ಪೇಜಾವರ ಶ್ರೀ ಹೇಳಿಕೆಗೆ ಮುಸ್ಲಿಮ್ ಒಕ್ಕೂಟ ಖಂಡನೆ

Update: 2017-04-24 18:35 GMT

ಉಡುಪಿ, ಎ.24: ಬಾಬರಿ ಮಸೀದಿ ಧ್ವಂಸದಂತಹ ಹೇಯ ಕೃತ್ಯವನ್ನು ಹೋರಾಟ ಎಂಬುದಾಗಿ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ನೀಡಿರುವ ಹೇಳಿಕೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಬಾಬರಿ ಮಸೀದಿ ಧ್ವಂಸ ಕೃತ್ಯವನ್ನು ಸಮರ್ಥಿಸುವ ಮೂಲಕ ಪೇಜಾವರ ಸ್ವಾಮೀಜಿ ತಮ್ಮ ನೈತಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಒಂದು ಧರ್ಮದ ಅತ್ಯಂತ ಹಿರಿಯ ಸ್ವಾಮೀ ಜಿಯಾಗಿ, ಇನ್ನೊಂದು ಧರ್ಮದ ಆರಾಧನಾ ಕೇಂದ್ರವನ್ನು ಧ್ವಂಸ ಮಾಡಿರುವುದನ್ನು ಸಮರ್ಥಿಸಿಕೊಳ್ಳುವುದು ಪೇಜಾವರ ಸ್ವಾಮೀಜಿಗೆ ಭೂಷಣ ಅಲ್ಲ ಎಂದು ಒಕ್ಕೂಟ ಟೀಕಿಸಿದೆ.

ಮುಸ್ಲಿಮ್ ಸಮುದಾಯದ ಸಮಾರಂಭಗಳಲ್ಲಿ ಭಾಗವ ಹಿಸುವ ಪೇಜಾವರ ಶ್ರೀ, ಈ ಘಟನೆ ಆಕಸ್ಮಿಕ, ನಾನು ಎಲ್ಲ ಧರ್ಮದವರೊಂದಿಗೆ ಸ್ನೇಹಮಯಿಯಾಗಿದ್ದೇನೆ ಎಂಬುದಾಗಿ ಈ ಹಿಂದೆ ಹಲವಾರು ಬಾರಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಅದಕ್ಕೆ ತದ್ವಿರುದ್ಧ ಹೇಳಿಕೆ ನೀಡುವ ಮೂಲಕ ಸಮಯ ಸಾಧಕತನವನ್ನು ತೋರಿಸುತ್ತಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.

ಇದು ಸ್ವಾಮೀಜಿಯವರಿಗೆ ದೇಶದ ಸಂವಿಧಾನ ಮತ್ತು ಪ್ರಜಾ ಪ್ರಭುತ್ವದ ವೌಲ್ಯಗಳ ಬಗ್ಗೆ ತಾತ್ಸಾರ ಭಾವ ಇರುವುದನ್ನು ಸೂಚಿಸುತ್ತದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News