ಡೈರಿ ವಿವಾದ: ಹೆಸರಿರುವ ಸಚಿವರ ರಾಜೀನಾಮೆಗೆ ಪೂಜಾರಿ ಒತ್ತಾಯ

Update: 2017-02-27 18:46 GMT

ಮಂಗಳೂರು, ಫೆ.27: ರಾಜ್ಯ ಸರಕಾರದ ಸಚಿವರಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ನೂರಾರು ಕೋಟಿ ರೂ. ನೀಡಿರುವ ವಿವರಗಳಿವೆ ಎನ್ನಲಾದ ಡೈರಿ ಪ್ರಕರಣಕ್ಕೆ ಸಂಬಂಧಿಸಿ ಡೈರಿಯಲ್ಲಿ ಹೆಸರಿರುವ ಸಚಿವರು ತಕ್ಷಣ ರಾಜೀನಾಮೆ ನೀಡಿ ಆದರ್ಶ ಮೆರೆಯಬೇಕು ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ. 

ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೈರಿಯಲ್ಲಿರುವ ಹೆಸರಿರುವ ಸಚಿವರು ರಾಜೀನಾಮೆ ನೀಡಬೇಕೆಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದರು. ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಯಾವ ಪಕ್ಷಗಳು ಈ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿಲ್ಲ. ರವಿವಾರ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲೂ ಬರಗಾಲದ ಬಗ್ಗೆ ಮಾತುಕತೆ ನಡೆದಿಲ್ಲ ಎಂದು ವಿಷಾದಿಸಿದರು. ಬಿಜೆಪಿಯವರು ಆ ಪಕ್ಷದ ಹೈಕಮಾಂಡ್‌ಗೆ 2ಚೆಕ್ ಮೂಲಕ ಕಪ್ಪ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರು ಸುಮ್ಮನೆ ಹೇಳಿಕೆ ನೀಡು ವುದನ್ನು ಬಿಟ್ಟು ಬಿಜೆಪಿ ಕಪ್ಪ ನೀಡಿದಕ್ಕೆ ದಾಖಲೆಯಿದ್ದಲ್ಲಿ ಕೂಡಲೇ ಬಿಡುಗಡೆ ಮಾಡಲಿ ಎಂದರು.

ಮಾಧ್ಯಮಗಳಿಂದು ಚುರುಕಾಗಿ ಕಾರ್ಯ ನಿರ್ವಹಿಸುತ್ತಿವೆ. ಸಮಾಜದ ಲೋಪ ದೋಷಗಳನ್ನು ಎತ್ತಿಹಿಡಿಯುತ್ತಿವೆ. ಮಾಧ್ಯಮ ಇಲ್ಲವಾಗಿದ್ದಲ್ಲಿ ಜನಪ್ರತಿನಿಧಿಗಳು ದೇಶವನ್ನೇ ಮಾರುತ್ತಿದ್ದರು ಎಂದು ಪೂಜಾರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅರುಣ್ ಕುವೆಲ್ಲೋ, ಕಳ್ಳಿಗೆ ತಾರಾನಾಥ ಶೆಟ್ಟಿ, ಕರುಣಾಕರ ಶೆಟ್ಟಿ, ಪುರಂದರದಾಸ ಕೂಳೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News