ನೋಟು ನಿಷೇಧದ ಪ್ರಯೋಜನವನ್ನು ಜನರಿಗೆ ವಿವರಿಸುವಲ್ಲಿ ಬಿಜೆಪಿ ವಿಫಲ: ಒಪ್ಪಿಕೊಂಡ ವೆಂಕಯ್ಯ ನಾಯ್ಡು
Update: 2017-02-25 17:16 GMT
ಹೈದರಾಬಾದ್,ಫೆ.25: ನಗದು ಅಮಾನ್ಯದ ಧನಾತ್ಮಕ ಪರಿಣಾಮಗಳನ್ನು ಜನಸಮೂಹದ ಮುಂದೆ ಪರಿಣಾಮಕಾರಿಯಾಗಿ ಕೊಂಡೊಯ್ಯಲು ಆಡಳಿತಾರೂಢ ಬಿಜೆಪಿಯು ವಿಫಲವಾಗಿದೆಯೆಂಬುದನ್ನು ಕೇಂದ್ರ ಸಚಿವ ಎಂ.ವೆಂಕಯ್ಯನಾಯ್ಡು ಶನಿವಾರ ಒಪ್ಪಿಕೊಂಡಿದ್ದಾರೆ.
ಮಹಾರಾಷ್ಟ್ರದ ಮುನ್ಸಿಪಲ್ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನ ಹಿನ್ನೆಲೆಯಲ್ಲಿ ಹೈದರಾಬಾದ್ನಲ್ಲಿ ಇಂದು ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ನೋಟು ನಿಷೇಧದ ಧನಾತ್ಮಕ ಅಂಶಗಳನ್ನು ಜನರಿಗೆ ಮನವರಿಕೆ ಮಾಡಲು ಪಕ್ಷದ ಕಾರ್ಯಕರ್ತರಿಗೆ ಸಾಧ್ಯವಾಗಲಿಲ್ಲವೆಂಬುದನ್ನು ಒಪ್ಪಿಕೊಳ್ಳುತ್ತೇವೆ ಎಂದರು. ನೋಟು ನಿಷೇಧವನ್ನು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ವಿರೋಧಿಸಿದ್ದರೂ, ಜನರು ಇಡೀ ಪ್ರಕ್ರಿಯೆಯಲ್ಲಿ ಏನೋ ಒಳಿತಿರಬೇಕೆಂದು ಭಾವಿಸಿದರು ಹಾಗೂ ಮೋದಿ ಯಾವತ್ತೂ ಪ್ರಯೋಜನಕಾರಿಯಾದುದ್ದನ್ನೇ ಮಾಡುತ್ತಾರೆ’ ಎಂದು ನಂಬಿದ್ದರು’ ಎಂದರು.