ರೋಣದಲ್ಲಿ ಕೊಳವೆ ಬಾವಿಗೆ ಬಿದ್ದು ಇಬ್ಬರು ಕಾರ್ಮಿಕರು ಸಾವು

Update: 2017-04-12 09:07 GMT

ರೋಣ, ಎ.12:ಕೊಳವೆ ಬಾವಿಯ ಕೇಸಿಂಗ್ ಪೈಪು ತೆಗೆದು ರೀ ಬೋರ್ ಮಾಡಿಸಲು ಸಿದ್ದತೆ ನಡೆಸುತ್ತಿದ್ದಾಗ   ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ  ಸವಡಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.

ಸವಡಿ ಗ್ರಾಮದ ಕಾರ್ಮಿಕರಾದ ಮೇಸ್ತ್ರಿಬಸವರಾಜ್‌ ಮತ್ತು ಜಮೀನು ಮಾಲಕರಾದ ಶಂಕರಪ್ಪ ಬಾಣದ್  ಅವರು ಕೊಳವೆ ಬಾವಿಯೊಳಗೆ ಸಿಲುಕಿಕೊಂಡಿದ್ದರು.ಸತತ ಕಾರ್ಯಾಚರಣೆಯ ಮೂಲಕ ಮಣ್ಣಿನಡಿ ಸಿಲುಕಿಕೊಂಡಿರುವ ಜಮೀನು ಮಾಲಕರಾದ ಶಂಕರಪ್ಪ ಬಾಣದ್ ಅವರ  ದೇಹವನ್ನು ಪತ್ತೆಹಚ್ಚಲಾಗಿದ್ದು, ಅವರಿಬ್ಬರೂ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ಕಳೆದ ಮೂರು ದಿನಗಳಿಂದ  ರೀಬೋರ್  ಮಾಡಲು  ಸಿದ್ದತೆ ನಡೆಸಲಾಗುತ್ತಿದ್ದು, ಇಂದು ಬೆಳಗ್ಗೆ ಕಾಮಗಾರಿಯ ಪರಿಶೀಲನೆಗೆ  ಮೇಸ್ತ್ರಿ ಬಸವರಾಜ್‌ ಮತ್ತು ಜಾಗದ ಮಾಲಕ ಶಂಕರಪ್ಪ   ತೆರಳಿದ್ದಾಗ   ಮಣ್ಣು ಕುಸಿದು ಇಬ್ಬರು ಕೊಳವೆ ಬಾವಿಯೊಳಗೆ ಬಿದ್ದಿದ್ದರು. 

ಸುಮಾರು ನಲುವತ್ತು ಅಡಿ ಆಳದಲ್ಲಿ ಸಿಲುಕಿಕೊಂಡಿರುವ ಇಬ್ಬರನ್ನು ಹೊರತೆಗೆಯಲು  ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯ ತಹಶೀಲ್ದಾರರ ನೇತೃತ್ವದಲ್ಲಿ ಸತತ 4 ಗಂಟೆಗಳ ಕಾರ್ಯಾಚರಣೆ ನಡೆಸಲಾಗಿತ್ತು.

ಶಂಕರಪ್ಪ ಜಮೀನಿನಲ್ಲಿರುವ  ಸುಮಾರು ಇನ್ನೂರು ಅಡಿ ಆಳದ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿದ್ದು, ರೀಬೋರ್ ಮಾಡಿಸಲು  ಕೇಸಿಂಗ್‌ ಪೈಪ್‌ ತೆಗೆದು  ರೀಬೋರ್ ಮಾಡುವ ತಯಾರಿಯಲ್ಲಿದ್ದಾಗ ದಿಢೀರನೆ ಮಣ್ಣು ಕುಸಿದು ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ನಲುವತ್ತು ಅಡಿ ಆಳದಲ್ಲಿ ಮಣ್ಣಿನಡಿ ಸಿಲುಕಿಕೊಂಡಿದ್ದರು.ಅವಘಡ ಸಂಭವಿಸಿದ ಸ್ಥಳದಲ್ಲಿ ಬಸವರಾಜ್‌ ಮತ್ತು  ಶಂಕರಪ್ಪ ಬಾಣದ್ ಅವರ ಸಂಬಂಧಿಕರ  ಆಕ್ರಂದನ ಮುಗಿಲು ಮುಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News