ಗ್ಯಾಂಗುಗಳ ಮಧ್ಯೆ ವೈಷಮ್ಯವಿದೆ. ಬಾಲಸುಬ್ರಮಣಿಯನ್ ತನ್ನ 20ರ ಹರೆಯದಿಂದಲೇ ಪಾಂಡ್ಯನ್ ಜೊತೆಯಲ್ಲಿದ್ದ. ಪಣ್ಣೈಯಾರ್‌ನ ತಂದೆ, ಅಜ್ಜ ಮತ್ತು ಸೋದರ ಸೇರಿದಂತೆ ಹಲವಾರು ಜನರು ಇವೆರಡೂ ಗ್ಯಾಂಗ್‌ಗಳ ನಡುವಿನ ಕಾಳಗಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಪಾಂಡ್ಯನ್‌ನ ಪತ್ನಿ, ಆತನ ಹಲವಾರು ನಿಕಟವರ್ತಿಗಳ ಜೊತೆಗೆ ಸ್ವತಃ ಪಾಂಡ್ಯನ್ ಕೂಡ ಗ್ಯಾಂಗ್ ವಾರ್‌ಗೆ ಬಲಿಯಾಗಿದ್ದಾನೆ.

ಬಾಲಸುಬ್ರಮಣಿಯನ್ ಮತ್ತು ಸಹಚರರು ಪಾಂಡ್ಯನ್ ಕೊಲೆಗೆ ಪ್ರತೀಕಾರವಾಗಿ ಪಣ್ಣೈಯಾರ್ ಹತ್ಯೆಗೆ ಅವಕಾಶಕ್ಕಾಗಿ ಕಾಯುತ್ತಿದ್ದರು. ಇದರ ವಾಸನೆ ಹೊಡೆದ ಪಣ್ಣೈಯಾರ್ ಬಾಲಸುಬ್ರಮಣಿಯನ್ ಕಥೆ ಮುಗಿಸಿದ್ದಾನೆ ಎನ್ನಲಾಗಿದೆ.

ಹಂತಕರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News