ತರುಣ್ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯ: ಸರಕಾರದ ವಿರುದ್ಧ ಮುಗಿಬಿದ್ದ ವಿಪಕ್ಷಗಳು , ಕಲಾಪ ಮುಂದೂಡಿಕೆ
ಹೊಸದಿಲ್ಲಿ, ಎ.10: ಜನಾಂಗೀಯ ನಿಂದನೆಯ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ತರುಣ್ ವಿಜಯ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಲೋಕಸಭೆಯಲ್ಲಿ ವಿಪಕ್ಷಗಳು ಆಗ್ರಹಿಸಿದ್ದು ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಪಟ್ಟು ಹಿಡಿದ ಕಾರಣ ಸದನದ ಕಲಾಪವನ್ನು ಮುಂದೂಡಲಾಯಿತು.
ಈ ಮಧ್ಯೆ, ಪರಿಸ್ಥಿತಿಯನ್ನು ತಿಳಿಗೊಳಿಸುವ ಯತ್ನ ಮುಂದುವರಿಸಿದ ಸರಕಾರ , ಜಾತಿ ಅಥವಾ ಬಣ್ಣದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಭರವಸೆ ನೀಡಿತು. ಹೇಳಿಕೆ ನೀಡಿರುವ ವ್ಯಕ್ತಿ ಈಗಾಗಲೇ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೋರಿದ್ದಾರೆ ಮತ್ತು ನಮ್ಮದು ಜಾತ್ಯಾತೀತ ದೇಶ ಎಂದು ಹೇಳುವ ಮೂಲಕ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅನಂತ್ ಕುಮಾರ್ ವಿಪಕ್ಷಗಳನ್ನು ಸಮಾಧಾನಗೊಳಿಸಲು ಯತ್ನಿಸಿದರು. ಆದರೆ ವಿಪಕ್ಷಗಳು ಪಟ್ಟು ಸಡಿಲಿಸದ ಕಾರಣ ಸದನದ ಕಲಾಪವನ್ನು ಪ್ರಶ್ನೋತ್ತರ ಅವಧಿಯಲ್ಲಿ ಒಮ್ಮೆ ಹಾಗೂ ಶೂನ್ಯ ವೇಳೆಯಲ್ಲಿ ಎರಡು ಬಾರಿ ಮುಂದೂಡಲಾಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ದಕ್ಷಿಣ ಭಾರತದ ಜನರು ಭಾರತದ ನಾಗರಿಕರಲ್ಲವೇ ಎಂದು ಪ್ರಶ್ನಿಸಿದರು. ತರುಣ್ ವಿಜಯ್ ಒಬ್ಬ ‘ಅಸಾಮಾನ್ಯ’ ವ್ಯಕ್ತಿ ಎಂದು ಹೇಳಿದ ಖರ್ಗೆ, ಇವರು ರಾಜ್ಯ ಸಭೆಯ ಮಾಜಿ ಸದಸ್ಯ. ಅಲ್ಲದೆ ಬಿಜೆಪಿ ಸಿದ್ಧಾಂತದ ಬಗ್ಗೆ ಹಲವಾರು ಕೃತಿಗಳನ್ನು ಬರೆದವರು. ಇವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸರಕಾರ ತಿಳಿಸಬೇಕು ಎಂದು ಆಗ್ರಹಿಸಿದರು. ವಿಜಯ್ ಹೇಳಿಕೆ ದೇಶದ ಐಕ್ಯತೆಗೆ ಒಂದು ಬೆದರಿಕೆಯಾಗಿದೆ ಎಂದ ಖರ್ಗೆ, ನೀವು ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದೀರಿ ಎಂದು ಸರಕಾರವನ್ನು ದೂಷಿಸಿದರು. ಈ ರೀತಿಯ ಘಟನೆ ಮುಂದುವರಿದರೆ ಆಗ ರಾಜ್ಯಗಳು ಸ್ವಾತಂತ್ರಕ್ಕಾಗಿ ಒತ್ತಾಯಿಸುವ ಪರಿಸ್ಥಿತಿ ಬರಬಹುದು . ಇದು ಸರಕಾರದ ಮನೋಭಾವವನ್ನು ಸೂಚಿಸುತ್ತದೆ ಎಂದ ಖರ್ಗೆ, ವಿಜಯ್ ಹೇಳಿಕೆಯನ್ನು ಖಂಡಿಸಿದರು. ರಾಷ್ಟ್ರವನ್ನು ವಿಭಜಿಸುವ , ರಾಷ್ಟ್ರವಿರೋಧಿ ಹೇಳಿಕೆಯನ್ನು ನೀಡಿರುವ ತರುಣ್ ವಿಜಯ್ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಆಗ್ರಹಿಸಿದರು.
ಹೇಳಿಕೆ ನೀಡಿದವರು ಈಗಾಗಲೇ ಕ್ಷಮಾಪಣೆ ಕೇಳಿರುವ ಕಾರಣ ಈ ವಿಷಯದ ಬಗ್ಗೆ ಯಾವುದೇ ಪ್ರಶ್ನೆ ಎತ್ತುವ ಅಗತ್ಯವಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದಾಗ ವಿಪಕ್ಷದ ಸದಸ್ಯರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಇದು ನ್ಯಾಯಾಲಯವಲ್ಲ . ಸದನ ಎಂಬುದು ನೆನಪಿರಲಿ ಎಂದು ವಿಪಕ್ಷ ಸದಸ್ಯರನ್ನುದ್ದೇಶಿಸಿ ನುಡಿದರು.
ಸದನ ಮರು ಸಮಾವೇಶಗೊಂಡಾಗ ಪ್ರತಿಭಟನಾ ನಿರತ ವಿಪಕ್ಷೀಯರನ್ನು ಸಮಾಧಾನ ಪಡಿಸಲು ಯತ್ನಿಸಿದ ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್, ಖರ್ಗೆಯವರೇ, ದಯವಿಟ್ಟು ಮನಸ್ತಾಪ ಸೃಷ್ಠಿಸಲು ಯತ್ನಿಸಬೇಡಿ. ಕಾಂಗ್ರೆಸ್ ಪಕ್ಷದವರು ್ಷ ವೈಮನಸ್ಯ ಹುಟ್ಟಿಸಲು ಯತ್ನಿಸಬಾರದು. ಏಕ ಭಾರತ, ಮಹಾನ್ ಭಾರತ ಎಂದು ಹೇಳಿದರು.
ಇದಕ್ಕೂ ಮುನ್ನ ಪ್ರಶ್ನೋತ್ತರ ಅವಧಿಯಲ್ಲಿ , ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ಅನುವು ಮಾಡಿಕೊಡುವಂತೆ ಸಚಿವ ಅನಂತಕುಮಾರ್ ವಿಪಕ್ಷದ ಸದಸ್ಯರನ್ನು ಒತ್ತಾಯಿಸಿದರು. ಸಚಿವೆ ಕೂಡಾ ದಕ್ಷಿಣ ಭಾರತದಿಂದ ಬಂದವರು ಎಂಬ ಅನಂತ್ಕುಮಾರ್ ಅವರ ವಿಶ್ಲೇಷಣೆಯಿಂದ ಅತೃಪ್ತರಾದ ಕಾಂಗ್ರೆಸ್ ಮತ್ತು ಎಡಪಕ್ಷಗಳೂ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಘೋಷಣೆ ಕೂಗತೊಡಗಿದಾಗ ಸ್ಪೀಕರ್ ಕಲಾಪವನ್ನು ಮುಂದೂಡಿದರು.
ಪ್ರಶ್ನೋತ್ತರ ಅವಧಿಯಲ್ಲೂ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಮುಂದುವರಿಸಿದರು. ‘ಮೋದಿ ಸರಕಾರ ಉತ್ತರಿಸಬೇಕು.., ದೇಶದ ವಿಭಜನೆ ಆಗಲು ಬಿಡುವುದಿಲ್ಲ.., ಎಫ್ಐಆರ್ ದಾಖಲಾಗಲಿ ’ ಎಂಬ ಘೋಷಣೆ ಮುಂದುವರಿದಾಗ ಸ್ಪೀಕರ್ ಸದನವನ್ನು 20 ನಿಮಿಷ ಮುಂದೂಡಿದರು.