ಹಾವಂಜೆ: ಮಾನಸಿಕ ಅಸ್ವಸ್ಥ ಮಹಿಳೆಗೆ ಚಿಕಿತ್ಸೆ

Update: 2017-02-27 18:37 GMT

ಉುಪಿ, ಫೆ.27: ಹಾವಂಜೆ ಗೋಳಿಕಟ್ಟೆಯ ಮುಗ್ಗೆರಗುಜ್ಜಿ ಎಂಬಲ್ಲಿ ಸುಮಾರು 20 ವರ್ಷಗಳಿಂದ ಮಾನಸಿಕ ಖಿನ್ನತೆಗೊಳಗಾಗಿ ಒಂಟಿಯಾಗಿ ಮನೆಯಲ್ಲಿ ವಾಸವಾಗಿದ್ದ ಸುಂದರಿ ಶೆಟ್ಟಿ(65) ಎಂಬವರನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಸ್ಥಳೀಯರಾದ ನಾಗರಾಜ ಹೆಗ್ಡೆ ಎಂಬವರು ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದು, ಅದರಂತೆ ಫೆ.23ರಂದು ನಿತ್ಯಾನಂದ ಒಳಕಾಡು, ಸುಂದರಿ ಶೆಟ್ಟಿ ಮನೆಗೆ ತೆರಳಿ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದರು.

ಮಹಿಳೆಗೆ ವಾರಸುದಾರರಿಲ್ಲದ ಕಾರಣ ಮನೆ ಸಮೀಪದ ಲೀಲಾವತಿ ಎಂಬವರು ಕಳೆದ 3 ವರ್ಷಗಳಿಂದ ಆಹಾರ ನೀಡುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಸುಂದರಿ ಶೆಟ್ಟಿಯವರಿಗೆ ಸಂಬಂಧಿಕರ ಸಹಕಾರ ಅಗತ್ಯವಿದ್ದು, ಸಂಬಂಧಿಕರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಅವರನ್ನು ಸಂಪರ್ಕಿಸಬೇಕೆಂದು ನಿತ್ಯಾನಂದ ಒಳಕಾಡು ವಿನಂತಿಸಿಕೊಂಡಿದ್ದಾರೆ.

ಸ್ಥಳೀಯರಾದ ನಾಗರಾಜ ಶೆಟ್ಟಿ, ರವಿ, ಹಬೀಬ್, ಹರೀಶ ಶೆಟ್ಟಿ, ಅರ್ಜುನ, ಪ್ರಸಾದ ಶೆಟ್ಟಿ, ಸದಾನಂದ ಶೆಟ್ಟಿ ಮೊದಲಾದವರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News