ತುಂಬೆ, ಎಎಂಆರ್‌ನಲ್ಲಿ ಸಾಕಷ್ಟು ನೀರು!

Update: 2017-03-22 18:49 GMT

ಆದರೂ ಕುಡಿಯುವ ನೀರಿನ ಕೊರತೆಯ ಆತಂಕ

ಮಂಗಳೂರು, ಮಾ.22: ತುಂಬೆ ಅಣೆಕಟ್ಟಿನಿಂದ ಮಂಗಳೂರು ನಗರಕ್ಕೆ 48 ಗಂಟೆಗಳ ಕಾಲ ನೀರು ಪೂರೈಸಿ, ಬಳಿಕ 36 ಗಂಟೆಗಳಿಗೊಮ್ಮೆ ನೀರು ಕಡಿತಗೊಳಿಸುವ ವ್ಯವಸ್ಥೆಯನ್ನು ಮನಪಾ ಮಾಡಿದೆ. ಇದರಿಂದ ತುಂಬೆ ಹಾಗೂ ಎಎಂಆರ್ ಡ್ಯಾಂಗಳಲ್ಲಿ ಸಾಕಷ್ಟು ನೀರಿದ್ದರೂ ನಗರಕ್ಕೆ ಕುಡಿಯುವ ನೀರಿನ ಸಮಪರ್ಕ ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕ ಎದುರಾಗಿದೆ. ಮಂಗಳವಾರ ಸಂಜೆಯಿಂದ ನಗರಕ್ಕೆ ತುಂಬೆ ಯಿಂದ ನೀರು ಪೂರೈಕೆ ಆರಂಭವಾಗಿದೆ. ಈತನ್ಮಧ್ಯೆ ಬುಧವಾರ ಸಂಜೆ ತುಂಬೆಯಲ್ಲಿ ನೀರಿನ ಸಂಗ್ರಹ 5 ಮೀಟರ್‌ಗಳಷ್ಟಿತ್ತು. ಶಂಭೂರಿನ ಎಎಂಆರ್ ಡ್ಯಾಂನಲ್ಲೂ ನೀರಿನ ಮಟ್ಟ 17.92 ಅಡಿಗಳಷ್ಟಿವೆ.

ಮುಂಗಾರು ಪೂರ್ವ ಮಳೆಯಲ್ಲೂ ಕುಸಿತ?

 ಇದೇ ವೇಳೆ, ದ.ಕ. ಜಿಲ್ಲೆಯ ಉಪ್ಪಿನಂಗಡಿ, ಬೆಳ್ತಂಗಡಿ, ಮಂಗಳೂರಿನ ಕೆಲವೆಡೆ ನಿನ್ನೆ ರಾತ್ರಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ವಾಡಿಕೆಯಾಗಿ ಜಿಲ್ಲೆಯಲ್ಲಿ ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಮುಂಗಾರು ಪೂರ್ವ ಮಳೆ ಸುರಿಯುತ್ತದೆ. ಇದ ರಿಂದ ಕುಮಾರಧಾರ, ಫಲ್ಗುಣಿ, ನೇತ್ರಾವತಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ. ತುಂಬೆ ಅಣೆ ಕಟ್ಟಿಗೂ ನೀರಿನ ಒಳಹರಿವು ಉಂಟಾಗುತ್ತದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮಾ.15ರವರೆಗೆ ಸುಮಾರು 16 ಮಿ.ಮೀ.ಗಳಷ್ಟು ಮುಂಗಾರು ಮಳೆಯಾಗುತ್ತದೆ. ಆದರೆ ಜಿಲ್ಲೆಯಲ್ಲಿ ಈ ವರ್ಷ 3.3 ಮಿ.ಮೀ. ಮಾತ್ರ ಮಳೆಯಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಪ್ರಮಾಣ ಕಡಿಮೆ ಆಗಿತ್ತು. ಈ ಬಾರಿ ಮಾರ್ಚ್ ಆರಂಭದಲ್ಲೇ ನಗರದ ಬಹುತೇಕ ಪ್ರದೇಶಗಳಲ್ಲಿ ಬಾವಿ, ಕೆರೆಗಳ ನೀರು ಬತ್ತಿಹೋಗಿವೆ. ಸಾಮಾನ್ಯ ವಾಗಿ ದ.ಕ. ಜಿಲ್ಲೆಯಲ್ಲಿ ವಾರ್ಷಿಕ 3912.2 ಮಿ.ಮೀ. ಮಳೆಯಾದರೆ, 2016ರಲ್ಲಿ 2,965.3 ಮಿ.ಮೀ. ಮಾತ್ರ ಮಳೆಯಾಗಿತ್ತು. ಮಾತ್ರವಲ್ಲದೆ, ಫೆಬ್ರವರಿ ಆರಂಭದಲ್ಲೇ ಸುಡು ಬಿಸಿಲು ನದಿ, ಕೆರೆ, ಬಾವಿಗಳ ನೀರು ಇಂಗುವಂತೆ ಮಾಡಿವೆೆ.

ಕೈಗಾರಿಕೆಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿಲ್ಲ!

ನಗರದಲ್ಲಿ ಕುಡಿಯುವ ನೀರಿನ ಅಭಾವದ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಶಂಭೂರಿನ ಎಎಂಆರ್ ಡ್ಯಾಂನಿಂದ ಎಸ್‌ಇಝಡ್ ಹಾಗೂ ಎಂಆರ್‌ಪಿಎಲ್‌ಗೆ ಪ್ರತೀ ದಿನ ಪೂರೈಕೆಯಾಗುತ್ತಿದ್ದ 15 ಎಂಜಿಡಿ ನೀರನ್ನು 10 ಎಂಜಿಡಿಗೆ ಕಡಿತಗೊಳಿಸಲಾಗಿದೆ. ಕಳೆದ ಬಾರಿ ಬೇಸಿಗೆಯಲ್ಲಿ ಮಂಗಳೂರಿನಲ್ಲಿ ತೀವ್ರ ನೀರಿನ ಕೊರತೆಯಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ನಗರ ದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವವರೆಗೂ ಎಚ್ಚೆತ್ತುಕೊಳ್ಳದೆ ಕೈಗಾರಿಕೆಗಳಿಗೆ ನೀರು ಪೂರೈಕೆ ಯನ್ನು ಮುಂದುವರಿಸಿದ್ದ ಬಗ್ಗೆ ಜಿಲ್ಲಾಡಳಿತ ಸಾರ್ವಜನಿಕರಿಂದ ಆಕ್ಷೇಪವನ್ನೂ ಎದುರಿಸ ಬೇಕಾಗಿ ಬಂದಿತ್ತು. ಈ ಬಾರಿಯೂ ಸಾರ್ವ ಜನಿಕರಿಗೆ ನೀರಿನ ಕೊರತೆ ನೀಗಿಸಲು ಪೂರೈಕೆ ಯಲ್ಲಿ ಕಡಿತ ಮಾಡುವ ಮೂಲಕ ನಗರಾಡಳಿತ ಎಚ್ಚರಿಕೆ ವಹಿಸಿದ್ದರೂ, ಎಎಂಆರ್ ಅಣೆಕಟ್ಟಿ ನಿಂದ ಕೈಗಾರಿಕೆಗಳಿಗೆ ನೀರು ಸಂಪೂರ್ಣ ಸ್ಥಗಿತ ಗೊಳಿಸಿಲ್ಲ. ಕೈಗಾರಿಕೆಗಳಿಗೆ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸುವಂತೆ ಕೋರಿ ಮೇಯರ್ ಕವಿತಾ ಸನಿಲ್‌ರವರು ಜಿಲ್ಲಾಧಿಕಾರಿಗೆ ಮನವಿ ಮಾಡಿರುವುದಾಗಿ ಮಂಗಳವಾರ ಪತ್ರಿಕಾ ಸಂವಾದದಲ್ಲಿ ತಿಳಿಸಿದ್ದಾರೆ.

ಫಲ ನೀಡುತ್ತಿವೆ ಇಂಗುಗುಂಡಿಗಳು!
ಕುಡಿಯುವ ನೀರಿನ ಅಭಾವದ ಜತೆಯಲ್ಲೇ ಸಾರ್ವಜನಿಕರಲ್ಲಿ ಮಳೆ ಕೊಯ್ಲು, ಇಂಗುಗುಂಡಿ  ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಗ್ರಾಮಾಂತರ ಪ್ರದೇಶ ವಲ್ಲದೆ ನಗರ ಪ್ರದೇಶದ ಜನರು ತಮಗಿರುವ ಅಲ್ಪಸ್ವಲ್ಪ ಜಾಗದಲ್ಲೇ ಇಂಗು ಗುಂಡಿ, ಮಳೆ ಕೊಯ್ಲು ಮೂಲಕ ಪ್ರಯೋಜನವಾಗುತ್ತಿರುವ ಬಗ್ಗೆ ತೃಪ್ತಿಯ ಮಾತುಗಳ ನ್ನಾಡುತ್ತಿದ್ದಾರೆ. ‘‘ನಾನು ಕಳೆದ ಕೆಲ ವರ್ಷಗಳ ಹಿಂದೆ ವಾಮಂಜೂರಿನ ನನ್ನ ಮನೆಯ ಸುತ್ತಲಿನ ಜಾಗದಲ್ಲಿ ಇಂಗುಗುಂಡಿ ನಿರ್ಮಿಸಿದ್ದೆ. ನಮ್ಮ ಮನೆಯ ಸುತ್ತಮುತ್ತ ಕೆಲವರು ಈ ಪ್ರಯೋಗ ಗಳನ್ನು ಮಾಡಿಕೊಂಡಿದ್ದರು. ಕಳೆದ ವರ್ಷ ನಮ್ಮ ಬಾವಿ ಬತ್ತಿ ಹೋಗಿ ಟ್ಯಾಂಕರ್ ನೀರು ತರಿಸುವ ಪ್ರಮೇಯ ಎದುರಾಗಿತ್ತು. ಆದರೆ ಈ ಬಾರಿ ಬಾವಿಯಲ್ಲಿ ನೀರಿದೆ. ಇಂಗುಗುಂಡಿಗಳಿಂದ ಪ್ರಯೋಜನವಾಗಿದೆ. ಇಂತಹ ಪ್ರಯೋಗಗಳು ಎಲ್ಲಾ ಪ್ರದೇಶಗಳಲ್ಲಿ ಸಾಮೂಹಿಕವಾಗಿ ಹೆಚ್ಚಾಗ ಬೇಕು’’ ಎನ್ನುತ್ತಾರೆ ವಾಮಂಜೂರಿನ ನಿವಾಸಿ, ಸೈಂಟ್ ಆ್ಯಗ್ನೆಸ್ ಕಾಲೇಜಿನ ರಿಜಿಸ್ಟ್ರಾರ್ ಚಾರ್ಲ್ಸ್ ಪಾಯಸ್.

ಕಿಂಡಿಅಣೆಕಟ್ಟುಗಳತ್ತ ಜಿಪಂ ಚಿತ್ತ!

ನೀರಿನ ಕೊರತೆಯ ಆತಂಕದ ನಡುವೆಯೇ ದ.ಕ. ಜಿಪಂ ಸರಕಾರದ ನಿರ್ದೇಶನದಂತೆ ಕಿಂಡಿ ಅಣೆಕಟ್ಟು ಗಳ ನಿರ್ಮಾಣಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಶಾಶ್ವತ ನೀರಿನ ಪರಿಹಾರಕ್ಕಾಗಿ ಪ್ರತೀ ಗ್ರಾಮ ಪಂಚಾ ಯತ್ ವ್ಯಾಪ್ತಿಗೆ 5ರಂತೆ ಜಿಲ್ಲೆಯಲ್ಲಿ ಒಟ್ಟು 1,000 ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದೆ ಎಂದು ಜಿಪಂ ಸಿಇಒ ಡಾ.ಎಂ.ಆರ್. ರವಿ ತಿಳಿಸಿದ್ದಾರೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಡಿ ಈ ನೂತನ ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಲಿವೆ. ಈಗಾಗಲೇ ಜಿಲ್ಲೆಯ 450 ಕಡೆಗಳಲ್ಲಿ ಜಾಗಗಳನ್ನು ಗುರುತಿಸಲಾಗಿದೆ. 250ರಷ್ಟು ಕಿಂಡಿ ಅಣೆಕಟ್ಟುಗಳ ಅಂದಾಜುಪಟ್ಟಿ ತಯಾರಿಸಲಾಗಿದ್ದು, 175 ಕಡೆ ಅಣೆಕಟ್ಟು ನಿರ್ಮಾಣ ಆರಂಭಗೊಂಡಿದೆ. ಇದು ಒಂದು ವರ್ಷದ ಯೋಜನೆಯಾಗಿದೆ. ನರೇಗಾದ 43 ಕೋ.ರೂ. ಅನುದಾನ ಬಳಸಿಕೊಂಡು ಈ ಯೋಜನೆ ತಯಾರಾಗುತ್ತಿದೆ.

ಸಮುದಾಯದ ಸಹಭಾಗಿತ್ವ

ನರೇಗಾದಡಿ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟುಗಳಲ್ಲಿ ಸಮುದಾಯದ ಸಹಭಾಗಿತ್ವ ಪ್ರಮುಖ ಆಕರ್ಷಣೆಯಾಗಲಿದೆ. ಸ್ಥಳೀಯ ಸಂಘ ಸಂಸ್ಥೆಗಳು ಜತೆಗೂಡಿ ಜಾಬ್ ಕಾರ್ಡ್ ಇರುವವರು ತಮ್ಮ ಜಮೀನಿನ ಅಕ್ಕಪಕ್ಕದ ತೋಡು, ನೀರು ಹರಿದು ಹೋಗುವ ಕಡೆಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಆ ಅಣೆಕಟ್ಟಿನ ಸಮುದಾಯಯುಕ್ತ ಮಾಲಕತ್ವವನ್ನು ಪಡೆಯಲಿದ್ದಾರೆ. ಈ ಅಣೆಕಟ್ಟುಗಳ ನಿರ್ವಹಣೆಗೆ ನರೇಗಾದಿಂದ ಅನುದಾನ ಲಭ್ಯವಾಗಲಿದೆ ಎಂದು ಡಾ.ಎಂ.ಆರ್. ರವಿ ಮಾಹಿತಿ ನೀಡಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಪ್ರಸ್ತುತ 1,111 ಕಿಂಡಿ ಅಣೆಕಟ್ಟುಗಳಿವೆ. ಮಂಗಳೂರು ತಾಲೂಕಿನಲ್ಲಿ 155, ಬಂಟ್ವಾಳದಲ್ಲಿ 208, ಸುಳ್ಯ 221, ಪುತ್ತೂರು 289, ಬೆಳ್ತಂಗಡಿ 238 ಕಿಂಡಿ ಅಣೆಕಟ್ಟುಗಳಿವೆ. ಇವುಗಳಲ್ಲಿ 427 ಕಿಂಡಿ ಅಣೆಕಟ್ಟುಗಳು ದುರಸ್ತಿಯಾಗಬೇಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News