ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ: ಬಸವರಾಜ ರಾಯರೆಡ್ಡಿ

Update: 2017-03-24 16:53 GMT

ಬೆಂಗಳೂರು, ಮಾ.24: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ 2017ರ ಮಾರ್ಚ್‌ಗೆ ಅನ್ವಯವಾಗುವಂತೆ ವೇತನವನ್ನು ಹೆಚ್ಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಶುಕ್ರವಾರ ವಿಧಾನ ಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಚಿವ ಬಸವರಾಜ ರಾಯರೆಡ್ಡಿ, ಪಿಎಚ್‌ಡಿ, ನೆಟ್, ಸೆಟ್ ಪಾಸಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಈ ಮೊದಲು 10 ರಿಂದ 11 ಸಾವಿರ ರೂ.ವೇತನವನ್ನು ನೀಡಲಾಗುತ್ತಿತ್ತು. ಆದರೆ, ಈ ವರ್ಷ ಮಾರ್ಚ್‌ಗೆ ಅನ್ವಯವಾಗುವಂತೆ 11,500 ರಿಂದ 13 ಸಾವಿರ ರೂ.ವೇತನವನ್ನು ನಿೀಡಲಾಗುವುದು ಎಂದು ಹೇಳಿದರು.

ಅದೇ ರೀತಿಯಾಗಿ ಎಂಎ ಪಾಸಾಗಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಈ ಮೊದಲು 8 ರಿಂದ 9 ಸಾವಿರ ರೂ.ವೇತನವನ್ನು ನೀಡಲಾಗುತ್ತಿತ್ತು. ಆದರೆ, ಇವರಿಗೂ ಈ ವರ್ಷದ ಮಾರ್ಚ್‌ಗೆ ಅನ್ವಯವಾಗುಂತೆ 9,500 ರಿಂದ 10 ಸಾವಿರ ರೂ.ವೇತನ ನೀಡಲಾಗುವುದು ಹಾಗೂ ತಾಂತ್ರಿಕ ಶಿಕ್ಷಣ ಬೋರ್ಡ್‌ನ ಕಾಲೇಜುಗಳಲ್ಲಿ ಉಪನ್ಯಾಸಕರಾಗಿರುವ ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ವರ್ಷದ ಮಾರ್ಚ್‌ಗೆ ಅನ್ವಯವಾಗುವಂತೆ 9,500 ರೂ.ವೇತನವನ್ನು ನೀಡಲಾಗುವುದು ಎಂದು ಹೇಳಿದರು.

ಬೇಡಿಕೆ ಈಡೇರಿಕೆಗಾಗಿ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಕುಳಿತಿದ್ದ ಅತಿಥಿ ಉಪನ್ಯಾಸಕರನ್ನು ಕಳೆದ ತಿಂಗಳು ಭೇಟಿಯಾಗಿ ಅವರ ಸಮಸ್ಯೆಯನ್ನು ಆಲಿಸಿದ್ದೆ. ಹೀಗಾಗಿ, ಇವರ ವೇತನದ ಬೇಡಿಕೆಯನ್ನು ಈಡೇರಿಸಿದ್ದೇನೆ. ಹಾಗೂ ಇನ್ನುಳಿದ ಬೇಡಿಕೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News