ಮಂಗಳೂರು ಕೆಎಸ್ಸಾರ್ಟಿಸಿಗಿಲ್ಲ ಸಮರ್ಪಕ ಸಿಸಿಟಿವಿ ಕ್ಯಾಮರಾ ಕಣ್ಗಾವಲು!

Update: 2017-04-09 18:28 GMT

ಮಂಗಳೂರು, ಎ.9: ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ)ದ ಮಂಗಳೂರು ವಿಭಾಗದ ಪಾತ್ರ ಮಹತ್ತರವಾಗಿದೆ. 

ನಗರದೊಳಗೆ, ರಾಜ್ಯದೊಳಗೆ ಹಾಗೂ ಅಂತರ್ ರಾಜ್ಯ ಸಂಚಾರಕ್ಕ್ಕೂ ದಿನವೊಂದಕ್ಕೆ ಸರಾಸರಿ ಲಕ್ಷಗಟ್ಟಲೆ ಪ್ರಯಾಣಿಕರು ಮಂಗಳೂರು ಕೆಎಸ್ಸಾರ್ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಹಾಗಿದ್ದಾಗ್ಯೂ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರಾತ್ರಿ ಹಗಲೆನ್ನದೆ ಸಾರ್ವಜನಿಕರು ಸೇರುವ ಬಿಜೈನ ಪ್ರಮುಖ ಬಸ್ ನಿಲ್ದಾಣದಲ್ಲಿ ಸಮರ್ಪಕ ಸಿಸಿ ಕ್ಯಾಮರಾಗಳಿಲ್ಲ.

ಯಾವುದೇ ರೀತಿಯ ಅಹಿತಕರ ಘಟನೆಗಳು ಜನನಿಬಿಡ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ನಡೆಯುವ ಹಿನ್ನೆಲೆಯಲ್ಲಿ ದಿನವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ಸರಕಾರಿ ಸ್ವಾಮ್ಯದ ಬಸ್ ನಿಲ್ದಾಣದಲ್ಲಿ ಭದ್ರತೆಯ ಕೊರತೆಯನ್ನು ಸರಳವಾಗಿ ಪರಿಗಣಿಸುವಂತಿಲ್ಲ. ಸುಮಾರು ಮೂರು ವರ್ಷಗಳ ಹಿಂದೆ ಬಸ್ ನಿಲ್ದಾಣದಲ್ಲಿ 4 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ, ಅವುಗಳಲ್ಲಿ ಪ್ರಸ್ತುತ 2 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರು ಬಸ್ ನಿಲ್ದಾಣದೊಳಗೆ ಬರುವಲ್ಲಿನ ಹಾಗೂ ಒಳಗಡೆಯ ಒಂದು ಸಿಸಿ ಕ್ಯಾಮರಾ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ಈ ಬಸ್ ನಿಲ್ದಾಣದಲ್ಲಿ ಎರಡು ಸಿಸಿ ಕ್ಯಾಮರಾಗಳ ಕಣ್ಗಾವಲು ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಅಸಾಧ್ಯ. ಅಷ್ಟು ಮಾತ್ರವಲ್ಲದೆ, ಬಸ್ ನಿಲ್ದಾಣದ ಹೊರ ಆವರಣದಲ್ಲಿ ಯಾವುದೇ ಸಿಸಿ ಕ್ಯಾಮರಾಗಳಿಲ್ಲ.

ಹೊರ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಲಾಗುತ್ತದೆ. ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಿರುತ್ತಾರೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 3:30ಕ್ಕೆ ಮಂಗಳೂರಿನಿಂದ ಮೈಸೂರಿಗೆ ಬಸ್ ಸಂಚಾರ ಆರಂಭಗೊಳ್ಳುತ್ತದೆ. ಬಳಿಕ ತಡರಾತ್ರಿಯವರೆಗೂ ಪ್ರಯಾಣಿಕರಿಂದ ಕೂಡಿದ ಬಸ್‌ಗಳು ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಿರುತ್ತವೆ. ವಿಮಾನ, ರೈಲು ಬಳಕೆಯಲ್ಲಿ ನಗರದ ಜನತೆ ಹೆಚ್ಚಿನ ಆಸಕ್ತಿ ತೋರಿಸಿರುವಂತೆಯೇ ಕೆಎಸ್ಸಾರ್ಟಿಸಿ ಬಗ್ಗೆಯೂ ವಿಶೇಷ ಒಲವಿದೆ. ಹಾಗಾಗಿಯೇ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ರಾಜ್ಯ ಹಾಗೂ ದೇಶದ ವಿವಿಧ ಕಡೆಗಳಿಗೆ ದಿನಂಪ್ರತಿ 540 ಬಸ್‌ಗಳು ಸಂಚರಿಸುತ್ತಿವೆ. ಇವುಗಳಲ್ಲಿ ನಗರದಲ್ಲಿ ಪ್ರಸ್ತುತ ಸಂಚರಿಸುತ್ತಿರುವ 21 ನರ್ಮ್ ಬಸ್‌ಗಳು, 9 ನಗರ ಸಾರಿಗೆ ಬಸ್‌ಗಳ ಸೇರಿವೆ. ಅಲ್ಲದೆ, ಸಮೀಪದ ಕಾಸರಗೋಡು, ಪುಣೆ, ಮುಂಬೈ, ಹೈದರಾಬಾದ್, ಎರ್ನಾಕುಲಂ, ಕೊಯಮತ್ತೂರು, ಹಿಂದೂಪುರ, ತಿರುಪತಿ, ಚೆನ್ನೈ ಸೇರಿ 73 ಅಂತರ್ ರಾಜ್ಯ ಕೆಎಸ್ಸಾರ್ಟಿಸಿ ಬಸ್‌ಗಳು ಸಾರ್ವಜನಿಕರಿಗೆ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತಿವೆ.

‘‘ಕಳೆದ ಫೆಬ್ರವರಿಯಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ದಿನವೊಂದಕ್ಕೆ ಸರಾಸರಿ 1 ಲಕ್ಷದಂತೆ ಒಟ್ಟು 28 ಲಕ್ಷ ಪ್ರಯಾಣಿಕರು ವಿವಿಧ ಪ್ರದೇಶಗಳಿಗೆ ಸಂಚಾರ ಬೆಳೆಸಿದ್ದಾರೆ. ಶಾಲಾ ರಜಾ ಸಮಯ ಹಾಗೂ ಹಬ್ಬ ಹರಿದಿನಗಳ ಸಂದರ್ಭ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ’’ ಎನ್ನುತ್ತಾರೆ ಕೆಎಸ್ಸಾರ್ಟಿಸಿಯ ಮಂಗಳೂರು ವಿಭಾಗೀಯ ಸಂಚಾಲನಾಧಿಕಾರಿ ಜಯಶಾಂತ್.

ವಿಶೇಷವೆಂದರೆ, ಕೆಎಸ್ಸಾರ್ಟಿಸಿಯ ಮೂಲಕ ನರ್ಮ್ ಯೋಜನೆಯಡಿ ಮಂಗಳೂರು ನಗರಕ್ಕೆ ಮಂಜೂರಾಗಿರುವ 21 ಬಸ್‌ಗಳಲ್ಲಿಯೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.ಆದರೆ, ಬಸ್ ನಿಲ್ದಾಣದ ಭದ್ರತೆ ಬಗ್ಗೆ ಮಾತ್ರ ಕೆಎಸ್ಸಾರ್ಟಿಸಿಯ ರಾಜ್ಯ ಘಟಕ ಹೆಚ್ಚಿನ ಆಸಕ್ತಿ ತೋರಿಸಿದಂತಿಲ್ಲ. ಹಾಗಾಗಿ ಈಗಾಗಲೇ ಅಳವಡಿಸಿರುವ ನಾಲ್ಕು ಸಿಸಿಟಿವಿ ಕ್ಯಾಮರಾಗಳಲ್ಲಿ ಎರಡು ಕ್ಯಾಮರಾಗಳು ಸ್ಥಗಿತವಾಗಿದ್ದರೂ ಅದಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿಲ್ಲ, ರಿಪೇರಿ ಮಾಡುವ ಗೊಡವೆಗೂ ಹೋಗಿಲ್ಲ.

ಮಂಗಳೂರಿನಲ್ಲಿ ಖಾಸಗಿ ಬಸ್‌ಗಳ ತೀವ್ರ ಪೈಪೋಟಿಯ ನಡುವೆಯೂ ಸಾರ್ವಜನಿಕರಿಂದ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಪ್ರಯಾಣದ ಬಗ್ಗೆ ಆಸಕ್ತಿ ಕಡಿಮೆಯಾಗಿಲ್ಲ. ಸಾರ್ವಜನಿಕರು ಕೂಡಾ ನಿರಾಳವಾಗಿ ಯಾವುದೇ ಆತಂಕವಿಲ್ಲದೆ ಕೆಎಸ್ಸಾರ್ಟಿಸಿ ಬಸ್‌ಗಳ ಪ್ರಯಾಣಕ್ಕೆ ಇನ್ನಷ್ಟು ಒತ್ತು ನೀಡುವ ನಿಟ್ಟಿನಲ್ಲಿ ಬಸ್ ನಿಲ್ದಾಣದ ಭದ್ರತೆಯನ್ನೂ ಸಮರ್ಪಕ ಗೊಳಿಸಬೇಕಿದೆ.

ಹೊಸ ಸಿಸಿ ಕ್ಯಾಮರಾ ಅಳವಡಿಕೆ ಪ್ರಕ್ರಿಯೆಯಲ್ಲಿದೆ: ವಿವೇಕ್ ಹೆಗಡೆ

‘‘ಕಳೆದ ಸುಮಾರು ಮೂರು ವರ್ಷಗಳ ಹಿಂದೆ ಅಳವಡಿಸಲಾಗಿದ್ದ ನಾಲ್ಕು ಸಿಸಿ ಕ್ಯಾಮರಾಗಳಲ್ಲಿ ಎರಡು ಸುಮಾರು ನಾಲ್ಕು ತಿಂಗಳಿನಿಂದ ಕೆಟ್ಟು ಹೋಗಿವೆ. ಅದನ್ನು ರಿಪೇರಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ನಡುವೆ ರಾಜ್ಯ ಮಟ್ಟದಲ್ಲಿ ಎಲ್ಲಾ ಬಸ್ ನಿಲ್ದಾಣಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ ಕುರಿತಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮೂರ್ನಾಲ್ಕು ತಿಂಗಳಲ್ಲಿ ಮಂಗಳೂರು ಬಸ್ ನಿಲ್ದಾಣಕ್ಕೂ ಸುಮಾರು ಆರು ಹೊಸ ಸಿಸಿ ಕ್ಯಾಮರಾಗಳು ಅಳವಡಿಕೆಯಾಗಲಿವೆ. ಸದ್ಯ ಪ್ರಕ್ರಿಯೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಡೆಯುತ್ತಿದೆ’’ ಎನ್ನುತ್ತಾರೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News