ಸಿದ್ದರಾಮಯ್ಯನವರೇ, ಅನಿವಾಸಿ ಭಾರತೀಯರ ಸರ್ಕಾರಿ ಸಂಘಟನೆ ಪಟ್ಟಭದ್ರರು, ಸಂಘಪರಿವಾರದ ಸಂಚಿಗೆ ಬಲಿಯಾಗದಂತೆ ತಡೆಯಿರಿ

Update: 2017-04-22 10:59 GMT

ಗಲ್ಫ್ ಕನ್ನಡಿಗರ ಅನೇಕ ವರ್ಷಗಳ ಆಗ್ರಹಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ಮೊಹರು ಒತ್ತಿದ್ದಾರೆ. ಗಲ್ಫ್‌ನಲ್ಲಿ ದುಡಿಯುವ ಪ್ರವಾಸಿಗಳು ಆರ್ಥಿಕ ಸಂಕಷ್ಟದಿಂದ ತವರಿಗೆ ಮರಳಿದರೆ ಕೇರಳದ ಮಾದರಿಯಲ್ಲೇ ಸ್ವಉದ್ಯೋಗಕ್ಕೆ ಆರ್ಥಿಕ ಸಾಲ ನೀಡುವುದು ಹಾಗೂ ಅವರಿಗೆ ಉದ್ದಿಮೆ ಸ್ಥಾಪಿಸಲು ತರಬೇತಿ ನೀಡುವ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ. ಗಲ್ಫ್ ಕನ್ನಡಿಗರ ಕಷ್ಟವನ್ನು ಅರ್ಥ ಮಾಡಿಕೊಂಡು ಅದನ್ನು ಪರಿಹರಿಸುವ ಪ್ರಯತ್ನ ಮಾಡಿರುವ ಸಿಎಂ ಸಿದ್ದರಾಮಯ್ಯರಿಗೆ, ಸಚಿವ ಯು.ಟಿ.ಖಾದರ್ ಅವರಿಗೆ, ಇತರ ಜನಪ್ರತಿನಿಧಿಗಳಿಗೆ, ಕರ್ನಾಟಕ ಎನ್.ಆರ್.ಐ. ಫೋರಂ ಮತ್ತು ಸಹಕರಿಸಿದ ಎಲ್ಲರಿಗೂ ನನ್ನ ಮನದಾಳದ ಅಭಿನಂದನೆಗಳು.

 ಈ ಹಕ್ಕೊತ್ತಾಯವನ್ನು ಎಂದಿನಿಂದಲೂ ಮಂಡಿಸುತ್ತಾ, ಅದಕ್ಕಾಗಿ ಹಲವು ಬಾರಿ ಬೆಂಗಳೂರಿಗೆ ನಿಯೋಗ ಕರೆದೊಯ್ದು ಯು.ಟಿ.ಖಾದರ್ ಅವರ ಮುಖಾಂತರ ಕಷ್ಟಪಟ್ಟು ಶ್ರಮಿಸಿದ ಗಲ್ಫ್ ರಾಷ್ಟ್ರಗಳ ಹಲವಾರು ಕರಾವಳಿ ಕರ್ನಾಟಕದ ಸಾಮಾಜಿಕ ಸಂಘಟನೆಗಳಿಗೆ ಈ ಯೋಜನಾ ಘೋಷಣೆಯ ಮುಖ್ಯ ಶ್ರೇಯ ಸಲ್ಲಬೇಕು.

ಆದರೆ ಈಗ ಅಚ್ಚರಿದಾಯಕ ಮತ್ತು ಅಷ್ಟೇ ಆಘಾತಕಾರಿ ಬೆಳವಣಿಗೆಯೊಂದು ದುಬೈಯಲ್ಲಿ ಹೆಡೆಬಿಚ್ಚುತ್ತಾ ಇದೆ. ಇಲ್ಲಿನ ಕೆಲವು ಪಟ್ಟಭದ್ರರು, ಶ್ರೀಮಂತ ಉದ್ಯಮಿಗಳು ಕರ್ನಾಟಕದ ಎನ್.ಆರ್.ಐ. ಫೋರಂನ ಡೆಪ್ಯುಟಿ ಚೆಯರ್‌ಮೆನ್ ಅವರ ಸಮ್ಮತಿಯೊಂದಿಗೆ ಯು.ಎ.ಇ. ವ್ಯಾಪ್ತಿಯ ಎನ್.ಆರ್.ಐ. ಫೋರಂ ಅನ್ನು ಅತ್ಯಂತ ಗುಪ್ತವಾಗಿ ಸ್ಥಾಪಿಸಿ ಅದರಲ್ಲಿ ತಮ್ಮದೇ 25 ಚೇಲಾಗಳನ್ನು ತುಂಬಿದ್ದಾರೆ.ಸರಕಾರ ಈ ನೂತನ ಯೋಜನೆಯನ್ನು ಘೋಷಿಸುವಲ್ಲಿ ಶ್ರಮಿಸಿದ ಕರಾವಳಿ ಕರ್ನಾಟಕದ ಯಾವುದೇ ಸಾಮಾಜಿಕ ಸಂಘಟನೆಗಳಿಗೆ ಮಾಹಿತಿ ನೀಡದೇ, ಅವರಿಗೆ ಯಾವುದೇ ಪ್ರಾತಿನಿಧ್ಯ ನೀಡದೆ ಕೇವಲ ಹಾರ್ಡ್‌ಕೋರ್ ಬಿಜೆಪಿ ಬೆಂಬಲಿಗರನ್ನು ಮಾತ್ರ ಇದರ ಪದಾಧಿಕಾರಿಗಳಾಗಿ ನೇಮಿಸಿದ್ದಾರೆ.

ಇನ್ನೂ ಆಶ್ಚರ್ಯಕರ ವಿಷಯವೇನೆಂದರೆ ಇಲ್ಲಿನ ಕನ್ನಡಿಗರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಕರಾವಳಿ ಕರ್ನಾಟಕದ ಒಂದು ಸಮುದಾಯವನ್ನು ಮತ್ತು ಅವರು ಪ್ರತಿನಿಧಿಸುವ ಹಲವಾರು ಸಾಮಾಜಿಕ ಸೇವಾ ಸಂಘಟನೆಗಳನ್ನುಸಂಪೂರ್ಣವಾಗಿಕಡೆಗಣಿಸಲಾಗಿದೆ. ಅದರಲ್ಲೂ ಅಬುಧಾಬಿಗೆ (ಇಲ್ಲಿನ ಒಂದು ಸಾಮುದಾಯಿಕ ಸಂಘಟನೆ ಈ ಹಕ್ಕೊತ್ತಾಯದ ಮುಂಚೂಣಿಯಲ್ಲಿತ್ತು) ಒಂದೇ ಒಂದು ಪ್ರಾತಿನಿಧ್ಯ ನೀಡಿಲ್ಲ!

ಎನ್.ಆರ್.ಐ. ಫೋರಂ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಎ.28ರಂದು ದುಬೈಯಲ್ಲಿ ನಿರ್ವಹಿಸಲಿದ್ದಾರೆ. ಆದರೆ ಅವರಿಗೆ ಕರ್ನಾಟಕ ಎನ್.ಆರ್.ಐ. ಫೋರಂ, ಯುಎಇ ಇದರ ಸ್ಥಾಪನೆಯ ಹಿಂದೆ ನಡೆಯುತ್ತಿರುವ ಕೋಮು ರಾಜಕೀಯ ಷಡ್ಯಂತ್ರದ ಅರಿವಿಲ್ಲದಂತೆ ಕಾಣುತ್ತಿದೆ. ಈ ಬಗ್ಗೆ ಸರಿಯಾದ ಮಾಹಿತಿ ಸಿದ್ದರಾಮಯ್ಯ ಅವರಿಗೆ ತಲುಪಿಲ್ಲ. ಇಲ್ಲವಾಗಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರವನ್ನು ಖಂಡ ತುಂಡವಾಗಿ ವಿರೋಧಿಸುವ, ಮುಲಾಜಿಲ್ಲದೆ ಅವರನ್ನು ಟೀಕಿಸುವ ಸಿದ್ದರಾಮಯ್ಯ ಅವರು ದುಬೈಗೆ ಬಂದು ಸಂಘ ಪರಿವಾರದವರೇ ತುಂಬಿರುವ ಸಂಘಟನೆ (ಅದೂ ತಮ್ಮದೇ ಅಧ್ಯಕ್ಷತೆಯ ಸರಕಾರಿ ಸಂಘಟನೆ!)ಯ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಲು ಹೇಗೆ ಸಾಧ್ಯ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಅಪಾರ ಅಭಿಮಾನ ಹಾಗೂ ಅಷ್ಟೇ ಭರವಸೆ ಇಟ್ಟುಕೊಂಡು ನಾವು ವಾಸ್ತವ ವಿಷಯವನ್ನು ಈ ಮೂಲಕ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ತಕ್ಷಣ ತಾವು ಗಮನಹರಿಸಿ ಆಗಿರುವ ಪ್ರಮಾದವನ್ನು ಸರಿಪಡಿಸಲು ಸೂಚಿಸುತ್ತೀರಿ ಎಂದು ಆಶಿಸುತ್ತೇವೆ.

ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾದ ಸಿದ್ದರಾಮಯ್ಯ ಈ ಗಂಭೀರ ವಿಷಯದ ಕುರಿತು ಗಮನಹರಿಸಿ ಎಲ್ಲಾ ಕನ್ನಡಿಗರಿಗೂ ಎನ್.ಆರ್.ಐ. ಫೋರಂನಲ್ಲಿ ಸಮಾನ ಪ್ರಾತಿನಿಧ್ಯ ದೊರಕಿಸಿಕೊಡಲು ಕರ್ನಾಟಕದ ಎನ್.ಆರ್.ಐ. ಫೋರಂನ ಡೆಪ್ಯುಟಿ ಚೆಯರ್‌ಮೆನ್ ಅವರಿಗೆ ಆದೇಶಿಸಬೇಕು ಎಂಬುದು ನನ್ನ ಕಳಕಳಿಯ ವಿನಂತಿ.

2010ರಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದ ವೇಳೆ ದುಬೈಯಲ್ಲಿ ನಡೆದ ಬ್ಯಾರಿ ಸಮಾರಂಭಕ್ಕೆ ಆಗಮಿಸಿದ್ದರು. ಆ ವೇಳೆ ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಹೃದಯಾಂತರಾಳದಿಂದ ಗಂಟಲು ಬಿರಿಯುವಂತೆ ಘೋಷಣೆ ಕೂಗಿದ ಸಾವಿರಾರು ಬ್ಯಾರಿ ಯುವಕರಲ್ಲಿ ನಾನು ಕೂಡಾ ಇದ್ದೆ. ನಿಮ್ಮ ಮೇಲಿರುವ ಈ ಅಭಿಮಾನವನ್ನು ಇನ್ನು ಮುಂದೆಯೂ ಉಳಿಸಿಕೊಂಡು ಹೋಗುವಂತೆ ಮುಖ್ಯಮಂತ್ರಿ ಸಹಕರಿಸಬೇಕು. ಒಂದು ಸಮುದಾಯದ ಜನರಿಗೆ ಆಗುತ್ತಿರುವ ಈ ಅನ್ಯಾಯವನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಳ್ಳುತ್ತೇವೆ.

-ಸಲಾಂ ಬಾವ, ದುಬೈ

Writer - -ಸಲಾಂ ಬಾವ, ದುಬೈ

contributor

Editor - -ಸಲಾಂ ಬಾವ, ದುಬೈ

contributor

Similar News