ಭಾರತೀಯ ಯೋಧರ ದೇಹ ಛಿದ್ರ;ಪಾಕ್ ಪಡೆಯ ಪೈಶಾಚಿಕ ಕೃತ್ಯ
ಹೊಸದಿಲ್ಲಿ, ಮೇ 1: ಅಂತಾರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಭಾರತದ ಇಬ್ಬರು ಯೋಧರ ದೇಹವನ್ನು ಪಾಕ್ ಸೇನೆ ತುಂಡರಿಸಿ ಪೈಶಾಚಿಕ ಕೃತ್ಯ ನಡೆಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಕೃಷ್ಣಾಘಾಟಿ ಸೆಕ್ಟರ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಭಾರತದ ಗಡಿಯೊಳಗೆ ನುಸುಳಿದ ಪಾಕಿಸ್ತಾನ ಸೇನೆಯ ಯೋಧರು ಗುಂಡಿನ ದಾಳಿ ವೇಳೆ ಸಾವನ್ನಪ್ಪಿದ್ದ ಯೋಧರಿಬ್ಬರ ದೇಹವನ್ನು ಛಿದ್ರಗೊಳಿಸಿ ಅಮಾನವೀಯತೆ ಮೆರೆದಿದ್ದಾರೆ.
ಪಾಕ್ ದಾಳಿಯಲ್ಲಿ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ ಪರಮ್ಜಿತ್ ಸಿಂಗ್ ಹಾಗೂ ಬಿಎಸ್ಎಫ್ ಹೆಡ್ಕಾನ್ಸ್ಟೆಬಲ್ ಪ್ರೇಮ್ ಸಾಗರ್ ಹುತಾತ್ಮರಾಗಿದ್ದು, ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ.
ಮಾರ್ಟರ್, ಶೆಲ್ ಮತ್ತು ಮಷಿನ್ ಗನ್ ಗಳ ಮೂಲಕ ಭಾರತದ ಯೋಧರ ಶಿಬಿರದ ಮೇಲೆ ದಾಳಿ ಪಾಕ್ ಸೇನೆ ದಾಳಿ ನಡೆಸಿದೆ. ಭಾರತದ ಸೇನೆಯು ತಿರುಗೇಟು ನೀಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ ಎಂದು ತಿಳಿದು ಬಂದಿದೆ.
ಅಮಾನವೀಯ ಕೃತ್ಯಕ್ಕೆ ಖಂಡನೆ: ಅಪ್ರಚೋದಿತ ದಾಳಿಯಲ್ಲಿ ಹುತಾತ್ಮರಾದ ಯೋಧರ ದೇಹವನ್ನು ತುಂಡರಿಸಿರುವ ಪಾಕ್ ಸೇನೆಯ ಪೈಶಾಚಿಕ ಕೃತ್ಯವನ್ನು ಖಂಡಿಸಿರುವ ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಯುದ್ಧದ ಸಂದರ್ಭದಲ್ಲೂ ಇಂತಹ ಅಮಾನವೀಯ ಕೃತ್ಯ ನಡೆದಿಲ್ಲ. ಭಾರತದ ವೀರ ಯೋಧರ ಪ್ರಾಣ ತ್ಯಾಗವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ. ಯೋಧರ ಶಕ್ತಿ, ಸಾಮರ್ಥ್ಯದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.