ಹೆಂಡ ಕುಡಿದ ಕೋತಿ
ಮಾನ್ಯರೆ,
ಉತ್ತರ ಪ್ರದೇಶದ ಚುನಾವಣೆಯಲ್ಲಿ ಅತ್ಯಂತ ಅಪಾಯಕಾರಿ ಫಲಿತಾಂಶ ಹೊರಬಿದ್ದಿದೆ. ಇಲ್ಲಿ, ಕೋಮುವಾದಿ ಶಕ್ತಿಗಳು ಹಿಂಸಾಚಾರ ಮಾಡಬಹುದು, ರಾಮಮಂದಿರ ನಿರ್ಮಾಣ ಮಾಡಬಹುದು ಎಂಬೆಲ್ಲ ಅಪಾಯಗಳಿಗಿಂತಲೂ, ಇದು ಮೋದಿ ಈವರೆಗೆ ನಡೆಸಿದ ಜನವಿರೋಧಿ ಆಡಳಿತಕ್ಕೆ ಇನ್ನಷ್ಟು ಕುಮ್ಮಕ್ಕು ನೀಡಬಹುದು ಎನ್ನುವುದು ಮುಖ್ಯವಾಗಿದೆ.
ಉತ್ತರ ಪ್ರದೇಶದ ಗೆಲುವು ಕೋಮುವಾದಿಗಳಿಗೆ ಸಿಕ್ಕಿದ ಗೆಲುವು ಎನ್ನುವುದಕ್ಕಿಂತ ಕಾರ್ಪೊರೇಟ್ ಶಕ್ತಿಗಳಿಗೆ ಸಿಕ್ಕಿದ ಗೆಲುವಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಏನಾದರೂ ಸೋತಿದ್ದರೆ, ಅದು ಮೋದಿಯ ಈವರೆಗಿನ ಆರ್ಥಿಕ ನೀತಿಯ ಸೋಲಾಗಿ ಬಿಡುತ್ತಿತ್ತು ಮತ್ತು ಮೋದಿಗೆ ತೀವ್ರ ಹಿನ್ನಡೆಯಾಗುತ್ತಿತ್ತು. ಮೋದಿಯ ಹಿನ್ನಡೆ, ಕಾರ್ಪೊರೇಟ್ ವಲಯಕ್ಕೂ ಹಿನ್ನಡೆಯನ್ನುಂಟು ಮಾಡುತ್ತಿತ್ತು. ಆದುದರಿಂದ ಕಾರ್ಪೊರೇಟ್ ವಲಯಕ್ಕೆ ಮೋದಿ ಈ ಚುನಾವಣೆಯಲ್ಲಿ ಹೀರೋ ಆಗುವುದು ಅನಿವಾರ್ಯವಾಗಿತ್ತು ಮತ್ತು ಅದರಲ್ಲಿ ಯಶಸ್ವಿಯಾಯಿತು.
ಇದರಿಂದಾಗಿ ಬಡಜನರು ಇನ್ನಷ್ಟು ಆರ್ಥಿಕ ಸಂಕಟಗಳನ್ನು ಎದುರಿಸಬೇಕಾದ ಅಪಾಯವಿದೆ. ಜನವಿರೋಧಿ ಕಾನೂನುಗಳು ಜಾರಿಯಾಗುವ ಸಂಭವವಿದೆ. ಕಾಯ್ದೆಗಳು ಜಾರಿಯಾಗುವ ಸಂಭವವಿದೆ. ಈ ವರೆಗೆ ರಾಜ್ಯಸಭೆ ಸರಕಾರಕ್ಕೆ ಒಂದು ತಡೆಯಾಗಿತ್ತು. ಅಲ್ಲೂ ಬಹುಮತ ದೊರಕಿತೆಂದರೆ ಕೋತಿಗೆ ಹೆಂಡ ಕುಡಿಸಿದಂತೆಯೇ ಸರಿ. ಅದು ಮಾಡುವ ಅನಾಹುತಗಳ ನೇರ ಬಲಿಪಶುಗಳು ಶ್ರೀಸಾಮಾನ್ಯರು. ಜನಪರ ಸಂಘಟನೆಗಳ ಹೊಣೆಗಾರಿ ಈ ಸಂದರ್ಭದಲ್ಲಿ ಹೆಚ್ಚಿದೆ.